ಚಿತ್ರದುರ್ಗ; ಜೂ. 4ಕ್ಕೆ ಧರ್ಮಪುರ ಗ್ರಾಮಕ್ಕೆ ಮುಖ್ಯಮಂತ್ರಿಗಳ ಭೇಟಿ
ಚಿತ್ರದುರ್ಗ, ಮೇ 18 : ನೀರಿಗಾಗಿ ನೂರಾರು ವರ್ಷಗಳ ಕಾಲ ಹೋರಾಟ ಮಾಡಿಕೊಂಡು ಬಂದಿರುವ ಜನರಿಗೆ ಈಗ ಜಯ ಸಿಕ್ಕಿದೆ. ಆ ಭಾಗದ ಜನರ ಮೊಗದಲಿ ಹರ್ಷ ತುಂಬಿದ್ದು, ನೀರಿನ ಬವಣೆಯು ದೂರವಾಗುವ ಕಾಲ ಸನ್ನಿಹಿತವಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮಕ್ಕೆ ಜೂನ್ 4ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ತಾಲೂಕಿನ ಐತಿಹಾಸಿಕ ಧರ್ಮಪುರ ಕೆರೆಗೆ ನೀರು ಹರಿಸುವ 90 ಕೋಟಿ ವೆಚ್ಚದ ಕಾಮಗಾರಿ ಶಂಕುಸ್ಥಾಪನೆ ಮಾಡಲಿದ್ದಾರೆ.
ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಮಂಗಳವಾರ ಅಧಿಕಾರಿಗಳು, ಪಕ್ಷದ ಮುಖಂಡರು ಮತ್ತು ಗ್ರಾಮಸ್ಥರೊಂದಿಗೆ ಶಂಕುಸ್ಥಾಪನೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿದರು. ಹೊಸಹಳ್ಳಿ ಚೆಕ್ ಡ್ಯಾಂನಿಂದ ಗೂಳ್ಯ, ಸೂಗೂರು, ಮುಂಗುಸವಳ್ಳಿ, ಹರಿಯಬ್ಬೆ ಹಾಗೂ ಧರ್ಮಪುರ ಕೆರೆಗೆ ಭಾಗದ ಸ್ಥಳ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, "ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದರು ಸಹ ಧರ್ಮಪುರ ಹೋಬಳಿ ಭಾಗದ ಜನರು ಇಂದಿಗೂ ನೀರಿಗಾಗಿ ಬವಣೆ ಪಡುವಂತಾಗಿದೆ. ಇಲ್ಲಿನ ನಾಗರಿಕರ ಸಮಸ್ಯೆಯನ್ನು ನೋಡಿ ನಮ್ಮ ಸರ್ಕಾರ, ಸಿಎಂ, ಸಚಿವರು ಹಾಗೂ ಈ ಕ್ಷೇತ್ರದ ಶಾಸಕಿಯಾಗಿ ಈ ಭಾಗದ ಜನರ ಕನಸನ್ನು ನನಸಾಗಿಸುವ ಕೆಲಸ ಮಾಡುತ್ತಿದ್ದೇವೆ" ಎಂದರು.
"ಸಾಕಷ್ಟು ಜನ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುತ್ತಾರೆ. ಶಾಸಕರು ನೀರು ಹರಿಸುತ್ತೇವೆ ಎಂದು ಸುಮ್ಮನೆ ಹೇಳುತ್ತಾರೆ. ಧರ್ಮಪುರ ಕೆರೆಗೆ ಹಣ ಬಿಡುಗಡೆಯಾಗಿಲ್ಲ, ಟೆಂಡರ್ ಆಗಿಲ್ಲ, ನೀರಿನ ಹಂಚಿಕೆಯಾಗಿಲ್ಲ ಈ ರೀತಿಯಾದ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಕೆಲಸ ಮಾಡಲು ಆಗದವರು ಇಂತಹ ಕಾಮೆಂಟ್ ಮಾಡಲು ಸಾಧ್ಯ" ಎಂದು ತಿರುಗೇಟು ನೀಡಿದರು.
"ಯಾರು ಕೆಲಸ ಮಾಡುತ್ತಾರೋ ಅವರು ಮಾತನಾಡುವುದಿಲ್ಲ, ಮೌನವಾಗಿ ಇದ್ದು, ಅಭಿವೃದ್ಧಿ ಕೆಲಸವನ್ನು ಮಾಡಿ ತೋರಿಸುತ್ತಾರೆ. ನಾನು ಚುನಾವಣೆ ಸಂದರ್ಭದಲ್ಲಿ ಮಾತು ಕೊಟ್ಟಿರಲಿಲ್ಲ. ಆದರೆ ನನ್ನ ತಂದೆ ಹಿಂದೆ ಈ ಕ್ಷೇತ್ರದಲ್ಲಿ ಸೋತಾಗ ಅವರಿಗೆ ಕನಸಿತ್ತು. ಧರ್ಮಪುರ ಕೆರೆಗೆ ನೀರ ಹರಿಸಬೇಕೆಂಬ ಆಸೆ ಇತ್ತು. ನಮ್ಮ ತಂದೆಯ ಕನಸನ್ನು ನನಸು ಮಾಡುವುದರ ಜೊತೆಗೆ ಈ ಭಾಗದ ಜನರ ಆಸೆಯನ್ನು ಈಡೇರಿಸಲಾಗುತ್ತಿದೆ" ಎಂದು ಹೇಳಿದರು.
ಶಾಸಕರ ಬೆಂಬಲಿಗರೊಂದಿಗೆ ಹರಿಯಬ್ಬೆ ಗ್ರಾಮದಿಂದ ಧರ್ಮಪುರ ಕೆರೆಯವರೆಗೂ ಬೈಕ್ ಜಾಥಾ ನಡೆಸಿದರು. ಶಾಸಕಿ ಹೊಂಡಾ ಆಕ್ಟಿವಾ ಬೈಕ್ ಓಡಿಸುವ ಮೂಲಕ ಗಮನ ಸೆಳೆದರು. ಜೂನ್ 4ರಂದು ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ. ಸಿ. ಪಾಟೀಲ್ ಸಹ ಪಾಳ್ಗೊಳ್ಳಲಿದ್ದಾರೆ.