ಬಸವರಾಜ ಬೊಮ್ಮಾಯಿ ಅವಧಿ ಪೂರ್ಣಗೊಳಿಸುತ್ತಾರೆ: ನಾರಾಯಣ ಸ್ವಾಮಿ
ಚಿತ್ರದುರ್ಗ, ಆಗಸ್ಟ್ 11: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸಖತ್ ಸದ್ದು ಮಾಡುತ್ತಿದೆ. ಆದರೆ ಈ ವಿಚಾರವನ್ನು ಬಿಜೆಪಿ ನಾಯಕರು ಅಲ್ಲಗೆಳೆಯುತ್ತಿದ್ದಾರೆ. ಆ ಗುಂಪಿಗೆ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಸೇರಿಕೊಂಡಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಬೊಮ್ಮಾಯಿ ಪೂರ್ಣಾವಧಿಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಚುನಾವಣೆ ವೇಳೆ ಆಡಳಿತದಲ್ಲಿ ಗೊಂದಲ ಸೃಷ್ಟಿಗೆ ಕಾಂಗ್ರೆಸ್ ಯತ್ನ ಮಾಡುತ್ತಿದ್ದು, ಈ ಕುತಂತ್ರ ಫಲ ನೀಡುವುದಿಲ್ಲ" ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಸಂಕಲ್ಪದಂತೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಆಡಳಿತ ಅವಧಿ ಪೂರ್ಣಗೊಳ್ಳಲಿದೆ ಎಂದರು.
ಮಂಡ್ಯದಲ್ಲಿ ದಳಪತಿಗಳಿಗೆ ಚಾಟಿ ಬೀಸಿದ ಸಿಎಂ ಬಸವರಾಜ ಬೊಮ್ಮಾಯಿ!
ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವರು, "ಚುನಾವಣೆ ಹತ್ತಿರ ಬರುತ್ತಿದ್ದಾಗ ಪಕ್ಷದಲ್ಲಿ ಗೊಂದಲ ಮೂಡಿಸುವ ಕುತಂತ್ರ ಕಾಂಗ್ರೆಸ್ ಮಾಡುತ್ತಿದೆ. ಆದರೆ ಅವರ ಕುತಂತ್ರ ಫಲಿಸಲ್ಲ. ಯಡಿಯೂರಪ್ಪ ಮಾರ್ಗದರ್ಶನ ಮತ್ತು ಬೊಮ್ಮಾಯಿ ನಾಯಕತ್ವದಲ್ಲಿ 8 ತಿಂಗಳು ಆಡಳಿತ ನಡೆಸುತ್ತೇವೆ. ಅವರಿಬ್ಬರ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ" ಎಂದು ಹೇಳಿದರು.
ದಲಿತ ಸಿಎಂ ಕೂಗಿನ ಬಗ್ಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಖಂಡಿತವಾಗಿ ಎಲ್ಲಾ ಸಮುದಾಯಕ್ಕೂ ಅವಕಾಶ ಸಿಗಬೇಕು. ಬಿಜೆಪಿಯೂ ಹೊರತಾಗಿಲ್ಲ, ಬಿಜೆಪಿ ಎಲ್ಲಾ ವರ್ಗಕ್ಕೆ ಅವಕಾಶ ಕೊಡುತ್ತದೆ" ಎಂದರು.
"ಅಜಾದಿ ಕ ಅಮೃತ ಮಹೋತ್ಸವವನ್ನು ಒಗ್ಗಟ್ಟಿನಿಂದ ಆಚರಿಸಬೇಕು. ಆದರೆ ಸಿದ್ದರಾಮಯ್ಯ 75ನೇ ಸ್ವಾತಂತ್ರ್ಯೋತ್ಸವದ ಬಗ್ಗೆಯೂ ರಾಜಕಾರಣ ಮಾಡುತ್ತಿದ್ದಾರೆ. ದೇಶಪ್ರೇಮದ ಬಗ್ಗೆ ಪ್ರಶ್ನಿಸುವುದು ಅವರಿಗೆ ಶೋಭೆಯಲ್ಲ. ಅವರದ್ದು ಎಂಥಹ ದೇಶಭಕ್ತರೆಂದರೆ ಮೊನ್ನೆ ತಿರಂಗದಲ್ಲಿರುವ ಬಣ್ಣದ ಬಗ್ಗೆ ಹೇಳುತ್ತಾ ಕೇಸರಿ ಬದಲು ಕೆಂಪು ಬಣ್ಣ ಎಂದು ತಪ್ಪಾಗಿ ಹೇಳಿ ಅಜ್ಞಾನ ಪ್ರದರ್ಶಿಸಿದ್ದಾರೆ. ಅಂತಹವರಿಂದ ದೇಶ ಭಕ್ತಿಯ ಬಿಜೆಪಿ, ಸಂಘ ಪರಿವಾರ, ಬಿಜೆಪಿ ಯುವ ಕಾರ್ಯಕರ್ತರು ಪಾಠ ಕಲಿಯುವ ಅವಶ್ಯಕತೆ ಇಲ್ಲ" ಎಂದು ಟೀಕಿಸಿದರು.
"ಇನ್ನು ಜಮ್ಮು- ಜಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದಿದ್ದೇವೆ. ಹಿಂದೂರಾಷ್ಟ್ರದ ಪರಿಕಲ್ಪನೆ, ಸ್ವಾಭಿಮಾನದಿಂದ ಎಲ್ಲಾ ವರ್ಗಗಳ ಜೊತೆ ಸಾಗಿದ್ದೇವೆ. ದೇಶದಲ್ಲಿ ರಾಮರಾಜ್ಯ ನಿರ್ಮಾಣ ಮಾಡುತ್ತೇವೆ. ರಾಮಮಂದಿರ ನಿರ್ಮಾಣದ ಮೂಲಕ ಶಾಂತಿ ಸಂದೇಶ ದೇಶದಲ್ಲಿ ನೀಡುತ್ತೇವೆ" ಎಂದು ತಿಳಿಸಿದರು.
Recommended Video