ಚಿತ್ರದುರ್ಗದಲ್ಲಿ ಆಯುರ್ವೇದ ವೈದ್ಯನಿಗೆ ಕೊರೊನಾ ವೈರಸ್
ಚಿತ್ರದುರ್ಗ, ಜೂನ್ 23: ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ವೈದ್ಯರೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯ ಹಿರಿಯೂರಿನ ವೇದಾವತಿ ನಗರದಲ್ಲಿ ಆಯುರ್ವೇದ ವೈದ್ಯರೊಬ್ಬರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಳಿ ಇರುವ ಚೌಳು ಹಿರಿಯೂರಿನಲ್ಲಿ ಆಯುರ್ವೇದಿಕ್ ವೈದ್ಯವಾಗಿ ಕಾರ್ಯ ನಿರ್ವಹಿಸಿದ್ದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕ್ವಾರಂಟೈನ್ ಆಗಿದ್ದವರಿಗೆ ಚಿಕಿತ್ಸೆ ನೀಡಲು ಇವರು ನಿಯೋಜನೆಗೊಂಡಿದ್ದರು. ಇದೀಗ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರನ್ನು ಚಿತ್ರದುರ್ಗ ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸಂಪರ್ಕದಲ್ಲಿದ್ದ ಮನೆಯವರನ್ನು ಕ್ವಾರಂಟೈನ್ ನಲ್ಲಿ ಇರಿಸಿ ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರ ಮನೆಯನ್ನು ಸಿಲ್ ಡೌನ್ ಮಾಡಲಾಗಿದೆ.
ಹೆಚ್ಚಿದ ಕೊರೊನಾ ಸೋಂಕು: ಚನ್ನಗಿರಿಯಲ್ಲಿ ಲಾಕ್ಡೌನ್
ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಶಿರಾದ ಸೋಂಕಿತ ಮಹಿಳೆ: ಹಿರಿಯೂರು ಮತ್ತು ಶಿರಾ ಮೂಲದ ಮಹಿಳೆಯಿಂದ ಇದೀಗ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 43 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರೆಲ್ಲ ಗುಣಮುಖರಾಗಿ ಕೊವಿಡ್ ಮುಕ್ತವಾಗಿದ್ದ ಜಿಲ್ಲೆಗೆ ಮತ್ತೆ ಈಗ ಕೊರೊನಾ ವಕ್ಕರಿಸಿದಂತಾಗಿದೆ.
ಹಿರಿಯೂರಿನ ಮಹಿಳೆಗೆ ಕೊರೊನಾ ವೈರಸ್: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯೂರಿನ 29 ವರ್ಷದ ಮಹಿಳೆ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿದ್ದರು. ತನ್ನ ಅಣ್ಣನ ಮನೆಯಲ್ಲಿ ಉಳಿದಿದ್ದರು. ಅಲ್ಲಿಂದ ಹಿಂತಿರುಗಿ ಬಂದ ನಂತರ ಆ ಮಹಿಳೆ ಮತ್ತು ಆಕೆಯ 8 ವರ್ಷದ ಮಗನಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಪ್ರಾಥಮಿಕ ಸಂಪರ್ಕ ಹೊಂದಿದ್ದ 9 ಮಂದಿಯ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಬೆಂಗಳೂರಿನಿಂದ KSRTC ಬಸ್ಸಿನಲ್ಲಿ ಸೋಂಕಿತ ಮಹಿಳೆಯ ಜೊತೆ ಚಿತ್ರದುರ್ಗ ಮಾರ್ಗವಾಗಿ ಪ್ರಯಾಣಿಸಿದ್ದ 17 ಜನರ ಪತ್ತೆ ಮಾಡಲಾಗುತ್ತಿದೆ. ಈ ನಡುವೆ ಮೊನ್ನೆ ಹಿರಿಯೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದ ಶಿರಾ ಮೂಲದ ಮಹಿಳೆಗೂ ಕೊರೊನಾ ಸೋಂಕು ದೃಢಪಟ್ಟಿದೆ. ಹಿರಿಯೂರಿನ ಖಾಸಗಿ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಿ, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯನ್ನೂ ಕ್ವಾರೆಂಟೈನ್ ಮಾಡಲಾಗಿದೆ.
ಸೋಂಕಿತ ಮಹಿಳೆಯರು ಮತ್ತಷ್ಟು ಜನರ ಜೊತೆ ಸಂಪರ್ಕ ಹೊಂದಿರಬಹುದಾದ ಶಂಕೆ ವ್ಯಕ್ತವಾಗಿದೆ. ಹಿರಿಯೂರಿನ ಸೋಂಕಿತ ಮಹಿಳೆ ಜೊತೆ ಪ್ರಯಾಣಿಸಿದ್ದ 17 ಜನರಿಂದ ಸಾಮೂಹಿಕವಾಗಿ ಸೋಂಕು ಹರಡುವ ಭೀತಿ ಎದುರಾಗಿದೆ.