ಅಯೋಧ್ಯೆ ಕುರಿತ ದಶರಥ ರಾಮೇಶ್ವರನ ಭವಿಷ್ಯ ನಿಜವಾಯ್ತ? ಅಯೋಧ್ಯೆಗೂ, ಚಿತ್ರದುರ್ಗಕ್ಕೂ ಏನಿದು ನಂಟು?
ಚಿತ್ರದುರ್ಗ, ನವೆಂಬರ್ 11: ರಾಮ ಜನ್ಮಭೂಮಿ - ಬಾಬರಿ ಮಸೀದಿ ಪ್ರಕರಣದ ಶತಮಾನದ ಅಯೋಧ್ಯೆ ವಿವಾದಕ್ಕೆ ಸರ್ವೋಚ್ಚ ನ್ಯಾಯಾಲಯ ಎರಡು ದಿನಗಳ ಹಿಂದೆ ತೆರೆ ಎಳೆದಿದೆ. ವಿವಾದಿತ ಭೂಮಿ ಮಂದಿರಕ್ಕೆ, ಮಸೀದಿಗೆ ಪ್ರತ್ಯೇಕ ಜಾಗ ಹಂಚಿಕೆ ಮಾಡಿ ತೀರ್ಪು ನೀಡಲಾಗಿದೆ. ಆದರೆ ಹೀಗೊಂದು ತೀರ್ಪು ದೊರಕುವ ಕುರಿತು 2017ರಲ್ಲೇ ಚಿತ್ರದುರ್ಗದಲ್ಲಿ ಭವಿಷ್ಯ ನುಡಿಯಲಾಗಿತ್ತು. ವಿವಾದಿತ ಸ್ಥಳದಲ್ಲಿಯೇ ರಾಮಮಂದಿರ ನಿರ್ಮಾಣ ಆಗಲಿದೆ ಎಂದು ಅಂದು ನುಡಿದಿದ್ದ ಭವಿಷ್ಯ ಈಗ ನಿಜವಾಗಿದೆ.
ಅಯೋಧ್ಯೆ ರಾಮಮಂದಿರಕ್ಕೂ ಕೋಟೆನಾಡು ಚಿತ್ರದುರ್ಗಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಶ್ರೀರಾಮ ಚಿತ್ರದುರ್ಗಕ್ಕೆ ಬಂದಿದ್ದು ಯಾವಾಗ? ಅಯೋಧ್ಯೆ ತೀರ್ಪಿಗೂ ಚಿತ್ರದುರ್ಗದಲ್ಲಿನ ದೇವಸ್ಥಾನಕ್ಕೂ ಎಲ್ಲಿಯ ನಂಟು? ಈ ಎಲ್ಲಾ ಪ್ರಶ್ನೆಗಳ ಹುಡುಕಾಟದ ಹಾದಿಯಲ್ಲಿ ಸಿಕ್ಕ ಉತ್ತರ ಇಲ್ಲಿದೆ...
ಗುಡ್ಡದ ನೇರಲಕೆರೆಯಲ್ಲಿ ದಶರಥನ ಪುರಾಣ
ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಗುಡ್ಡದ ನೇರಲಕೆರೆ ಹತ್ತಿರವಿರುವ ದಶರಾಮೇಶ್ವರ ವಜ್ರ ಎಂಬ ಪ್ರದೇಶಕ್ಕೂ ಅಯೋಧ್ಯೆಗೂ ಒಂದು ನಂಟಿದೆ ಎನ್ನುತ್ತಿದೆ ಪುರಾಣ. ಅಂದು ಅಯೋಧ್ಯೆಯ ಅರಸ ದಶರಥ ಮಹಾರಾಜನು ಪ್ರಜೆಗಳ ರಕ್ಷಣೆಗಾಗಿ ದಕ್ಷಿಣಾಭಿಮುಖವಾಗಿ ಬೇಟೆಗೆ ಬಂದಿದ್ದನು. ಈ ವೇಳೆ ಶ್ರವಣಕುಮಾರ ಎಂಬ ಯುವಕ, ವಯಸ್ಸಾದ ಅಂಧ ತಂದೆ ತಾಯಿಯನ್ನು ಇಲ್ಲಿಗೆ ಕರೆತಂದಿದ್ದನು. ಆಗ ಬಾಯಾರಿಕೆಯಿಂದ ಕಂಗಾಲಾಗಿದ್ದ ಪೋಷಕರಿಗೆ ನೀರು ತರಲು ಶ್ರವಣಕುಮಾರ ಹೋಗಿದ್ದನು. ಬೇಟೆಯ ಗುಂಗಿನಲ್ಲಿದ್ದ ದಶರಥನು ಶ್ರವಣಕುಮಾರ ನೀರು ತುಂಬಿಕೊಳ್ಳುತ್ತಿದ್ದ ಶಬ್ದ ಆಲಿಸಿ "ಶಬ್ದವೇದಿ" ಎಂಬ ಬಾಣ ಪ್ರಯೋಗ ಮಾಡಿದ್ದರಿಂದ ಶ್ರವಣಕುಮಾರ ಅಲ್ಲಿಯೇ ಹತನಾಗಿದನು. ತನ್ನ ತಪ್ಪಿನಿಂದಾದ ಕೃತ್ಯಕ್ಕೆ ಶ್ರವಣ ಕುಮಾರನ ವೃದ್ಧ ತಂದೆ ತಾಯಿಗಳಿಗೆ ಕ್ಷಮೆಯಾಚಿಸಿದ್ದಾನೆ. ಕ್ಷಮೆ ಯಾಚಿಸಿದರೂ ದಶರಥರಿಗೆ ನೀನು ಸಹ ನಮ್ಮಂತೆ ನಿನ್ನ ವೃದ್ಧಾಪ್ಯದಲ್ಲಿ ನಿನ್ನ ಮಕ್ಕಳಿಂದ ದೂರವಾಗು ಅಂತ ಶಾಪವಿಟ್ಟರು.
2024ರಲ್ಲಿ ಮಂದಿರ ನಿರ್ಮಾಣ ಪೂರ್ಣ, ರಾಮ ದರ್ಶನ ಪ್ರಾಪ್ತಿ
ದಶರಥ ರಾಮೇಶ್ವರ ಹೆಸರು ಬಂದಿದ್ದು ಹೀಗೆ...
ಅರಣ್ಯ ಪ್ರದೇಶದಲ್ಲಿ ದಶರಥನ ಶಬ್ದವೇದಿ ಬಾಣಕ್ಕೆ ಶ್ರವಣ ಕುಮಾರ ಬಲಿಯಾದ ಹಿನ್ನೆಲೆಯಲ್ಲಿ ಶಾಪವಿಮೋಚನೆಗೆ ದಶರಥ ಹೊಸದುರ್ಗ ತಾಲೂಕಿನಲ್ಲಿ ಶಿವಲಿಂಗ ಸ್ಥಾಪಿಸಿ ಪೂಜಿಸಿದ್ದನು. ವನವಾಸ ಪೂರೈಸಿ ಲಂಕೆಯಿಂದ ಅಯೋಧ್ಯೆಗೆ ಹಿಂತಿರುಗುತ್ತಿದ್ದ ಶ್ರೀರಾಮ ಇಲ್ಲಿನ ಶಿವಲಿಂಗವನ್ನು ಪೂಜಿಸಿ ದಶರಥನಿಗೆ 14ನೇ ವರ್ಷದ ಪಿತೃಪಕ್ಷದ ತರ್ಪಣ ಕಾರ್ಯ ನೆರವೇರಿಸಿದ ಎನ್ನಲಾಗಿದೆ. ದಶರಥ ಸ್ಥಾಪಿಸಿ ಪೂಜಿಸಿದ ಲಿಂಗವನ್ನು ಶ್ರೀ ರಾಮನು ಪೂಜಿಸಿದ ಕಾರಣ ಈ ಲಿಂಗಕ್ಕೆ ಮತ್ತು ಕ್ಷೇತ್ರಕ್ಕೆ ದಶರಥ ರಾಮೇಶ್ವರ ಎನ್ನುತ್ತಾರೆ. ದೇಗುಲದಿಂದ ಸ್ವಲ್ಪ ದೂರದಲ್ಲಿ ಶ್ರವಣ ಕುಮಾರನ ಸಮಾಧಿ ಇದ್ದು, ಕೆಲ ತಿಂಗಳ ಹಿಂದೆ ಅಯೋಧ್ಯೆಯಿಂದ ಬಂದ ಅಧಿಕಾರಿಗಳು ಬೋರ್ಡ್ ಹಾಕಿ ಹೋಗಿದ್ದಾರೆ.
ನಿಜವಾದ ರಾಮ ಮಂದಿರ ನಿರ್ಮಾಣದ ಭವಿಷ್ಯ
ಶ್ರೀರಾಮ ವನವಾಸದ ಅವಧಿಯಲ್ಲಿ ಸಂದರ್ಶಿಸಿದ್ದ ಎನ್ನಲಾದ 290 ಕ್ಷೇತ್ರಗಳ ಪೈಕಿ ದಶರಥ ರಾಮೇಶ್ವರವೂ (ದೊಡ್ಡ ವಜ್ರ) ಒಂದಾಗಿದೆ. ರಾಮಾಯಣ ಕಾಲದ ಐತಿಹಾಸಿಕ ಸ್ಥಳಗಳನ್ನು ಸಂಶೋಧಿಸಲು ಶ್ರೀರಾಮ ಸಂಸ್ಕೃತಿ ಶೋಧ ಸಂಸ್ಥಾನ ನ್ಯಾಸದ ತಂಡ 2017ರಲ್ಲಿ ಈ ಕ್ಷೇತ್ರಕ್ಕೆ ಭೇಟಿ ನೀಡಿತ್ತು. ಭಕ್ತರಿಗೆ ಭವಿಷ್ಯ ನುಡಿಯುತ್ತಿದ್ದ ದೇವರ ಬಳಿ ನ್ಯಾಸ ತಂಡದ ಸದಸ್ಯರು ರಾಮ ಮಂದಿರದ ಕುರಿತು ಭವಿಷ್ಯ ಕೇಳಿದ್ದರು. ಆಗ 2018ರ ಬಸವಜಯಂತಿ ಬಳಿಕ ರಾಮ ಮಂದಿರ ನಿರ್ಮಾಣಕ್ಕೆ ಪೂರಕ ಶುಭ ಸೂಚನೆ ದೊರೆಯಲಿದೆ. ಆನಂತರ ಮುಂದಿನ 9 ತಿಂಗಳ ಬಳಿಕ ಮಂದಿರ ನಿರ್ಮಾಣಕ್ಕೆ ಅವಕಾಶ ಒದಗಿಬರಲಿದೆ. ಅಯೋಧ್ಯೆಯ ವಿವಾದಿತ ಜಾಗದಲ್ಲೇ ದೇಗುಲ ನಿರ್ವಣವಾಗಲಿದೆ ಎಂದು ತಿಳಿಸಲಾಗಿತ್ತು. ನ್ಯಾಸದ ಮುಖ್ಯಸ್ಥ ರಾಮಾವತಾರ್ ಕೂಡ ಹಲವು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಇಲ್ಲಿನ ಕುರುಹುಗಳನ್ನು ಪರಿಶೀಲಿಸಿ ಶ್ರೀರಾಮ ಇಲ್ಲಿಗೆ ಭೇಟಿ ನೀಡಿದ್ದನ್ನು ದೃಢಪಡಿಸಿದ್ದರು.
ಇವರೇ ಅಯೋಧ್ಯೆ ವಿವಾದದ ಹಿಂದಿನ ಸೂತ್ರದಾರ!
ಈ ಭಾಗದ ಆರಾಧ್ಯದೈವ ದಶರಥ
ಶ್ರೀರಾಮ ಕೂಡ ತನ್ನ ವನವಾಸಕ್ಕೆ ಬಂದಿದ್ದ ವೇಳೆ ಈ ಪ್ರದೇಶಕ್ಕೆ ಬಂದಿದ್ದನು, ಇಲ್ಲಿ ಕೆಲಕಾಲ ನೆಲೆಸಿದ್ದನು ಎಂಬುದಕ್ಕೆ ಇಲ್ಲಿ ಕುರುಹುಗಳಿವೆ. ಸೀತಾಮಾತೆಯನ್ನು ಅಪಹರಿಸಿದ್ದ ಲಂಕಾಧಿಪತಿಯಿಂದ ಸೀತೆಯನ್ನು ಬಿಡಿಸಿಕೊಂಡು ಹೋಗಲು ಬರುವಾಗ ಇಲ್ಲಿಗೆ ಬಂದಿದ್ದನು ಎಂಬ ಪುರಾಣವಿದೆ. ದಶರಥರಾಮೇಶ್ವರ ಸ್ವಾಮಿಯು ಈ ಭಾಗದ ಆರಾಧ್ಯ ದೈವವಾಗಿದ್ದು, ದಟ್ಟಡವಿಯ ಬೆಟ್ಟದ ಮೇಲಿರುವ ಸ್ವಾಮಿಗೆ ಪ್ರತಿ ಸೋಮವಾರ ವಿಶೇಷ ಪೂಜಾ ಕೈಂಕಾರ್ಯಗಳು ನಡೆಯುತ್ತವೆ. ವಿವಿಧೆಡೆಯಿಂದ ಭಕ್ತರು ರಾಮನ ಪೂಜೆಗೆ ಇಲ್ಲಿಗೆ ಬರುತ್ತಾರೆ. ಅವರ ಇಷ್ಟಾರ್ಥ ಸಿದ್ಧಿಗಾಗಿ ಹೇಳಿಕೆಗಳನ್ನು ಸಹ ಕೇಳುತ್ತಾರೆ.