ಚಿತ್ರದುರ್ಗದ ಮುರುಘಾಮಠದಿಂದ ನಟ ಪುನೀತ್ ರಾಜಕುಮಾರ್ ರಿಗೆ ಬಸವಶ್ರೀ ಪ್ರಶಸ್ತಿ
ಚಿತ್ರದುರ್ಗ, ನವೆಂಬರ್ 4: ಖ್ಯಾತನಟ ಪುನೀತ್ ರಾಜಕುಮಾರ್ ಹೃದಯಾಘಾತದಿಂದ ಇತ್ತೀಚೆಗಷ್ಟೇ ವಿಧಿವಶರಾಗಿದ್ದು, ರಾಜ್ಯ ಸೇರಿದಂತೆ ಇಡೀ ಚಿತ್ರರಂಗ ಶೋಕಸಾಗರದಲ್ಲಿದೆ. ಲಕ್ಷಾಂತರ ಅಭಿಮಾನಿ ಬಳಗವನ್ನು ಅಗಲಿರುವ ಪವರ್ ಸ್ಟಾರ್ ಅವರಿಗೆ ಚಿತ್ರದುರ್ಗದ ಮುರುಘಾ ಮಠದಿಂದ ಬಸವಶ್ರೀ ಪ್ರಶಸ್ತಿ ಘೋಷಿಸಲಾಗಿದೆ.
2022ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ಪುನೀತ್ ರಾಜಕುಮಾರ್ ಅವರಿಗೆ ನೀಡುವುದಾಗಿ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಘೋಷಿಸಿದ್ದಾರೆ. ಮುಂದಿನ ವರ್ಷ 2022ರ ಬಸವ ಜಯಂತಿ ದಿನ ಬಸವಶ್ರೀ ಪ್ರಶಸ್ತಿ ಪ್ರಧಾನ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಚಿತ್ರದುರ್ಗದ ಮುರುಘಾಮಠ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, ಮುರುಘಾಮಠದ ಅನುಭವ ಮಂಟಪದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪುನೀತ್ ಪತ್ನಿ ಅಶ್ವಿನಿ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಬಸವಶ್ರೀ ಪ್ರಶಸ್ತಿಯ ಮೊತ್ತ ಐದು ಲಕ್ಷ ರೂ ನಗದು ಹಾಗೂ ಸ್ಮರಣಿಕೆ ನೀಡಿ ಒಳಗೊಂಡಿದೆ.
ಶಿವರಾಜಕುಮಾರ್ ಅವರಿಗೂ ಆಹ್ವಾನ:
ಬಸವಶ್ರೀ ಪ್ರಶಸ್ತಿಯ ಮೊತ್ತ ಐದು ಲಕ್ಷ ರೂಪಾಯಿಗಳ ಜೊತೆಗೆ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್ ಅವರನ್ನೂ ಆಹ್ವಾನಿಸಲಾಗುವುದು ಎಂದು ಮುರುಘಾ ಮಠದ ಪೀಠಾಧಿಪತಿ ಡಾ. ಶಿವಮೂರ್ತಿಯವರು ತಿಳಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರವಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಪದ್ಮಶ್ರೀ ಗೌರವ ನೀಡಬೇಕೆಂಬ ಒತ್ತಾಯವೂ ಕೇಳಿ ಬರುತ್ತಿದೆ.
''ಯಾವ ಪ್ರಶಸ್ತಿ ಗೌರವಗಳಿಗಿಂತಲೂ ಪುನೀತ್ ರಾಜಕುಮಾರ್ ಜನತೆಯಿಂದ ಗಳಿಸಿರುವ ಪ್ರೀತಿ-ಅಭಿಮಾನ ದೊಡ್ಡದು. ಹೀಗಿದ್ದರೂ, ಪುನೀತ್ ಬದುಕಿದ್ದರೆ ತನ್ನ ನಟನೆ ಮತ್ತು ಸಾಮಾಜಿಕ ಕಾಳಜಿಯಿಂದಾಗಿ ಖಂಡಿತ ಪಡೆಯುತ್ತಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಅವರಿಗೆ ಮರಣೋತ್ತರವಾಗಿ ನೀಡಬೇಕೆಂದು ಮನವಿ ಮಾಡುತ್ತೇನೆ'' ಎಂದು ಸಿದ್ದರಾಮಯ್ಯ ಇಂದು ಟ್ವೀಟ್ ಮಾಡಿದ್ದರು, ಸಿದ್ದರಾಮಯ್ಯ, ಟ್ವೀಟ್ಗೆ ಹಲವರು ಸಮ್ಮತಿ ಸೂಚಿಸಿದ್ದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕೆಂದು ಸಹ ಒತ್ತಾಯ ಕೇಳಿಬಂತಾದರೂ, ಮರಣೋತ್ತರವಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡಲು ನಿಯಮಾವಳಿಗಳು ಹಾಗೂ ಕೋರ್ಟ್ ಆದೇಶಗಳು ಅಡ್ಡಿ ಬರುತ್ತದೆಯೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಸ್ಪಷ್ಟನೆ ನೀಡಿದರು.