ಹಣದಾಸೆಗೆ ಗ್ರಾಹಕ ಸಿಲಿಂಡರ್ಗಳನ್ನು ಆಟೋಗಳಿಗೆ ಅಕ್ರಮವಾಗಿ ಫಿಲ್ಲಿಂಗ್ ಮಾಡುವ ದಂಧೆ!
ಚಿತ್ರದುರ್ಗ, ಮಾರ್ಚ್ 7: ಗ್ರಾಹಕರಿಗೆ ತಲುಪಿಸುವ ಅಡುಗೆ ಸಿಲಿಂಡರ್ಗಳನ್ನು ಗ್ಯಾಸ್ ಏಜೆನ್ಸಿಯ ಸಿಬ್ಬಂದಿಗಳು ದುಡ್ಡಿನ ಆಸೆಗಾಗಿ ಅನಧಿಕೃತವಾಗಿ ಆಟೋ ಸಿಲಿಂಡರ್ಗಳಿಗೆ ಕಳ್ಳ ದಂಧೆಯಲ್ಲಿ ಗ್ಯಾಸ್ ಫಿಲ್ಲಿಂಗ್ ಮಾಡುತ್ತಿದ್ದಾರೆ ಎನ್ನುವ ಆರೋಪ ಚಿತ್ರದುರ್ಗ ಜಿಲ್ಲೆಯಲ್ಲಿ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಶಿಕ್ಷಕರ ಬಡಾವಣೆಯ ವೆಂಕಟಾದ್ರಿ ಭಾರತ್ ಗ್ಯಾಸ್ ಏಜೆನ್ಸಿಯ ಜಾಗದಲ್ಲಿ ಎರಡು ಲಾರಿಗಳ ಮಧ್ಯೆದಲ್ಲಿ, ತುಂಬಿದ ಸಿಲಿಂಡರ್ ನಲ್ಲಿರುವ ಗ್ಯಾಸ್ ಅನ್ನು ಆಟೋ ಸಿಲಿಂಡರ್ಗಳಿಗೆ ಅನಧಿಕೃತವಾಗಿ ಗ್ಯಾಸ್ ಫಿಲ್ಲಿಂಗ್ ಮಾಡುವ ವಿಡಿಯೋ ಹರಿದಾಡುತ್ತಿದ್ದು, ವಿಡಿಯೋದ ಕೊನೆಯಲ್ಲಿ "ಅಣ್ಣಾ.. ಸಾಕು ಬಿಡಣ್ಣೋ, ಅಣ್ಣೋ' ಎನ್ನುವ ಮಾತುಗಳನ್ನಾಡಿದ್ದಾರೆ.
ತೆಂಗಿನಕಾಯಿ ಒಡೆಯುವ ವಿಚಾರಕ್ಕೆ ದೇವಸ್ಥಾನ ಪೂಜಾರಿಯಿಂದ ಭಕ್ತನ ಮೇಲೆ ಹಲ್ಲೆ
ಇದರಿಂದ ಗ್ರಾಹಕರು ಕೊಂಡುಕೊಳ್ಳುವ ಸಿಲಿಂಡರ್ ನಲ್ಲಿ 1 ರಿಂದ 2 ಕೆಜಿ ಕಡಿಮೆ ಗ್ಯಾಸ್ ಕಡಿಮೆ ಬರುತ್ತದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.
ನಗರದ ಸುತ್ತಮುತ್ತ ಅಂಗಡಿ ಮುಂಗಟ್ಟುಗಳು, ಮನೆಗಳು ಇರುವುದರಿಂದ ಅನಧಿಕೃತವಾಗಿ ಅಥವಾ ಅವೈಜ್ಞಾನಿಕವಾಗಿ ಫಿಲ್ಲಿಂಗ್ ಮಾಡುವ ಸಂದರ್ಭದಲ್ಲಿ ಒಂದು ವೇಳೆ ಅನಾಹುತ ಸಂಭವಿಸಿದರೆ ಇದು ಕಲ್ಲುಕ್ವಾರಿ ಸ್ಟೋಟಕ್ಕಿಂತ ಅಪಾಯಕಾರಿಯಾಗಿರುತ್ತದೆ.
ಏಕೆಂದರೆ ಪಕ್ಕದಲ್ಲಿ ಸಾವಿರಾರು ಸಿಲಿಂಡರ್ಗಳಿದ್ದು, ಅಚಾನಕ್ ಸ್ಪೋಟಗೊಂಡರೆ ಯಾವ ಅಗ್ನಿಶಾಮಕ ದಳದವರು ಬಂದರೂ ಘಟನೆ ತಪ್ಪಿಸಲು ಸಾಧ್ಯವಿಲ್ಲ ಎನ್ನಬಹುದು. ಇಂತಹ ಬಹುದೊಡ್ಡ ದುರಂತ ಸಂಭವಿಸಿದರೆ ಇದಕ್ಕೆ ಕಾರಣ ಯಾರು ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಗ್ಯಾಸ್ ಏಜೆನ್ಸಿಯ ಸಿಬ್ಬಂದಿಯೊಬ್ಬರನ್ನು ಒನ್ಇಂಡಿಯಾ ಸಂಪರ್ಕಿಸಿದಾಗ, ""ಸರ್, ಇದು ಹಳೆ ವಿಡಿಯೋ, ಇದು ಫೇಕ್ ವಿಡಿಯೋ ಆಗಿದೆ. ಕಳೆದ ಏಳೆಂಟು ತಿಂಗಳ ಹಿಂದೆ ಮಾಡಿರುವ ವಿಡಿಯೋ ಇದಾಗಿದ್ದು, ಈಗಾಗಲೇ ಅದರಲ್ಲಿ ಭಾಗಿಯಾಗಿದ್ದ ಲಾರಿ ಡ್ರೈವರ್ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ'' ಎಂದು ಘಟನೆಯಿಂದ ತಪ್ಪಿಸಿಕೊಳ್ಳಲು ಹಾರಿಕೆ ಉತ್ತರ ನೀಡಿದರು.
ಇನ್ನು ಈ ವಿಚಾರವಾಗಿ ಸ್ಥಳೀಯ ನಾಗರಿಕರು, ""ಗ್ಯಾಸ್ ಏಜೆನ್ಸಿಯವರು ಮನೆಗೆ ಸಿಲಿಂಡರ್ ತಂದು ಕೊಡುತ್ತಾರೆ. ನಾವು ಅದನ್ನು ತೂಕ ಮಾಡುವುದಿಲ್ಲ. 1 ರಿಂದ 2 ಕೆಜಿ ಕಡಿಮೆ ಇರುತ್ತದೆ ಎನ್ನಲಾಗುತ್ತಿದೆ. ಇನ್ನು ಮುಂದೆ ಗ್ಯಾಸ್ ಏಜನ್ಸಿಯವರು ಸಿಲಿಂಡರ್ ಕೊಡಬೇಕಾದರೆ ತೂಕ ಮಾಡಿ ಕೊಡಬೇಕು'' ಎಂದು ಗ್ರಾಹಕರು ಏಜನ್ಸಿಯವರನ್ನು ಒತ್ತಾಯಿಸಿದ್ದಾರೆ.