ದಲಿತರನ್ನು ರಾಷ್ಟ್ರಪತಿ ಮಾಡಿದ್ದೇವೆ; ಸಿದ್ದರಾಮಯ್ಯಗೆ ಕಟೀಲ್ ತಿರುಗೇಟು
ಚಿತ್ರದುರ್ಗ, ಜುಲೈ 24: ತಾಕತ್ತಿದ್ದರೆ ದಲಿತರನ್ನು ಸಿಎಂ ಮಾಡಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ, "ದಲಿತರನ್ನು ರಾಷ್ಟ್ರಪತಿ ಮಾಡುವ ಮೂಲಕ ಭಾರತೀಯ ಜನತಾ ಪಾರ್ಟಿ ದಲಿತರಿಗೆ ಸ್ಥಾನಮಾನ ಕಲ್ಪಿಸಿದೆ,'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದರು.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, "ಬಿ.ಆರ್. ಅಂಬೇಡ್ಕರ್ಗೆ ಅತಿಹೆಚ್ಚು ಅವಮಾನ ಮಾಡಿರುವುದು ಕಾಂಗ್ರೆಸ್ ಪಕ್ಷ, ಮೊದಲ ಸಚಿವ ಸಂಪುಟದಲ್ಲಿ ನೋವಾಗಿ ಅಂಬೇಡ್ಕರ್ ರಾಜೀನಾಮೆ ನೀಡಿದ್ದರು,'' ಎಂದು ಕಿಡಿಕಾರಿದರು.
"ಅಂಬೇಡ್ಕರ್ ಲೋಕಸಭೆ ಚುನಾವಣೆಗೆ ನಿಂತಾಗ ಸೋಲಿಸಿದರು, ನಂತರ 2ನೇ ಬಾರಿ ಅವರ ಸಹಾಯಕನನ್ನು ಚುನಾವಣೆಗೆ ಎದುರು ನಿಲ್ಲಿಸಿ ಸೋಲಿಸಿದರು. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೂ ಜಾಗ ಕೊಡಲಿಲ್ಲ, ಭಾರತ ರತ್ನವೂ ಕೊಡಲಿಲ್ಲ, ಅಂಬೇಡ್ಕರ್ಗೆ ಭಾರತರತ್ನ ಕೊಟ್ಟಿದ್ದು ನಾವು,'' ಎಂದು ಹೇಳಿದರು.
"ಕಾಂಗ್ರೆಸ್ ಪಕ್ಷ ಜಗಜೀವನ್ ರಾಮ್ರನ್ನು ಪ್ರಧಾನಿ ಮಾಡಲಿಲ್ಲ. ಸಿದ್ದರಾಮಣ್ಣನ ಬಗ್ಗೆ ಇತಿಹಾಸ ಹೇಳಬೇಕೆಂದರೆ, ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದು ಮುಖ್ಯಮಂತ್ರಿ ಆದರು. ಡಾ.ಜಿ. ಪರಮೇಶ್ವರ್ರನ್ನು ಡಿಸಿಎಂ ಸಹ ಮಾಡಲಿಲ್ಲ, ಆದರೆ ಚುನಾವಣೆಯಲ್ಲಿ ಸೋಲಿಸಿದರು, ಎಂದು ಕಾಂಗ್ರೆಸ್ ವಿರುದ್ಧ ಆರೋಪಿಸಿದರು.
"ಇನ್ನು ಮಲ್ಲಿಕಾರ್ಜುನ ಖರ್ಗೆ, ಚಂದ್ರಪ್ಪ, ಧೃವನಾರಾಯಣ ಸೇರಿ ದಲಿತ ಮುಖಂಡರನ್ನು ಸೋಲಿಸಿದ್ದಾರೆ. ಈವತ್ತಿಗೂ ಖರ್ಗೆ, ಪರಮೇಶ್ವರ್ರನ್ನು ಮುಂದಕ್ಕೆ ಬರಲು ಬಿಡಲ್ಲ,'' ಎಂದರು.
"ಬಿಜೆಪಿ ಪಕ್ಷ ಕಡಿಮೆ ಸಮಯ ಅಧಿಕಾರ ನಡೆಸಿದೆ, ಮುಸ್ಲಿಂರಾದ ಅಬ್ದುಲ್ ಕಲಾಂರನ್ನು ರಾಷ್ಟ್ರಪತಿಯಾಗಿ ನಾವು ಮಾಡಿದ್ದೇವೆ. ದಲಿತರಾದ ರಾಮನಾಥ ಕೋವಿಂದ್ರನ್ನು ರಾಷ್ಟ್ರಪತಿ ಮಾಡಲಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ ಗೋವಿಂದ್ ಕಾರಜೋಳರನ್ನು ಡಿಸಿಎಂ ಮಾಡಿದ್ದು, ಅನೇಕಲ್ ವಿಧಾನಸಭೆಯಲ್ಲಿ ಸೋತ ಎ. ನಾರಾಯಣಸ್ವಾಮಿಗೆ ಚಿತ್ರದುರ್ಗದಲ್ಲಿ ಸಂಸದರನ್ನಾಗಿಸಿ, ಕೇಂದ್ರದಲ್ಲಿ ಮಂತ್ರಿ ಮಾಡಿದ್ದೇವೆ,'' ಎಂದರು.
ಇನ್ನು ನನ್ನ ಹೆಸರಿನ ಫೇಕ್ ಆಡಿಯೋ ಪ್ರಕರಣ ತನಿಖೆ ನಡೆಯುತ್ತಿದೆ ಎಂದ ಕಟೀಲ್, "ಸಿದ್ಧರಾಮಯ್ಯ ಸರ್ಕಾರ ಮಾಡಿದಷ್ಟು ಭ್ರಷ್ಟಾಚಾರ ಯಾರೂ ಮಾಡಲು ಸಾಧ್ಯವಿಲ್ಲ. ಸಿದ್ದರಾಮಣ್ಣ ಅರ್ಕಾವತಿ ಪ್ರಕರಣ ಮುಚ್ಚಿ ಹಾಕಿದ್ದಾರೆ,'' ಎಂದು ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದರು.
"ನಮ್ಮಲ್ಲಿ ಮಿತ್ರ ಮಂಡಳಿ, ವಲಸಿಗ ಪದ ಸರಿಯಲ್ಲ, ಬಿಜೆಪಿಯಿಂದ ಶಾಸಕರಾಗಿದ್ದಾರೆ, ಪಕ್ಷದ ಒಂದು ಮಂಡಳಿ ಇರಬೇಕು. ರಾಷ್ಟ್ರೀಯ ನಾಯಕರ ಸೂಚನೆ ಪಾಲಿಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ,'' ಎಂದು ತಿಳಿಸಿದರು.
"ಸಿಎಂ ಯಡಿಯೂರಪ್ಪನವರು ಈಗಾಗಲೇ ನೆರೆ ವೀಕ್ಷಣೆ, ಪರಿಹಾರ ಕಾರ್ಯದಲ್ಲಿ ತೊಡಗಿದ್ದು, ಸಿಎಂ ಬದಲಾವಣೆ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ಗಮನಿಸಿ ಹೇಳುತ್ತಾರೆ,'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸ್ಪಷ್ಟನೆ ನೀಡಿದರು.