ಚಿತ್ರದುರ್ಗದಲ್ಲಿ ಕೊರೊನಾ ಸೋಂಕಿತನಿದ್ದ ಆಂಬುಲೆನ್ಸ್ ತಡೆದು ನಿಲ್ಲಿಸಿದ ಗ್ರಾಮಸ್ಥರು
ಚಿತ್ರದುರ್ಗ, ಜೂನ್ 29: ಜಿಲ್ಲೆಯಲ್ಲಿ 26 ವರ್ಷದ ಆಟೋ ಚಾಲಕರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತನನ್ನು ಕೋವಿಡ್ ಹೆಲ್ತ್ ಕೇರ್ ಸೆಂಟರ್ ಗೆ ಶಿಫ್ಟ್ ಮಾಡಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆ ನಿನ್ನೆ ರಾತ್ರಿ ಚಿತ್ರದುರ್ಗದ ಭರಮಸಾಗರ ಗ್ರಾಮದಲ್ಲಿ ನಡೆದಿದೆ.
Recommended Video
ಕೊಪ್ಪಳದ ಸಂಬಂಧಿಕರ ಮನೆಗೆ ತೆರಳಿದ್ದ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ವಿವೇಕಾನಂದ ನಗರ ನಿವಾಸಿ ಆಟೋ ಚಾಲಕನಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಕೊಪ್ಪಳದಲ್ಲಿ ಕ್ವಾರೆಂಟೈನ್ ಮಾಡಿ ಗಂಟಲು ದ್ರವ ಪರಿಕ್ಷೆ ಮಾಡಲಾಗಿತ್ತು. ಕೊಪ್ಪಳದಲ್ಲಿ ಪ್ರಾಥಮಿಕ ವರದಿ ಫಲಿತಾಂಶ ನೆಗೆಟಿವ್ ಬಂದಿತ್ತು. ನಂತರ ಆಟೋ ಚಾಲಕನಿಗೆ ಕ್ವಾರಂಟೈನ್ ನಲ್ಲಿ ಇರಲು ಕೊಪ್ಪಳ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿ ಚಿತ್ರದುರ್ಗಕ್ಕೆ ಕಳುಹಿಸುವ ಮುನ್ನ ಜೂ.25ರಂದು ಮತ್ತೆ ಕೊರೊನಾ ಪರೀಕ್ಷೆ ನಡೆಸಿದ್ದರು.
ಚಿತ್ರದುರ್ಗದಲ್ಲಿ ಎಷ್ಟು ಸಕ್ರಿಯ ಪ್ರಕರಣಗಳಿವೆ; ಸೀಲ್ ಡೌನ್ ಆದ ಪ್ರದೇಶಗಳು ಯಾವುವು?
25ರಂದು ಚಿತ್ರದುರ್ಗಕ್ಕೆ ಬಂದು ಕ್ವಾರಂಟೈನಲ್ಲಿದ್ದ ಆಟೋ ಚಾಲಕನಿಗೆ 2ನೇ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಹೀಗಾಗಿ ಆತನನ್ನು ಚಿತ್ರದುರ್ಗದಿಂದ ಭರಮಸಾಗರ ಕೊವೀಡ್ ಹೆಲ್ತ್ ಸೆಂಟರ್ ಗೆ ಶಿಫ್ಟ್ ಮಾಡಲು ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ರೋಗಿಯನ್ನ ಕರೆತಂದ ಆಂಬುಲೆನ್ಸ್ ತಡೆದು ನಿಲ್ಲಿಸಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.
ಗ್ರಾಮದ ಒಳಗಿರುವ ಆಸ್ಪತ್ರೆಯಲ್ಲಿ ಕೊರೊನಾ ರೋಗಿ ದಾಖಲಿಸಿದರೆ ತೊಂದರೆ ಆಗುತ್ತದೆ ಎಂದು ಗಲಾಟೆ ಆರಂಭವಾಯಿತು. ಗಂಟೆಗೂ ಹೆಚ್ಚು ಕಾಲ ಕೊರೊನಾ ಸೋಂಕಿತನಿದ್ದ ಆಂಬುಲೆನ್ಸ್ ತಡೆದು ನಿಲ್ಲಿಸಿದ್ದು, ಗ್ರಾಮಸ್ಥರು- ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಜನರಿಗೆ ತಿಳಿ ಹೇಳಿ ಕೋವಿಡ್ ಹೆಲ್ತ್ ಕೇರ್ ಸೆಂಟರ್ ಗೆ ಆತನನ್ನು ದಾಖಲಿಸಲಾಯಿತು.