ಸದಾಶಿವ ವರದಿ ಜಾರಿ ವಿಚಾರ; ಕೇಂದ್ರ ಸಚಿವ, ಶ್ರೀಗಳ ವಾಕ್ಸಮರ
ಚಿತ್ರದುರ್ಗ, ಆಗಸ್ಟ್ 20; ನಿವೃತ್ತ ನ್ಯಾಯಮೂರ್ತಿ ಎ. ಜೆ. ಸದಾಶಿವ ಆಯೋಗದ ವರದಿ ಜಾರಿ ವಿಚಾರದಲ್ಲಿ ಸಾಮಾಜಿಕ ಮತ್ತು ಯುವ ಸಬಲೀಕರಣ ಖಾತೆ ಸಚಿವ ಎ. ನಾರಾಯಣಸ್ವಾಮಿ ಹಾಗೂ ಚಿತ್ರದುರ್ಗದ ಬೋವಿ ಮಠದ ಸಿದ್ದರಾಮೇಶ್ವರ ಶ್ರೀಗಳ ನಡುವೆ ಮಾತಿನ ಸಮರ ನಡೆದಿದೆ.
"ಸದಾಶಿವ ಆಯೋಗದ ವರದಿಯಲ್ಲಿ ಲಂಬಾಣಿ, ಬೋವಿ ಸಮಾಜಗಳನ್ನು ಮೀಸಲಾತಿಯಿಂದ ಕೈಬಿಡಬೇಕು ಎಂದು ಯಾವುದೇ ಪದ ಇಲ್ಲ" ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.
ಪಂಚಮಸಾಲಿ ಮೀಸಲಾತಿ: ಅ.1ರಿಂದ ಮತ್ತೆ ಸತ್ಯಾಗ್ರಹದ ಎಚ್ಚರಿಕೆ
ಮುರುಘಾ ಮಠಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮೀಸಲಾತಿಯಿಂದ ಕೈಬಿಡುತ್ತಾರೆ ಎಂಬ ಚರ್ಚೆಗಳು ಅಲ್ಲಲ್ಲಿ ನಡೆಯುತ್ತಿವೆ. ಈ ವಿಚಾರ ನಿನ್ನೆ ನನ್ನ ಗಮನಕ್ಕೆ ಬಂದಿದೆ. ನಾನು ಆ ಸಮಾಜಗಳನ್ನು ವಿರೋಧ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ನಾನ್ಯಾಕೆ ವಿರೋಧ ಮಾಡಲಿ?" ಎಂದು ಪ್ರಶ್ನಿಸಿದರು.
ಒಬಿಸಿ ಮೀಸಲಾತಿ; ರಾಜ್ಯಸಭೆಯಲ್ಲೂ ಮಸೂದೆ ಅಂಗೀಕಾರ
"ಸಚಿವನಾಗಿ ಯಾವುದೇ ವರದಿ ತೆಗೆದುಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ಸಮಾಜ ಕಲ್ಯಾಣ ಮಂತ್ರಿಯಾಗಿದ್ದಾಗ ವರದಿ ಸ್ವೀಕರಿಸಿದ್ದೇನೆ. ನಮ್ಮಲ್ಲಿ ಯಾವುದೇ ಕಾಲಘಟ್ಟದಲ್ಲಿ ನಾನೇ ಸ್ವತಃ ಬೋವಿ ಸಮಾಜ ಹಾಗೂ ಲಂಬಾಣಿ ಸಮಾಜದ ಶಾಸಕರ ಜೊತೆ ಚರ್ಚಿಸಿದ್ದೇನೆ. ನಾವು ಮೀಸಲಾತಿಯಲ್ಲಿ ಕಡಿಮೆ ಮಾಡಿಕೊಳ್ಳಲು ಸಿದ್ಧರಿದ್ದೇವೆ. ಎಲ್ಲರೂ ಒಂದಾಗೋಣ" ಎಂದರು.
ಸದಾಶಿವ ಆಯೋಗ ವರದಿ ಅನುಷ್ಠಾನ: ಅಡ್ಡಗೋಡೆ ಮೇಲೆ ದೀಪವಿಟ್ಟ ಎಚ್ಡಿಕೆ
"ಇಡೀ ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಆರ್ಥಿಕ, ಸಾಮಾಜಿಕವಾಗಿ ಒಳ್ಳೆಯದನ್ನು ಮಾಡಬೇಕು ಎಂದುಕೊಂಡಿದ್ದೇವೆ. ನಾವ್ಯಾಕೆ ಗುಂಪುಗಾರಿಕೆ ಮಾಡೋಣ?, ನಮ್ಮಲ್ಲಿ ಯಾಕೆ ಆ ಮನಸ್ಥಿತಿ ಬರುತ್ತದೆ. ನೇರವಾಗಿ ನಾನೇ ಮಾತನಾಡಿದ್ದೇನೆ. ಸುಮ್ಮನೆ ಯಾಕೆ ಚರ್ಚೆ ಮಾಡುತ್ತೀರಿ?" ಎಂದು ಪ್ರಶ್ನಿಸಿದರು.
"ನಾನು ಶ್ರೀಗಳ ಜೊತೆ ಮಾತಾಡಿಲ್ಲ ಎಂದರೆ ಹೇಗೆ?. ಅವರು ಸ್ವಾಮೀಜಿ, ಗುರುಪೀಠದ ಸ್ವಾಮೀಜಿ ಯಾಗಿದ್ದಾರೆ. ಬೋವಿ ಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿಗಳು ದಿಕ್ಕು ತಪ್ಪಿಸಬಾರದು, ಶ್ರೀಗಳ ಮೇಲೆ ನನಗೆ ಗೌರವವಿದೆ. ನಾನು ರಾಜಕೀಯಕ್ಕೆ ಬಂದಾಗಿನಿಂದಲೂ ತಪ್ಪು ಮಾಡಿಲ್ಲ" ಎಂದು ಸ್ಪಷ್ಟಪಡಿಸಿದರು.
"ಸದಾಶಿವ ಆಯೋಗದಲ್ಲಿ ಈ ಎರಡು ಸಮಾಜಗಳನ್ನು ಮೀಸಲಾತಿಯಿಂದ ಕೈ ಬಿಡುವ ಚರ್ಚೆಗಳು ಹಿಂದೆ ನಡೆದಿದ್ದವು, ನಾನು ಅನೇಕ ಸಭೆಗಳಲ್ಲಿ ಹೇಳಿದ್ದೇನೆ. ಈ ಎರಡು ಸಮಾಜಗಳನ್ನು ಆಯೋಗದಿಂದ ತೆಗೆಯುವುದು ಯಾರ ಮನಸ್ಸಿನಲ್ಲಿಲ್ಲ. ನೀವ್ಯಾಕೆ ಈ ಕುರಿತು ಚರ್ಚೆ ಮಾಡುತ್ತೀರಾ?. ಯಾಕೆ ಗೊಂದಲ ಸೃಷ್ಟಿ ಮಾಡುತ್ತೀರಾ?" ಎಂದು ನಾರಾಯಣಸ್ವಾಮಿ ಸ್ವಾಮೀಜಿಗಳನ್ನು ಪ್ರಶ್ನಿಸಿದರು.
ಶ್ರೀಗಳ ಪತ್ರಿಕಾ ಗೋಷ್ಠಿ; ಸದಾಶಿವ ಆಯೋಗದ ವರದಿ ಜಾರಿ ವಿಚಾರವಾಗಿ ಬೋವಿ ಮಠದ ಸಿದ್ದರಾಮೇಶ್ವರ ಸ್ವಾಮೀಜಿ ಪತ್ರಿಕಾಗೋಷ್ಠಿ ನಡೆಸಿದರು. "ಸದಾಶಿವ ವರದಿ ವಿಚಾರವಾಗಿ ಚರ್ಚಿಸೋಣ ಅಂತ ಹೇಳಿದ್ದಾರೆ. ಆದರೆ ನಮ್ಮೊಂದಿಗೆ ಯಾರು ಬಂದು ಚರ್ಚಿಸಿಲ್ಲ. ವರದಿ ವಿಷಯವಾಗಿ ತಾರ್ಕಿಕ ಅಂತ್ಯ ಕಾಣುವ ಯಾವುದೇ ಚರ್ಚೆಯಾಗಿಲ್ಲ" ಎಂದು ಶ್ರೀಗಳು ತಿಳಿಸಿದರು.
"ಮುನಿಯಪ್ಪ, ಕಾರಜೋಳ, ನಾರಾಯಣಸ್ವಾಮಿ ಜೊತೆಗೆ ನಾನೇ ಮಾತನಾಡಿದ್ದೇನೆ. ಎರಡು ಸಮುದಾಯಗಳ ನಡುವೆ ಈ ವಿಚಾರವಾಗಿ ಹೆಚ್ಚು ರಾಜಕೀಯ ನಡೆಯಬಾರದು. ಯಾವ ರಾಜಕೀಯ ಪಕ್ಷಕ್ಕೂ ಇದು ಆಹಾರವಾಗಬಾರದು" ಎಂದರು.
"ಸದಾಶಿವ ಆಯೋಗ ವರದಿ ತಾರ್ಕಿಕ ಅಂತ್ಯವಾಗಲು 101 ಸಮುದಾಯಗಳು ಕುಳಿತು ಚರ್ಚಿಸಲು ಸಲಹೆ ನೀಡಿದ್ದೆವು. ಈ ವಿಚಾರವಾಗಿ ಇದುವರಿಗೆ ಯಾವುದೇ ಬೈಠೆಕ್ ಆಗಿಲ್ಲ" ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.
"ಸೋರಿಕೆಯಾಗಿರುವ ವರದಿಯಲ್ಲಿ ಬೋವಿ ಮತ್ತು ಲಂಬಾಣಿ ಸಮುದಾಯವನ್ನು ಕೈ ಬಿಡುತ್ತಾರೆ ಎಂಬುದು ನಮಗೆ ಆತಂಕ ಇದೆ. ವಿಷಯವನ್ನು ಗೌಪ್ಯವಾಗಿಡದೇ ವರದಿ ಸಾರ್ವಜನಿಕವಾಗಿ ಸಿಗುವಂತೆ ಮಾಡಿ" ಎಂದು ಹೇಳಿದರು.
"ಸರ್ಕಾರದ ಠಸ್ಸೆ ಹಾಕಿ, 101ಸಮುದಾಯಗಳ ಹಣೆಬರಹ ಅವರ ಕೈಗೆ ಕೊಡಿ. ಚರ್ಚೆಗೆ ಅವಕಾಶ ಕಲ್ಪಿಸಿ, ಅಧಿವೇಶನದಲ್ಲಿ ಮಂಡಿಸಿ. ಸಮುದಾಯದ ವಿಚಾರದಲ್ಲಿ ಏಕಪಕ್ಷಿಯ ತೀರ್ಮಾನ ಸರಿಯಲ್ಲ. ನೀವು ಹೇಳಿರುವ ಹೇಳಿಕೆಯಲ್ಲಿ ಸ್ಪಷ್ಟತೆ ಇಲ್ಲ" ಎಂದು ಶ್ರೀಗಳು ಸಚಿವರ ವಿರುದ್ಧ ಅಸಮಾಧಾನಗೊಂಡರು.
Recommended Video
"ಬಹಳ ಬುದ್ಧಿವಂತಿಕೆಯಿಂದ ಮಾತನಾಡಿದ್ದೀರಾ, ಅದರ ಬಗ್ಗೆ ಸರಿಯಾದ ಸ್ಪಷ್ಟನೆ ಕೊಡಿ. ಒಂದೇ ವೇದಿಕೆಯಲ್ಲಿ ಈ ಬಗ್ಗೆ ನಮ್ಮೊಂದಿಗೆ ಚರ್ಚಿಸಿ" ಎಂದು ಕೇಂದ್ರ ಸಚಿವರಿಗೆ ಸಿದ್ದರಾಮೇಶ್ವರ ಶ್ರೀಗಳು ಕರೆ ಕೊಟ್ಟರು.