ಸಗಣಿ ನೀರಲ್ಲಿ ಸ್ನಾನ ಮಾಡಿದರೆ ಕೊರೊನಾ ಬರೊಲ್ವಂತೆ! ವಿಡಿಯೋ ವೈರಲ್
ಚಿತ್ರದುರ್ಗ, ಮಾರ್ಚ್ 27: ಎಲ್ಲೆಲ್ಲೂ ಈಗ ಕೊರೊನಾದ್ದೇ ಮಾತು. ದಿನೇ ದಿನೇ ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿರುವ ಕೊರೊನಾ ನಿರ್ಮೂಲನೆಗೆ ಒಬ್ಬೊಬ್ಬರು ಒಂದೊಂದು ಸಲಹೆ ನೀಡುತ್ತಾರೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲೂ ಕೊರೊನಾ ತೊಲಗಿಸುವ ಸಲಹೆಯೊಂದು ವೈರಲ್ ಆಗಿದೆ.
Recommended Video
ಸಗಣಿಯಲ್ಲಿ ಸ್ನಾನ ಮಾಡಿದರೆ ಕೊರೋನಾ ಬರೋದಿಲ್ಲ ಎಂದು ಸಲಹೆ ನೀಡಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರ ಬಗ್ಗೆ ಮಾಹಿತಿ ಇಲ್ಲಿದೆ...
ವೈರಲ್ ಆಯ್ತು ಸಗಣಿ ಸ್ನಾನ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬೀರೇನಹಳ್ಳಿ ಸಮೀಪ, ಸುಮಾರು 200ಕ್ಕೂ ಹೆಚ್ಚು ಹಸುಗಳಿರುವ ಸ್ವರ್ಣ ಭೂಮಿ ಗೋಶಾಲೆಯ ಆವರಣದಲ್ಲಿ ತೊಟ್ಟಿಯೊಂದರಲ್ಲಿ ಸಗಣಿ ಹಾಗೂ ನೀರನ್ನು ಮಿಶ್ರಣ ಮಾಡಲಾಗಿದೆ. ಅದರಲ್ಲಿ ಕೆಲ ಯುವಕರು ಸ್ನಾನ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಗೋಶಾಲೆ ಮಾಲೀಕ, ಗೋಬರ್ ಸ್ನಾನ ಮಾಡಿದರೆ ಕೊರೊನಾ ಬರುವುದಿಲ್ಲ ಎಂದು ಹೇಳಿರುವ ಮಾತುಗಳು ವಿಡಿಯೋದಲ್ಲಿ ಇದೆ.
ಸರ್ವರೋಗ ನಿವಾರಣೆಗೆ ಗೋಬರ್ ಸ್ನಾನ?
ಗೋಬರ್ ಸ್ನಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಅಂದರೆ ಸರ್ವರೋಗ ನಿವಾರಣೆಯಾಗುತ್ತದೆ. ನಾವು ಸಗಣಿ ಮಿಶ್ರಣ ಮಾಡಿದ ನೀರನ್ನು ಮನೆಯ ಮುಂಭಾಗದಲ್ಲಿ, ಅಂದರೆ ಅಂಗಳದಲ್ಲಿ ಹಾಕುತ್ತಿದ್ದೆವು. ಇದರ ಉದ್ದೇಶ ಮಾನವನಿಗೆ ಯಾವುದೇ ರೋಗದ ಲಕ್ಷಣಗಳು ಬರಬಾರದು ಎಂದು. ಆಗ ಯಾವುದೇ ರೋಗಗಳು ಕಾಣಿಸಿಕೊಳ್ಳುತ್ತಿರಲಿಲ್ಲ, ಈಗ ಅದನ್ನು ಬಿಟ್ಟಿದ್ದೇವೆ, ಈಗ ಮತ್ತೆ ಸಗಣಿಯನ್ನು ಬಳಸುವ ಕೆಲಸ ಮಾಡಬೇಕಿದೆ" ಎಂದು ಸಲಹೆ ನೀಡಿದ್ದಾರೆ ಗೋಶಾಲೆಯ ಮಾಲೀಕ ಗೋಸೇವಕ ರಾಘವೇಂದ್ರ.
"ಗೋಮಯದಲ್ಲಿ ಮಹಾಲಕ್ಷ್ಮಿ ಅಡಗಿರುತ್ತಾಳೆ"
ಭಾರತಿಯ ಹಿಂದೂ ಧರ್ಮದಲ್ಲಿ ಗೋ ಮೂತ್ರಕ್ಕೆ ಶ್ರೇಷ್ಠ ಸ್ಥಾನವಿದೆ. ನಾಟಿ ಹಸುವಿನ ಸಗಣಿಯಿಂದ ಸ್ನಾನ ಮಾಡಿದರೆ ಸರ್ವ ರೋಗ ನಿವಾರಣೆ ಆಗುತ್ತದೆ. ನಮ್ಮ ಶಾಸ್ತ್ರಗಳಲ್ಲಿ ಹೇಳುತ್ತಾರೆ "ಗೋ ಮಾಹೆ ವಸತಿ ಲಕ್ಷ್ಮೀ" ಅಂದರೆ "ಗೋಮಯದಲ್ಲಿ ಮಹಾಲಕ್ಷ್ಮಿ ಅಡಗಿರುತ್ತಾಳೆ" ಎಂದು ವಿವರಸಿದ್ದಾರೆ ಅವರು.
ಹೀಗೊಂದು ವಿಡಿಯೋ ವೈರಲ್
ಹಾಗಾಗಿ ಸರ್ವರೋಗವನ್ನು ನಿವಾರಣೆ ಮಾಡುವ ಗೋಬರಿನ ಸ್ನಾನವನ್ನು ಮಾಡಿದಾಗ ನಮ್ಮ ಶರೀರದಲ್ಲಿರುವ ಎಲ್ಲ ದೋಷಗಳು ಮತ್ತು ಶರೀರದಲ್ಲಿರುವ ಕಾಯಿಲೆಗಳು ನಿವಾರಣೆ ಆಗುತ್ತವೆ. ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಸಗಣಿಯಿಂದ ಸ್ನಾನ ಮಾಡಿದರೆ ಗೋಬರ್ ಬಾತ್ ಎನ್ನಬಹುದು. ಗೋಬರ್ ಸ್ನಾನ ಮಾಡುವುದರಿಂದ ಕೊರೊನಾ ರೋಗ ಬ್ಯಾಕ್ಟೀರಿಯಾಗಳು ಬರಲ್ಲ ಎಂದು ರಾಘವೇಂದ್ರ ಅವರು ಹೇಳಿರುವ ವಿಡಿಯೋ ಈಗ ವೈರಲ್ ಆಗಿದೆ. ಆದರೆ ಈ ಸಗಣಿ ಸ್ನಾನದಲ್ಲಿನ ಲಾಭದ ಬಗ್ಗೆ ನಿಜವೆಷ್ಟು, ಸುಳ್ಳೆಷ್ಟು ಎಂಬುದರ ಬಗ್ಗೆ ಮಾತ್ರ ವೈಜ್ಞಾನಿಕ ಮಾಹಿತಿ ಇಲ್ಲ.