25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳ ಗೆಲುವು: ಆರ್. ಅಶೋಕ್
ಚಿತ್ರದುರ್ಗ, ಅಕ್ಟೋಬರ್ 23: ರಾಜ್ಯದಲ್ಲಿ ನಡೆಯುತ್ತಿರುವ ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಈಗಾಗಲೇ ಮೂರು ಪಕ್ಷಗಳ ಮುಖಂಡರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
"ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸುಮಾರು 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ," ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಬೆಂಗಳೂರಿನಿಂದ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಹೋಗುವ ಮಾರ್ಗ ಮಧ್ಯೆ ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಉಪಹಾರ ಸೇವಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ರಾಜ್ಯದಲ್ಲಿ ದಿನ ದಿನಕ್ಕೂ ಕಾಂಗ್ರೆಸ್ ಪಕ್ಷದ ಪ್ರಭುತ್ವ ಕಡಿಮೆಯಾಗುತ್ತಿದೆ ಎಂದು ಹೇಳಿದರು.
"ಭಾರತೀಯ ಜನತಾ ಪಕ್ಷದವರು ಉಪ ಚುನಾವಣೆಯಲ್ಲಿ ಹಣ ಹಂಚುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ಆದರೆ ಚುನಾವಣೆಯ ನಂತರ ಸೋಲಿಗೆ ಈಗಲೇ ವೇದಿಕೆ ಸಿದ್ಧತೆ ಮಾಡಿಕೊಂಡು ಕಾಂಗ್ರೆಸ್ ಪಕ್ಷ ಒಂದು ರೀತಿಯಲ್ಲಿ ಸೋಲನ್ನು ಒಪ್ಪಿಕೊಂಡಿದೆ," ಎನ್ನುವ ಮೂಲಕ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದರು.
"ಕಳೆದ ಅಸಂಬ್ಲಿ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಏಟು- ಎದುರೇಟು ನೀಡಿದ್ದೇವೆ, ಅದನ್ನು ಅವರಿಗೆ ತಡೆದುಕೊಳ್ಳಲಾಗಲಿಲ್ಲ," ಎಂದು ವ್ಯಂಗ್ಯವಾಡಿದರು.
"ಮಾಜಿ ಸಿಎಂ ಸಿದ್ದರಾಮಯ್ಯ ಶಾದಿ ಭಾಗ್ಯವನ್ನು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ನೀಡಿದ್ದಾರೆ ಹೊರತು ಬೇರೆ ದಲಿತರಿಗೆ, ಹಿಂದುಳಿದವರಿಗೆ ಏಕೆ ನೀಡಲಿಲ್ಲ? ಎಂದು ಪ್ರಶ್ನೆ ಮಾಡಿದರು. ಇತ್ತ ಧರ್ಮಗಳನ್ನು, ಜಾತಿಗಳನ್ನು ಹೊಡೆದು ಎರಡು ಭಾಗ ಮಾಡುವುದರಲ್ಲಿ ಸಿದ್ದರಾಮಯ್ಯನವರದು ಎತ್ತಿದ ಕೈ. ಇದರ ಪರಿಣಾಮವೇ 125 ಸ್ಥಾನದಿಂದ 75 ಸ್ಥಾನಕ್ಕೆ ಕಾಂಗ್ರೆಸ್ ಬಂದು ನಿಂತಿದೆ. ಇದರಿಂದ ಸಿದ್ದರಾಮಯ್ಯನವರ ವರ್ಚಸ್ಸು ಕುಂದಿಹೋಗಿದೆ," ಎಂದು ಸಿದ್ದರಾಮಯ್ಯ ವಿರುದ್ಧ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
"ಇಡೀ ರಾಷ್ಟ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷದ ಅಲೆಯಿದೆ. ಮುಂಬರುವ ಚುನಾವಣೆಯಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ಪರೋಕ್ಷವಾಗಿ ತಿಳಿಸಿದ ಅವರು, ಕಾಂಗ್ರೆಸ್ ಪಕ್ಷ ಒಳಜಗಳದಿಂದ ಹಾಳಾಗುತ್ತಿದೆ," ಎಂದರು.
"ಇನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚುನಾವಣೆ ಬಂದಾಗ ಮಾತ್ರ ಆರ್ಎಸ್ಎಸ್ ನೆನಪಿಗೆ ಬರುತ್ತದೆ. ಏಕೆಂದರೆ ಮುಸ್ಲಿಂ ಮತ ಪಡೆಯವ ಸಲುವಾಗಿ ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ಮಾತನಾಡುತ್ತಾರೆ," ಎಂದು ಹರಿಹಾಯ್ದರು.
"ಆರ್ಎಸ್ಎಸ್ ದೇಶಭಕ್ತ ಸಂಘ, ಈ ಬಗ್ಗೆ ಮಾತನಾಡುವ ಹಕ್ಕು ಕುಮಾರಸ್ವಾಮಿರವರಿಗೆ ಇಲ್ಲ ಎಂದು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು. ಜನರಿಗೆ ಸ್ಪಂದನೆ ನೀಡುವ ಸರಳ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಅಂತವರನ್ನು ಖಾಲಿ ಡಬ್ಬ ಎಂದು ಟೀಕಿಸುತ್ತಾರೆ. ಖಾಲಿ ಡಬ್ಬ ಯಾರು ಎಂಬುದು ಚುನಾವಣೆಯ ಫಲಿತಾಂಶ ಬಂದ ನಂತರ ಗೊತ್ತಾಗುತ್ತದೆ," ಎಂದು ಹೇಳಿದರು.
"ಕಾಂಗ್ರೆಸ್ ಪಕ್ಷದವರು 60 ವರ್ಷಗಳ ಕಾಲ ಝೀರೋ ಟ್ರಾಫಿಕ್ ಆಡಳಿತ ಮಾಡಿದ್ದಾರೆ. ಈಗ ಜನ ಅವರನ್ನು ಝೀರೋ ಮಾಡಿದ್ದಾರೆ. ಈ ಹಿಂದೆ ಪ್ರಧಾನಮಂತ್ರಿಗಳಾಗಿದ್ದ ಮನಮೋಹನ್ ಸಿಂಗ್ರವರು ರಾಜ್ಯಕ್ಕೆ ನೀಡಿದ ಅನುದಾನದ ಮೂರುಪಟ್ಟು ನರೇಂದ್ರ ಮೋದಿಯವರು ರಾಜ್ಯಕ್ಕೆ ನೀಡಿದ್ದಾರೆ. ಈ ಬಗ್ಗೆ ಲೆಕ್ಕ ನೀಡಲು ನಾನು ತಯಾರಿದ್ದೇನೆ," ಎಂದರು.
"ಯಾವುದೇ ಧರ್ಮದ ಬಗ್ಗೆ ನಾವು ಮಾಹಿತಿ ಕಲೆ ಹಾಕುತ್ತಿಲ್ಲ. ಯಾವ ಪಕ್ಷದವರೇ ಇರಲಿ ಎಲ್ಲರಿಗೂ ಒಂದೇ ಕಾನೂನು, ಹಾಗಾಗಿ ಎಲ್ಲರೂ ಕಾನೂನು ಅಡಿಯಲ್ಲಿ ಕೆಲಸ ಮಾಡುತ್ತೇವೆ," ಎಂದು ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿದರು.