ವೇದಾವತಿ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ
ಚಿತ್ರದುರ್ಗ, ನವೆಂಬರ್ 8: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲು ಅನುಮೋದನೆ ನೀಡಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಆಲೂರು ಹಾಗೂ ಪಿಟ್ಲಾಲಿ ಗ್ರಾಮಗಳ ಮಧ್ಯೆ ವೇದಾವತಿ ನದಿಗೆ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ 15.66 ಕೋಟಿ ರೂಪಾಯಿ ವೆಚ್ಚದ ವಿವರವಾದ ಯೋಜನಾ ವರದಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸೋಮವಾರ ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಆಲೂರು ಹಾಗೂ ಪಿಟ್ಲಾಲಿ ಗ್ರಾಮಗಳ ಮಧ್ಯೆ ಬ್ರಿಡ್ಜ್ ಕಂ ಬ್ಯಾರೇಜ್ನ ನಿರ್ಮಾಣದಿಂದಾಗಿ ಎರಡು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮರು ಪೂರ್ಣಗೊಳಿಸಲು ಮತ್ತು ಕುಡಿಯುವ ನೀರನ್ನು ಒದಗಿಸಲು ಮತ್ತು ಆಲೂರು, ಪಿಟ್ಲಾಲಿ, ನಂದಿಹಳ್ಳಿ, ಆದಿವಾಲ, ಪಟ್ರೆಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಸಹಾಯಕವಾಗುತ್ತದೆ ಎಂಬ ಉದ್ದೇಶದಿಂದ ಈ ಯೋಜನೆಗೆ ಅನುಮೋದನೆ ನೀಡಿದ್ದಾರೆ ಎನ್ನಲಾಗಿದೆ.
ಶಾಸಕಿಗೆ ಸಿಹಿ ನೀಡಿ, ಸನ್ಮಾನಿಸಿದ ರೈತರು
ಹಿರಿಯೂರು ತಾಲ್ಲೂಕಿನ ಪಿಟ್ಲಾಲಿ ಹಾಗೂ ಆಲೂರು ಬ್ರಿಡ್ಜ್ ಕಂ ಬ್ಯಾರೇಜ್ನ ಯೋಜನೆಯನ್ನು ಸಚಿವ ಸಂಪುಟದ ಸಭೆಯಲ್ಲಿ ಮಂಜೂರು ಮಾಡಲು ಕಾರಣಕರ್ತರಾದ ಹಿರಿಯೂರು ಕ್ಷೇತ್ರದ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ಗೆ ರೈತ ಮುಖಂಡರು ಸಿಹಿ ತಿನ್ನಿಸಿ ಸನ್ಮಾನಿಸಿದರು.
ಇದೇ ನೀರಾವರಿ ಹೋರಾಟಗಾರ ಕಸವನಹಳ್ಳಿ ರಮೇಶ್ ಮಾತನಾಡಿ, "ಈ ಅನುಮೋದನೆಯಿಂದ ಈ ಭಾಗದ ರೈತರಿಗೆ ಹಾಗೂ ಸಾರ್ವಜನಿಕರಲ್ಲಿ ತುಂಬ ಸಂತೋಷ ಉಂಟಾಗಿದೆ. ಇದಕ್ಕೆ ಬಹಳ ದಿನದಿಂದಲೂ ರೈತರು ಕಾಯುತ್ತಿದ್ದರು. ಸರ್ಕಾರ ಹಾಗೂ ಶಾಸಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ," ಎಂದರು.
"ವೇದಾವತಿ ನದಿಪಾತ್ರದ ಪಿಟ್ಲಾಲಿ, ಆಲೂರು, ಆದಿವಾಲ, ಪಟ್ರೆಹಳ್ಳಿ, ಎಂ.ಜಿ. ಕಾಲೋನಿ, ಬಬ್ಬೂರು ಫಾರಂ ಗ್ರಾಮಗಳಿಗೆ ಸೇರಿದ ಜಮೀನುಗಳಿಗೆ ಹಾಗೂ ಕುಡಿಯುವ ನೀರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅಂತರ್ಜಲ ವೃದ್ಧಿಯಾಗುತ್ತದೆ. ಅದರಲ್ಲೂ ವಿಶೇಷವಾಗಿ ತೋಟಗಾರಿಕಾ ಬೆಳೆಗಳು ಸಮೃದ್ಧಿಯಿಂದ ಕೂಡಲು ಅನುಕೂಲವಾಗುತ್ತದೆ. ಇದೊಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ವಿಷಯ ಮತ್ತು ದಿನ," ಎಂದು ಹೇಳಿದರು.
"2018ರ ತಾಲೂಕಿನಲ್ಲಿ ನೀರಿನ ಬವಣೆಯಿಂದ ಸುಮಾರು 4 ಲಕ್ಷಕ್ಕೂ ಅಧಿಕ ತೆಂಗು, ಅಡಿಕೆ ಇತ್ಯಾದಿ ಬೆಳೆಗಳನ್ನು ಕಳೆದುಕೊಂಡಿದ್ದರು. ಕುಡಿಯುವ ನೀರಿಗಾಗಿ 800 ರೂಪಾಯಿ ಕೊಟ್ಟು ಒಂದು ಟ್ರ್ಯಾಕ್ಟರ್ ನೀರನ್ನು ಖರೀದಿಸಿದ್ದ ಜನತೆ ಇತ್ತೀಚೆಗೆ ನಿರಾಳವಾಗಿದೆ."
"ವೇದಾವತಿ ನದಿ ಪಾತ್ರದ ಕಸವನಹಳ್ಳಿ, ಹಳೆಯಳನಾಡು, ಕೂಡ್ಲಹಳ್ಳಿ, ತೊರೆ ಓಬನಹಳ್ಳಿ, ಶಿಡ್ಲಯ್ಯನಕೋಟೆ, ಹೊಸಳ್ಳಿ ಬ್ಯಾರೇಜ್ಗಳು ಸೇರಿದಂತೆ ಈಗ ಹೊಸದಾಗಿ ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ 15.66 ಕೋಟಿ ವೆಚ್ಚದ ಇದು ನೀರಾವರಿ ಯೋಜನೆಯ ಜೊತೆಯಲ್ಲಿ ಕುಡಿಯುವ ನೀರು ಹಾಗೂ ಪಿಟ್ಲಾಲಿ ಮತ್ತು ಆಲೂರು ಮಧ್ಯದ ಸುಮಾರು ಹತ್ತು ಕಿಲೋಮೀಟರ್ ಅಂತರವನ್ನು ಕೇವಲ ಎರಡು ಕಿಲೋಮೀಟರಿಗೆ ಕಡಿಮೆ ಮಾಡಿದೆ. ಸೇತುವೆ ಮತ್ತು ನೀರಿನ ಬ್ಯಾರೇಜ್ ಕೃಷಿಯ ಜೊತೆಯಲ್ಲಿ ಜನರ ಸಂಬಂಧಗಳನ್ನು ಸಹ ಬೆಸೆಯುವ ಯೋಜನೆಯಾಗಿದೆ."
ಇದಕ್ಕೆ ಕಾರಣರಾದ ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಜೊತೆಯಲ್ಲಿ ನಿರಂತರ ಸಂಪರ್ಕ ಸಾಧಿಸಿ ಒತ್ತಡ ಹಾಕಿ, ಯೋಜನೆ ಜಾರಿ ಜಾರಿಯಾಗುವಲ್ಲಿ ವಿಶೇಷ ಪ್ರಯತ್ನ ಮಾಡಿರುವುದಕ್ಕೆ ತಾಲೂಕಿನ ಎಲ್ಲ ಜನರ ಪರವಾಗಿ ಅನಂತ ಅನಂತ ಧನ್ಯವಾದಗಳು ಎಂದು ತಿಳಿಸಿದರು.