ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಬಲ ಪ್ರದರ್ಶನ, ಜನಾರ್ದನ ರೆಡ್ಡಿ ಸಾಥ್
ಮೊಳಕಾಲ್ಮೂರು (ಚಿತ್ರದುರ್ಗ ಜಿಲ್ಲೆ), ಏಪ್ರಿಲ್ 21: ಮೊಳಕಾಲ್ಮೂರು ಪರಿಶಿಷ್ಟ ಪಂಗಡ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ನಾಮಪತ್ರ ಸಲ್ಲಿಸಿದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ವಿಶೇಷ ವಿಮಾನದಲ್ಲಿ ಭೋಪಾಲ್ ನಿಂದ ಬಳ್ಳಾರಿಯ ತೋರಣಗಲ್ಲು ತಲುಪಿ, ವಿಶೇಷ ಹೆಲಿಕಾಪ್ಟರ್ ನಲ್ಲಿ ಬಿಎಸ್ ವೈ, ಬಿ. ಶ್ರೀರಾಮುಲು ಸೇರಿ ಐವರು ಮೊಳಕಾಲ್ಮೂರಿಗೆ ಹಾರಿದ್ದರು.
ಶನಿವಾರ ಬೆಳಗ್ಗೆ ನಸುಕಿನಲ್ಲಿ ಎದ್ದ ಬಿ.ಶ್ರೀರಾಮುಲು ಮನೆಯಲ್ಲಿ ಶಿವಪೂಜೆ ನೆರವೇರಿಸಿದರು. ಆ ನಂತರ ಗೋಪೂಜೆಯನ್ನು ನಡೆಸಿ, ಗುರು - ಹಿರಿಯರನ್ನು ಸ್ಮರಿಸಿ, ಆರಾಧ್ಯ ದೈವಕ್ಕೆ ನಮಸ್ಕರಿಸಿದರು. ಶಿವರಾಜಸಿಂಗ್ ಚೌಹಾಣ್ ಅವರನ್ನು ಬರಮಾಡಿಕೊಳ್ಳಲು ಜಿಂದಾಲ್ ಏರ್ ಸ್ಟ್ರಿಪ್ ಗೆ ದೌಡಾಯಿಸಿದರು. ಅಷ್ಟರಲ್ಲೇ, ಬಿ.ಎಸ್. ಯಡಿಯೂರಪ್ಪ ಸೇರಿ ಅನೇಕ ಮುಖಂಡರು ಉಪಸ್ಥಿತರಿದ್ದರು.
ಮೊಳಕಾಲ್ಮೂರು ಟಿಕೆಟ್ ಕೇಳಿ ಕಾಂಗ್ರೆಸ್ಸಿಗರ ಬಲೆಗೆ ಬಿದ್ದರಾ ರಾಮುಲು?
ಶಿವರಾಜ ಸಿಂಗ್ ಚೌಹಾಣ್ ಅವರನ್ನು ಸ್ವಾಗತಿಸಿದ ಬಿ. ಶ್ರೀರಾಮುಲು, ಬಿ.ಎಸ್.ಯಡಿಯೂರಪ್ಪ, ವಿಶೇಷ ಹೆಲಿಕಾಪ್ಟರ್ ನಲ್ಲಿ ಬೆಳಗ್ಗೆ 9.50 ಕ್ಕೆ ಹಾರಿದರು. ಮೊಳಕಾಲ್ಮೂರು ತಲುಪುತ್ತಿದ್ದಂತೆಯೇ, ಜಾತ್ರೆಯಂತೆ ಜನರು ಬಂದರು. ಹೆಲಿಕಾಪ್ಟರ್ ನೋಡಲಿಕ್ಕಾಗಿಯೇ ಗುಂಪು ಗುಂಪಾಗಿ ಬಂದಿದ್ದರು.
ರಾಮುಲು-ಬಿಎಸ್ ವೈ ಜೋಡಿಯಿಂದ ಬಿಜೆಪಿ ಅಧಿಕಾರಕ್ಕೆ
ಮೊಳಕಾಲ್ಮೂರಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಿವರಾಜಸಿಂಗ್ ಚೌಹಾಣ್, 'ಬಿ. ಶ್ರೀರಾಮುಲು, ಬಿ.ಎಸ್. ಯಡಿಯೂರಪ್ಪ ಅವರ ಜೋಡಿ ರಾಜ್ಯದಲ್ಲಿ ಬಿಜೆಪಿಯನ್ನು ಪುನಃ ಅಧಿಕಾರಕ್ಕೆ ತರಲಿದೆ. ಬಿಜೆಪಿಗೆ ಉತ್ತಮವಾಧ ಭವಿಷ್ಯವಿದೆ' ಎಂದರು.
ವೇದಿಕೆಯಲ್ಲಿ ಜನಾರ್ದನ ರೆಡ್ಡಿ ಮಿಂಚಿಂಗ್
ಆದರೆ, ಬಿಜೆಪಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು 'ಬಿಜೆಪಿಗೂ ಗಾಲಿ ಜನಾರ್ದನ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ' ಎಂದಿದ್ದರೂ ಜಿ. ಜನಾರ್ದನ ರೆಡ್ಡಿ ಅವರು, ಮೊಳಕಾಲ್ಮೂರಿನ ಸಾರ್ವಜನಿಕ ವೇದಿಕೆಯಲ್ಲಿ ಅಕ್ಕಪಕ್ಕದಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ಗೆಳೆಯನನ್ನು ಗೆಲ್ಲಿಸಿಕೊಳ್ಳುತ್ತೇನೆ
ಈ ಸಂದರ್ಭದಲ್ಲಿ ಆಪ್ತರೊಂದಿಗೆ ಮಾತನಾಡಿದ ಜಿ. ಜನಾರ್ದನರೆಡ್ಡಿ, 'ಸ್ನೇಹಿತ ಬಿ. ಶ್ರೀರಾಮುಲು ಗೆಲುವಿಗಾಗಿ ಮನೆ ಮನೆಗೆ ಹೋಗಿ, ಬೀದಿ ಬೀದಿ ತಿರುಗಿ ನಾನು ಓಟು ಕೇಳುತ್ತೇನೆ. ಬಿ. ಶ್ರೀರಾಮುಲು ಗೆಲ್ಲುವುದು ಖಚಿತ' ಎಂದರು. ಭಾರೀ ಸಂಖ್ಯೆಯ ಜನರು ನಾಮಪತ್ರ ಸಲ್ಲಿಸುವ ಸಭೆಯಲ್ಲಿ ಪಾಲ್ಗೊಂಡಿದ್ದರು.
ಭೋಪಾಲ್ ಗೆ ಹಿಂತಿರುಗಿದ ಶಿವರಾಜ ಸಿಂಗ್ ಚೌಹಾಣ್
ಸಾರ್ವಜನಿಕ ಸಭೆಯನ್ನು ನಡೆಸಿದ ನಂತರ ಬಿಜೆಪಿಯ ಘೋಷಿತ ಅಭ್ಯರ್ಥಿ ಬಿ. ಶ್ರೀರಾಮುಲು ನಾಮಪತ್ರ ಸಲ್ಲಿಸಿದರು. ಶಿವರಾಜಸಿಂಗ್ ಚೌಹಾಣ್ ಅವರು ವಿಶೇಷ ಹೆಲಿಕಾಪ್ಟರ್ ನಲ್ಲಿ ಜಿಂದಾಲ್ ಗೆ ಹಿಂತಿರುಗಿ, ವಿಶೇಷ ವಿಮಾನದಲ್ಲಿ ಮಧ್ಯಾಹ್ನ 1.40ರ ಸುಮಾರಿಗೆ ಭೋಪಾಲ್ ಗೆ ತೆರಳಿದರು.