ಮಂಗಳೂರು ಕೊಲೆ ಪ್ರಕರಣ, ಹಿಂದೂ-ಮುಸ್ಲಿಂ ನಡುವೆ ಬಿಜೆಪಿ ತಾರತಮ್ಯ : ಡಿಕೆಶಿ ಖಂಡನೆ
ಚಿತ್ರದುರ್ಗ, ಜುಲೈ 31: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಬಿಜೆಪಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರದ ವಿರುದ್ಧ ಲೇವಡಿ ಮಾಡಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು " ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಕೊಲೆಗಳು ನಡೆಯುತ್ತಿವೆ. ಇದಕ್ಕೆ ಸರ್ಕಾರ ವೈಫಲ್ಯ ಕಾರಣ, ಇನ್ನೂ ಸರಕಾರ ಪರಿಹಾರ ಅಥವಾ ಸಾಂತ್ವನದ ವಿಚಾರದಲ್ಲಾದರೂ ಹಿಂದೂ-ಮುಸ್ಲೀಮರ ನಡುವೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ಸಿದ್ದರಾಮೋತ್ಸವಕ್ಕೆ 495 ಬಸ್, 600 ಇತರ ವಾಹನಗಳ ವ್ಯವಸ್ಥೆ!
ಕೊಲೆಯಾದ ಹಿಂದುಗಳ ಮನೆಗೆ ಎಲ್ಲರೂ ಹೋಗಿ ಸಾಂತ್ವನ ಹೇಳುತ್ತಿದ್ದಾರೆ, ಪರಿಹಾರ ನೀಡುತ್ತಿದ್ದಾರೆ. ಆದರೆ ಮುಸ್ಲಿಂ ಬಾಂಧವರ ಮನೆಗೆ ಹೋಗುತ್ತಿಲ್ಲ. ಕರಾವಳಿಯಲ್ಲಿ ಹಿಂದೂಗಳ ಕೊಲೆ ನಡೆದಿದೆ, ಹಾಗೆಯೇ ಮುಸ್ಲಿಂ ಯುವಕರ ಕೊಲೆ ನಡೆದಿದೆ. ಕೊಲೆ ಯಾರದ್ದೇ ಆಗಿದ್ದರೂ ನಾವು ಖಂಡಿಸುತ್ತೇವೆ. ನಮ್ಮದು ಸರ್ವಜನಾಂಗದ ಶಾಂತಿಯ ತೋಟ, ಆದರೆ ಭೇದ-ಭಾವ ಮಾಡಬಾರದು, ಸರಕಾರ ಎಲ್ಲರನ್ನು ಒಂದೇ ರೀತಿಯಲ್ಲಿ ನೋಡಬೇಕು" ಎಂದು ಡಿಕೆ ಶಿವಕುಮಾರ್ ಹೇಳಿದರು.
ಭಾರತ ಜೊಡೋ ಪಾದಯಾತ್ರೆ ಬಗ್ಗೆ ಮಾತನಾಡಿ, ಯಾತ್ರೆ ಕನ್ಯಾಕುಮಾರಿಯಿಂದ ಪ್ರಾರಂಭವಾಗಲಿದ್ದು, ಗುಂಡ್ಲುಪೇಟೆ, ಮೈಸೂರು, ಶ್ರೀರಂಗಪಟ್ಟಣ, ನಾಗಮಂಗಲ, ಮೇಲಕೋಟೆ, ಚಿತ್ರದುರ್ಗ ಜಿಲ್ಲೆ ಮುಖಾಂತರ ಬಳ್ಳಾರಿ ಕಡೆ ತೆರಳಲಿದೆ . ಪಾದಯಾತ್ರೆಯು ನಿಮ್ಮ ಜಿಲ್ಲೆಯಲ್ಲಿ 80 ಕಿ.ಮೀ ಸಾಗಲಿದೆ. ಈ ಪಾದಯಾತ್ರೆ ಮೇಕೆದಾಟು ಪಾದಯಾತ್ರೆಗಿಂತ ಚೆನ್ನಾಗಿ ನಡೆಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು. ಇನ್ನು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ರವರು ಜಾತಿವಾದಿಗಳು ಅವರನ್ನು ಜನ ಗೆಲಿಸುವುದಿಲ್ಲ ಎಂಬ ಪ್ರಶ್ನೆಗೆ ಜನರೇ ಇದಕ್ಕೆ ಉತ್ತರ ಕೊಡತ್ತಾರೆ ಎಂದು ಪ್ರತಿಕ್ರಿಯಿಸಿದರು.
ತ್ರಿವರ್ಣ ಧ್ವಜ ಕಾಂಗ್ರೆಸ್ ಪಕ್ಷ ನೀಡಿದ ಕೊಡುಗೆ
ಕಾಂಗ್ರೆಸ್ ಪಕ್ಷ ದೇಶದ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ದೇಶ ನಮ್ಮದು, ಸಂವಿಧಾನ ನಮ್ಮದು, ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಮಾಡಬೇಕು. ಸ್ವಾತಂತ್ರ್ಯ ಸಿಗುವ ಸಮಯದಲ್ಲಿ ಬಿಜೆಪಿಯವರು ಇರಲಿಲ್ಲ. ಅವರು ಮನೆ ಮೇಲೆ ಬಾವುಟ ಹಾರಿಸುವ ಕರೆ ನೀಡಿದ್ದಾರೆ. ಅದಕ್ಕೂ ಮೊದಲೇ ನಾವು ಪಾದಯಾತ್ರೆ ಮಾಡಿ ಸಂಭ್ರಮಯಿಸಲು ಕರೆ ನೀಡಿದ್ದೇವೆ. ತ್ರಿವರ್ಣದ ಬಾವುಟ ನೀಡಿದ್ದು ನಮ್ಮ ಪಕ್ಷ, ಇದನ್ನು ಹಾಕಿಕೊಳ್ಳುವ ಅಧಿಕಾರಕ್ಕೆ ಕಾಂಗ್ರೆಸ್ಸಿಗರಿಗೆ, ಬಿಜೆಪಿಯವರಿಗೆ ಇಲ್ಲ ಎಂದರು.
ಚಿತ್ರದುರ್ಗದಲ್ಲಿ ಕಾಂಗ್ರೆಸ್ ಜಯ
ಎಐಸಿಸಿ ಸಮೀಕ್ಷೆ ಮಾಡಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸುವುದು ಶತಸಿದ್ದ. ನಮ್ಮ ಹೋರಾಟ ಏನಿದ್ದರೂ ಬಿಜೆಪಿ ವಿರುದ್ದ, ಜೆಡಿಎಸ್ ವಿರುದ್ದ. ಜನರು ಬದಲಾವಣೆ ಬಯಸುತ್ತಿದ್ದಾರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವ ಕೊಟ್ಟ ಈ ಸ್ಥಳದಲ್ಲಿ ಪೂರ್ವಭಾವಿ ಸಭೆ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.