ಹಿರಿಯೂರಲ್ಲಿ ಕಳೆದುಕೊಂಡಿದ್ದ ಮಗು ಇಂದು ತಂದೆಯ ಮಡಿಲು ಸೇರಿತು
ಚಿತ್ರದುರ್ಗ, ಜನವರಿ 17: ಪೋಷಕರನ್ನು ಕಳೆದುಕೊಂಡು ಒಬ್ಬಂಟಿಯಾಗಿ ಇದ್ದ ಪುಟ್ಟ ಕಂದ ಕೊನೆಗೂ ಇಂದು ತಂದೆಯ ಮಡಿಲು ಸೇರಿದ್ದಾನೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ನಂದಿಹಳ್ಳಿ ಗ್ರಾಮದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಬಳಿ ತಾಯಿ ಮಗುವನ್ನು ಬಿಟ್ಟು ಹೋಗಿದ್ದಳು.
ಮಗು ಒಂಟಿಯಾಗಿದ್ದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ಸಹಾಯದಿಂದ ಮಗು ಚಿತ್ರದುರ್ಗದ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಬಳಿ ಸುರಕ್ಷಿತವಾಗಿತ್ತು. ಇದರ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ನೋಡಿ, ಮಗುವನ್ನು ಹುಡಿಕಿಕೊಂಡು ತಂದೆ ಕೃಷ್ಣಾಪುರ ಗ್ರಾಮದ ಗಿರೀಶ್ ನಂದಿಹಳ್ಳಿಗೆ ಬಂದಿದ್ದಾನೆ.
ನಂತರ ಹಿರಿಯೂರು ಪೋಲಿಸ್ ಠಾಣೆಯಲ್ಲಿ ಮಾಹಿತಿ ಪಡೆದು ಚಿತ್ರದುರ್ಗದ ಮಕ್ಕಳ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕ ಮಾಡಿ ಮಗುವನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಮಗುವಿನ ತಂದೆ ಗಿರೀಶ್, ಆಸ್ಪತ್ರೆಗೆ ಹೋಗುವುದಾಗಿ ಹೆಂಡತಿ ಮಹಾಲಕ್ಷ್ಮಿ ಹೇಳಿದ್ದಳು, ಆದರೆ ಇದುವರಿಗೂ ಮಹಾಲಕ್ಷ್ಮಿ ಮನೆಗೆ ಬಂದಿಲ್ಲ. ಕಳೆದ ಸೋಮವಾರದಿಂದಲೇ ಹೆಂಡತಿ ನಾಪತ್ತೆಯಾಗಿದ್ದಾಳೆ ಎಂದಿದ್ದಾರೆ.
ದೇವಸ್ಥಾನದಲ್ಲಿ ಕಳೆದುಕೊಂಡ ಮಗು ಜಿಲ್ಲಾ ಮಕ್ಕಳ ಸಂರಕ್ಷಣ ಅಧಿಕಾರಿಗಳಲ್ಲಿ ಸುರಕ್ಷಿತ
ಇನ್ನು ಇತ್ತ ಮಗುವನ್ನು ನಂದಿಹಳ್ಳಿ ದೇವಸ್ಥಾನದಲ್ಲಿ ಬಿಟ್ಟು ತಾಯಿ ಮಹಾಲಕ್ಷ್ಮಿ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಪತ್ನಿ ಕಾಣೆಯಾಗಿರುವ ಬಗ್ಗೆ ಇನ್ನೂ ಪ್ರಕರಣ ದಾಖಲಿಸದ ಗಿರೀಶ್. ಮಗು ಕಾಣೆಯಾದ ಬಗ್ಗೆ ದಾಖಲೆಗಳನ್ನು ಹಾಜರು ಪಡಿಸಿ ಮಗುವನ್ನು ವಶಕ್ಕೆ ಪಡೆದಿದ್ದಾರೆ.
ಗಿರೀಶ್ ಅವರು ಸಹೋದರ, ಅತ್ತಿಗೆ ಜೊತೆ ಬಂದು ಮಕ್ಕಳ ಕಲ್ಯಾಣ ಸಮಿತಿಯಿಂದ ಮಗುವನ್ನು ಪಡೆದುಕೊಂಡಿದ್ದಾರೆ.