ಮೊಳಕಾಲ್ಮೂರಿನಲ್ಲಿ ಉರುಳಿಗೆ ಸಿಲುಕಿ ನರಳಾಡುತ್ತಿದ್ದ ಕರಡಿ ಸಾವು
ಚಿತ್ರದುರ್ಗ, ಅಕ್ಟೋಬರ್ 14: ಕಾಡು ಹಂದಿ ಹಿಡಿಯಲು ಇಟ್ಟಿದ್ದ ತಂತಿ ಉರುಳಿಗೆ ಕರಡಿಯೊಂದು ಸಿಲುಕಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಹೊರವಲಯದಲ್ಲಿ ನಡೆದಿದೆ.
ದಳವಾಯಿಕಟ್ಟೆ ಗ್ರಾಮಸ್ಥರಿಂದ ಹಲ್ಲೆಗೊಳಗಾಗಿದ್ದ ಕರಡಿ ಸಾವು
ರಾಮದುರ್ಗ ರಸ್ತೆ ಬದಿ ಕಾಡುಹಂದಿ ಹಿಡಿಯಲು ಉರುಳು ಹಾಕಲಾಗಿತ್ತು. ಇಂದು ಬೇಲಿ ದಾಟಲು ಮುಂದಾಗಿದ್ದ ಕರಡಿಗೆ ಆ ಉರುಳು ಸಿಲುಕಿಕೊಂಡಿದೆ. ಉರುಳಿನಿಂದ ಬಿಡಿಸಿಕೊಳ್ಳಲಾಗದೆ ಕರಡಿ ನರಳಾಡುತ್ತಿದ್ದು. ಆ ಹಾದಿಯಲ್ಲಿ ಸಾಗುತ್ತಿದ್ದ ಜನರು ಇದನ್ನು ಗಮನಿಸಿದ್ದರು. ನಂತರ ಅದನ್ನು ನೋಡಲು ನೂರಾರು ಮಂದಿ ಸ್ಥಳಕ್ಕೆ ಜಮಾಯಿಸಿದ್ದರು. ಕರಡಿಯನ್ನು ಉರುಳಿನಿಂದ ಬಿಡಿಸಿ, ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲು ಸಾರ್ವಜನಿಕರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರು.
ಆದರೆ ಕೊನೆಗೂ ಆ ಉರುಳಿನಿಂದ ಬಿಡಿಸಿಕೊಳ್ಳಲಾಗದೇ ಬಳಲಿದ ಕರಡಿ ಸಾವನ್ನಪ್ಪಿದೆ. ಕಳೆದ ತಿಂಗಳೂ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ದಳವಾಯಿಕಟ್ಟೆಯಲ್ಲಿ ಕರಡಿಯೊಂದು ಸಾವನ್ನಪ್ಪಿದ ಘಟನೆ ನಡೆದಿತ್ತು. ಗ್ರಾಮಕ್ಕೆ ಆಹಾರ ಅರಸಿ ಬಂದಿದ್ದ ಕರಡಿ ನಾಲ್ವರ ಮೇಲೆ ದಾಳಿ ಮಾಡಿತ್ತು. ಗ್ರಾಮಸ್ಥರೇ ಹಲ್ಲೆ ಮಾಡಿ ಕರಡಿಯನ್ನು ಕೊಂದಿದ್ದರು. ಇದೀಗ ಮತ್ತೊಂದು ಕರಡಿ ಸಾವನ್ನಪ್ಪಿದೆ.