ಬಿಜೆಪಿ ಸರ್ಕಾರ ನಿರ್ಜೀವವಾಗಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್
ಚಿತ್ರದುರ್ಗ, ಅಕ್ಟೋಬರ್ 5: "ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸುತ್ತಾರೆ," ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗುಯಿಲಾಳ್ ಟೋಲ್ ಬಳಿ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿ ಅವರಿಂದ ಸನ್ಮಾನ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಸರ್ಕಾರ ವಿಫಲವಾಗಿದ್ದು, ಇದೊಂದು ನಿರ್ಜೀವ ಸರ್ಕಾರವಾಗಿದೆ. ಯಾವ ಪುರುಷಾರ್ಥಕ್ಕೆ ಜನರು ಮತ ನೀಡಬೇಕು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಕ್ಕೆ ಮತ ನೀಡಬೇಕಾ?
"ಅಡುಗೆ ಅನಿಲ ಬೆಲೆ 400 ರಿಂದ 900 ರೂ.ಗೆ ಏರಿಕೆ ಮಾಡಿದ್ದಕ್ಕೆ ಮತ ನೀಡಬೇಕಾ?, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಕ್ಕೆ ಮತ ನೀಡಬೇಕಾ?, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಣ ಹಾಕುತ್ತೇವೆ ಸುಳ್ಳು ಭರವಸೆ ನೀಡಿದ ಪ್ರಧಾನಿಗೆ ಮತ ನೀಡಬೇಕಾ?, ಯುವಕರಿಗೆ ಉದ್ಯೋಗ ಕೊಡ್ತೀವಿ ಅಂದು, ಪಕೋಡ ಮಾರಿ ಎಂದಿದ್ದಕ್ಕೆ ಮತ ನೀಡಬೇಕಾ?, ಯಾವುದಕ್ಕೆ ಮತ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಕೇಳುತ್ತಿದೆ," ಎನ್ನುವ ಮೂಲಕ ಮಾತಿನ ಉದ್ದಕ್ಕೂ ಕೆಪಿಸಿಸಿ ಕಾರ್ಯಾಧ್ಯಕ್ಷ ಪ್ರಶ್ನೆ ಹಾಕಿದರು.
"ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತದಿಂದ ಜನರು ಭ್ರಮನಿರಸನವಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ಇತರೆ ವಸ್ತುಗಳ ಖರೀದಿಯಲ್ಲಿ 2 ಸಾವಿರ ಕೋಟಿ ಹಗರಣ ಮಾಡಿದ್ದಾರೆಂದು ಕಾಂಗ್ರೆಸ್ ಆರೋಪ ಮಾಡಿತ್ತು. ಖರೀದಿ ಬಗ್ಗೆ ಲೆಕ್ಕ ಕೊಡಿ ಅಂತ ಕಾಂಗ್ರೆಸ್ ಪಕ್ಷ ಕೇಳಿತ್ತು. ಆದರೆ ಇದುವರೆಗೂ ಸರ್ಕಾರ ಲೆಕ್ಕ ಕೊಟ್ಟಿಲ್ಲ, ಇದಕ್ಕೆ ಜನರು ಮತ ನೀಡಬೇಕಾ?," ಎಂದು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದರು.
ಲಕ್ಷಾಂತರ ಮಂದಿ ಬದುಕು ಕಳೆದುಕೊಂಡಿದ್ದಾರೆ
"ಕೊರೊನಾ ಸಂದರ್ಭದಲ್ಲಿ ಸಾವಿರಾರು ಜನ ಸಾವನ್ನಪ್ಪುವುದರ ಜೊತೆಗೆ ಲಕ್ಷಾಂತರ ಮಂದಿ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇನ್ನೂ ಕೆಲವರು ಆತ್ಮಹತ್ಯೆಗೂ ಪ್ರಯತ್ನಿಸಿದ್ದಾರೆ. ಸರ್ಕಾರದ ಈ ವೈಫಲ್ಯತೆಗಳಿಂದ ರಾಜ್ಯದ ಜನರು ಬದಲಾವಣೆ ಬಯಸಿದ್ದಾರೆ. ಜನರು ಯಾಕೆ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು ಎಂಬ ಯಕ್ಷ ಪ್ರಶ್ನೆಯಾಗಿದೆ. ಅದಕ್ಕಾಗಿ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದು, ಎರಡು ಕ್ಷೇತ್ರಗಳಲ್ಲಿ ನಾವು ಜಯ ಗಳಿಸಲಿದ್ದೇವೆ ಎಂದು ತಿಳಿಸಿದರು. ಎರಡು ಕ್ಷೇತ್ರಗಳಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ನಿಮ್ಮ ಪರಿಚಯ ಹಾಗೂ ಸಂಬಂಧಿಕರಿಗೆ ಮತ ನೀಡುವಂತೆ ಹೇಳಿ," ಎಂದು ಹಿರಿಯೂರು ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿಸಿದರು.
ಪ್ರಧಾನಿ ಜನರಿಗೆ ನರಕ ತೋರಿಸಿದ್ದಾರೆ
ಇನ್ನು ಉತ್ತರ ಪ್ರದೇಶದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, "ಉತ್ತರ ಪ್ರದೇಶದಲ್ಲಿ ಸರ್ಕಾರ ಇದೆಯೋ, ಇಲ್ಲವೋ ಅರ್ಥವಾಗುತ್ತಿಲ್ಲ. ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬರುವಾಗ ರಾಮರಾಜ್ಯ ಮಾಡ್ತೀವಿ ಅಂದು, ಈಗ ರಾವಣ ರಾಜ್ಯ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಸ್ವರ್ಗ ತೋರಿಸುತ್ತೇವೆ ಅಂದ ಪ್ರಧಾನಿ ಜನರಿಗೆ ನರಕ ತೋರಿಸಿದ್ದಾರೆ. ಎರಡು ವರ್ಷಗಳಲ್ಲಿ ಜನರು ನರಕ ಅನುಭವಿಸಿದ್ದಾರೆ," ಎಂದು ಕಿಡಿಕಾರಿದರು.
"ಉತ್ತರ ಪ್ರದೇಶದಲ್ಲಿ ನಡೆದಿರುವಂತಹ ಈ ಘಟನೆ ಸಮಾಜಕ್ಕೆ ತಲೆ ತಗ್ಗಿಸುವಂತಹ ಕೆಲಸವಾಗಿದೆ. ಕೇಂದ್ರ ಮಂತ್ರಿಗಳ ಕಾರು ಹತ್ತಿಸಿ ನಾಲ್ಕು ಜನ ರೈತರನ್ನು ಕೊಂದು ಹಾಕಿದ್ದಾರೆ. ಇವರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೋದ ನಮ್ಮ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಬಂಧಿಸಿದ್ದಾರೆ. ದೇಶದಲ್ಲಿ ಕಾನೂನು ಇದೆಯಾ ಎಂದು ಪ್ರಶ್ನೆ ಮಾಡಿದರು. ಈ ಕೂಡಲೇ ಉತ್ತರ ಪ್ರದೇಶದ ಸಿಎಂ ಆದಿತ್ಯ ಯೋಗಿ ಸಿಎಂ ರಾಜೀನಾಮೆ ನೀಡಬೇಕು. ರೈತರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವರನ್ನು ಬಂಧಿಸಬೇಕು," ಎಂದು ಸಲೀಂ ಅಹಮದ್ ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ
"ಇನ್ನು 40 ಜನ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷ ಸೇರ್ಪಡೆಯ ಬಗ್ಗೆ ಶಾಸಕ ರಾಜು ಕಾಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ""ನಾವು ಪಕ್ಷವನ್ನು ಗಟ್ಟಿ ಮಾಡುವಂತಹ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಸಂಘಟನೆ ಹಾಗೂ ಹೋರಾಟಕ್ಕೆ ಸಿದ್ಧವಾಗಿದ್ದು, ಯಾವುದೇ ಸಂದರ್ಭದಲ್ಲೂ ಚುನಾವಣೆ ನಡೆದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳು ಮತ್ತು ವಿಚಾರಧಾರೆಗಳನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನಾಯಕತ್ವವನ್ನು ಒಪ್ಪಿಕೊಂಡು ಯಾರು ಬಂದರೂ ಸಮಿತಿಗೆ ಅರ್ಜಿ ಸಲ್ಲಿಸಬೇಕು. ನಂತರ ನಮ್ಮ ಪಕ್ಷದ ಹಿರಿಯರು, ಮುಖಂಡರು ಪರಿಶೀಲಿಸಿ ಪಕ್ಷ ಸೇರ್ಪಡೆಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ," ಎಂದು ಸಲೀಂ ಅಹಮದ್ ಸುದ್ದಿಗಾರರಿಗೆ ತಿಳಿಸಿದರು.
Recommended Video