ತೆಂಗಿನಕಾಯಿ ಒಡೆಯುವ ವಿಚಾರಕ್ಕೆ ದೇವಸ್ಥಾನ ಪೂಜಾರಿಯಿಂದ ಭಕ್ತನ ಮೇಲೆ ಹಲ್ಲೆ
ಚಿತ್ರದುರ್ಗ, ಮಾರ್ಚ್ 7: ದೇವರಿಗೆ ತೆಂಗಿನಕಾಯಿ ಒಡೆದುಕೊಡು ಎಂದು ಕೇಳಿದ ಅದೇ ಗ್ರಾಮದ ವ್ಯಕ್ತಿಗೆ ದೇವಸ್ಥಾನದ ಪೂಜಾರಿ ತೆಂಗಿನಕಾಯಿ ಒಡೆಯುವ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಅಬ್ಬಿನಹೊಳೆ ವ್ಯಾಪ್ತಿಯಲ್ಲಿ ಬರುವ ಟಿ.ಗೊಲ್ಲರಹಟ್ಟಿಯ ಗೊಲ್ಲಾಳಮ್ಮ ದೇವಿಯ ಜಾತ್ರೆ ಕಳೆದ ಎರಡ್ಮೂರು ದಿನಗಳಿಂದ ನಡೆದಿದೆ. ಭಾನುವಾರ ಕೊನೆಯ ದಿನವಾಗಿದ್ದು, ದೇವಿಯು ಗ್ರಾಮದೊಳಗೆ ಬರುವ ಸಂಪ್ರದಾಯವಿದೆ.
ಶಾಸಕ ಗೂಳಿಹಟ್ಟಿ ಶೇಖರ್ ತಾಯಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ
ಇದೇ ಸಮಯದಲ್ಲಿ ಗ್ರಾಮಸ್ಥರು ದೇವಸ್ಥಾನಕ್ಕೆ ಹೋಗಿ ಹಣ್ಣು-ಕಾಯಿ ಮಾಡಿಸಿ ಪೂಜೆ ಮಾಡಿಸಿಕೊಂಡು ಬರುವುದು ಪದ್ಧತಿ. ಅದರಂತೆ ಅದೇ ಗ್ರಾಮದ ಶೇಖರ್ ದೇವಸ್ಥಾನಕ್ಕೆ ಹೋಗಿ ಹಣ್ಣು ಕಾಯಿ ಪೂಜೆ ಮಾಡಿಕೊಡಿ ಎಂದು ಭರತ್ ಎನ್ನುವ ಪೂಜಾರಿಗೆ ಕೇಳಿದ್ದಾನೆ.
ಆದರೆ ಪೂಜಾರಿ ಭರತ್ ಭಕ್ತನನ್ನು ಹಿಂದೆ ಸರಿಯುವಂತೆ ಹೇಳಿದ್ದಾನೆ. ಶೇಖರ್ ಇನ್ನೊಮ್ಮೆ ಹಣ್ಣು-ಕಾಯಿ ಪೂಜೆ ಮಾಡಿಕೊಡುವಂತೆ ಕೇಳಿದ್ದಕ್ಕೆ, ಪೂಜೆ ಮಾಡಿಕೊಡುವ ಬದಲು ಕೈಲಿದ್ದ ಮಚ್ಚಿನಿಂದ ಏಕಾಏಕಿ ತಲೆಗೆ ಹಲ್ಲೆ ಮಾಡಿದ್ದಾನೆ.
ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಶೇಖರ್, ಹಿರಿಯೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರಕರಣ ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಈ ಘಟನೆಗೆ ಹಳೇ ವೈಷಮ್ಯ ಕಾರಣವೆಂದು ಸಾರ್ವಜನಿಕರ ವಲಯದಲ್ಲಿ ಮಾತು ಕೇಳಿ ಬಂದಿದ್ದು, ಸದ್ಯಕ್ಕೆ ದೇವಸ್ಥಾನ ಬಾಗಿಲು ಹಾಕಲಾಗಿದೆ. ದೇವಸ್ಥಾನ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ ಎಂದು ತಿಳಿದು ಬಂದಿದೆ.