ಗೂಳಿ ವಿರುದ್ಧ ಗುಟುರು ಹಾಕಿದ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್
ಚಿತ್ರದುರ್ಗ, ಡಿಸೆಂಬರ್ 23: ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಪಕ್ಷದ ಕುರಿತು ಅಸಮಾಧಾನ ತೋಡಿಕೊಂಡ ಬೆನ್ನಲ್ಲೇ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಪ್ರತಿಕ್ರಿಯೆ ನೀಡಿದ್ದು, ಚಾಡಿ ಹೇಳಿ ಅನುದಾನ ನಿಲ್ಲಿಸುವಂತಹ ಥರ್ಡ್ ಕ್ಲಾಸ್ ಮೆಂಟಾಲಿಟಿ ನನಗೆ ಇಲ್ಲ, ನಾನು ಯಾರ ಬಗ್ಗೆಯೂ ಚಾಡಿ ಹೇಳುವ ಅವಶ್ಯಕತೆ ಇಲ್ಲ" ಎಂದು ಹೇಳಿದ್ದಾರೆ.
ತಾಲ್ಲೂಕು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಶಾಸಕರ ಕಡೆಗಣನೆ ವಿಚಾರವಾಗಿ ಮಾತನಾಡಿದ ನವೀನ್, "ಈ ವಿಷಯವನ್ನು ಕಾರ್ಯಕರ್ತರ ಸಭೆಯಲ್ಲಿ ಹೇಳುವಂತಹ ಅವಶ್ಯಕತೆ ಇರಲಿಲ್ಲ. ನಾವು ಶಾಸಕರನ್ನು ಸೈಡ್ ಲೈನ್ ಮಾಡಿಲ್ಲ ಹಾಗೂ ರಾಜ್ಯದಲ್ಲಿಯೇ ಯಾವ ಶಾಸಕರೂ ಈ ರೀತಿ ಬೆಂಬಲಗರ ಸಭೆ ಕರೆಯೋದಿಲ್ಲ. ನಾನು ಬಿಜೆಪಿಗೆ ಬಂದು ತಪ್ಪು ಮಾಡಿದೆ ಎಂದು ಹಿಂದೆಯೂ ಹೇಳಿಕೆ ಕೊಟ್ಟಿದ್ದರು. ಈ ರೀತಿಯ ಹೇಳಿಕೆ ಕೊಡಬೇಡಿ" ಎಂದು ಮನವಿ ಮಾಡಿದರು.
ಸಚಿವ ಸ್ಥಾನ ಸಿಗಲ್ಲ, ಬಿಜೆಪಿಗೆ ಸೆಡ್ಡು ಹೊಡೆಯಲು ಶಾಸಕ ರೆಡಿ
"ನಿಮ್ಮ ಅಭಿಮಾನಿಗಳು ಎಷ್ಟು ಪ್ರೀತಿಯಿಟ್ಟು ಓಟು ಹಾಕಿದ್ದಾರೋ, ಅದರ ಎರಡರಷ್ಟು ಅಭಿಮಾನ ಇಟ್ಟು ಬಿಜೆಪಿ ಕಾರ್ಯಕರ್ತರು ನಿಮಗೆ ಓಟು ಹಾಕಿದ್ದಾರೆ. ಮಾತೆತ್ತಿದ್ದರೆ ನನ್ನ ಬೆಂಬಲಿಗರು ಬಿಜೆಪಿಗೆ ಹೊಂದಿಕೊಳ್ಳೋದಿಲ್ಲ ಅಂತಾರೆ. ಅವರಿಗೆ ಇಂಥವರನ್ನ ಅಧ್ಯಕ್ಷರನ್ನಾಗಿ ಮಾಡಿ ಎಂದು ಹೇಳುವ ನೈತಿಕತೆಯೇ ಇಲ್ಲ" ಎಂದು ಶಾಸಕ ಗೂಳಿ ವಿರುದ್ಧ ಗುಟುರು ಹಾಕಿದರು.
ಶಾಸಕರಾಗಲು ತುದಿಗಾಲಲ್ಲಿ ಕೆಲವರು ನಿಂತಿದ್ದಾರೆ ಎನ್ನುವ ಗೂಳಿ ಹೇಳಿಕೆಗೆ, "ಅಂತಹ ಭಾವನೆ ನನಗೆ ಇದ್ದಿದ್ದರೆ 2008ರಲ್ಲೇ ರೆಬೆಲ್ ಆಗಿ ಕಣಕ್ಕಿಳಿಯುತ್ತಿದ್ದೆ. ಆದರೆ ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ" ಎಂದರು.