ಬೆಂಕಿ ಹಚ್ಚೋ ಕೆಲಸ ಇದು ಎಂದು ಶ್ರೀರಾಮುಲು ಹೇಳಿದ್ದು ಯಾರಿಗೆ?
ಚಿತ್ರದುರ್ಗ, ನವೆಂಬರ್ 4: ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಸಿಎಂ ಆಡಿಯೋ ವಿಚಾರವನ್ನೇ ಇಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಮ್ಮನೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆಂದು ಆರೋಗ್ಯ ಸಚಿವ ಶ್ರೀರಾಮುಲು ದೂರಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, "ಬಿಜೆಪಿಯಲ್ಲಿ ಬಿಎಸ್ ವೈ ಅವರನ್ನು ಕೆಳಗಿಳಿಸುವವರು ಯಾರೂ ಇಲ್ಲ. ಆಡಿಯೋ ವಿಚಾರವನ್ನು ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಆದರೆ ಇದೇ ವಿಚಾರವನ್ನು ಹಿಡಿದುಕೊಂಡು ಸಿದ್ದರಾಮಯ್ಯ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸವದಿ, ಬೊಮ್ಮಯಿ ತಲೆಯಲ್ಲಿ ಹುಳ ಬಿಟ್ಟು ಚುನಾವಣೆ ವೇಳೆ ಜಗಳ ಹಚ್ಚುವ ಕೆಲಸ ಮಾಡ್ತಿದ್ದಾರೆ. ಅದು ಬಿಎಸ್ ವೈ ಅವರ ಆಡಿಯೊ ಅಲ್ಲ, ಬೋಗಸ್ ಆಡಿಯೋ" ಎಂದು ಆರೋಪಿಸಿದರು.
ಶ್ರೀರಾಮುಲು ಯಾಕೆ ಹೀಗಂದ್ರು, ಸರ್ಕಾರದ ಆಯಸ್ಸು ಇಷ್ಟೇನಾ?
ಅವರ ಮಾತು ನೆರೆ ಹಾವಳಿ ಪರಿಹಾರ ವಿಚಾರಕ್ಕೆ ತಿರುಗಿ, "ನೆರೆಹಾವಳಿಯಿಂದ ಸಂಕಷ್ಟ ಅನುಭವಿಸಿದ ಜನರಿಗೆ ಪರಿಹಾರದ ಹಣ ತಲುಪಿಸುವ ಕೆಲಸ ಮಾಡ್ತಿದ್ದೇವೆ. ಉಸ್ತುವಾರಿ ಹೊತ್ತಿರುವ ಸಚಿವರು ಪಾರದರ್ಶಕ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಎಸ್ ವೈ ಸರ್ಕಾರ ಬಂದಾಗಿನಿಂದ ಜನರು ಸಂತೋಷವಾಗಿದ್ದಾರೆ" ಎಂದರು.
ಎಂ.ಬಿ ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಶ್ರೀರಾಮುಲು, "ಯಾರು ಚಿಲ್ಲರೆ, ನೋಟು ಬಂದ ರಾಜಕಾರಣ ಮಾಡುತಿದ್ದಾರೆಂಬುದು ಜನರಿಗೆ ತಿಳಿದಿದೆ. ಅದಕ್ಕೇ ಜನ ಅರ್ಥ ಮಾಡಿಕೊಂಡು ಕಾಂಗ್ರೆಸ್ ನೆಲಕಚ್ಚುವಂತೆ ಮಾಡಿದ್ದಾರೆ. ಹಾಗಾಗಿ ಹತಾಶರಾಗಿ ಎಂ ಬಿ ಪಾಟೀಲ್ ಈ ರೀತಿ ಮಾತನಾಡ್ತಿದ್ದಾರೆ ಅಷ್ಟೆ. ಕಾಂಗ್ರೆಸ್ ಪಕ್ಷದ ತಾಕತ್ತನ್ನು ತೋರಿಸಲಿ, ಈ ಕುರುಕ್ಷೇತ್ರ ಯುದ್ಧದಲ್ಲಿ ಚಾಣಾಕ್ಯ ತಂತ್ರ ತೋರಿಸ್ತಿವಿ, ಎಷ್ಟೇ ತಂತ್ರ ಮಾಡಿದ್ರೂ ಆಡಳಿತ ಸರ್ಕಾರದ ಪರ ಜನರ ಒಲವಿರುತ್ತೆ" ಎಂದರು.
ಯಡಿಯೂರಪ್ಪ ಆಡಿಯೋ ನಕಲಿ ಆಗಿರುವ ಸಾಧ್ಯತೆ ಹೆಚ್ಚಿದೆ: ಶ್ರೀರಾಮುಲು
"ಡಿಕೆಶಿ ಜೈಲಲ್ಲಿದ್ದಾಗಲೇ ಪಟ್ಟಿ ಬಿಡುಗಡೆ ಮಾಡಿದ್ರು, ಇತ್ತ ಡಿಕೆಶಿ ಸ್ವಲ್ಪ ದಿನ ಜೈಲಲ್ಲೇ ಇರ್ತಾರೆ ಅಂತ ಸಿದ್ದರಾಮಯ್ಯ ಭಾವಿಸಿದ್ರು. ಆದರೆ ಡಿಕೆಶಿ ಹೊರ ಬಂದ ಮೇಲೆ ಸಿದ್ದರಾಮಯ್ಯಗೆ ಸಮಾಧಾನವಿಲ್ಲ, ಹಾಗಾಗಿ ಬಾಯಿಗೆ ಬಂದ ಹಾಗೆ ಮಾತನಾಡ್ತಿದ್ದಾರೆ" ಎಂದು ತಿರುಗೇಟು ನೀಡಿದರು.