ಹಿರಿಯೂರಿನ "ಪೊಲೀಸ್" ದಿನಗಳನ್ನು ಮೆಲುಕು ಹಾಕಿದ ಕೃಷಿ ಸಚಿವ ಬಿ.ಸಿ.ಪಾಟೀಲ್
Recommended Video
ಚಿತ್ರದುರ್ಗ, ಫೆಬ್ರವರಿ 14: ಮೊದಲ ಬಾರಿಗೆ ಕೃಷಿ ಸಚಿವರಾಗಿ ತಮ್ಮ ತವರೂರಾದ ಹಾವೇರಿ ಜಿಲ್ಲೆಗೆ ಭೇಟಿ ನೀಡುವ ಮಾರ್ಗ ಮಧ್ಯೆ ಹಿರಿಯೂರಿಗೆ ಬಂದಿದ್ದ ಬಿ.ಸಿ.ಪಾಟೀಲ್, ಇಲ್ಲಿನ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಇಂದು ಪ್ರವಾಸಿ ಮಂದಿರದಲ್ಲಿ ಅಭಿಮಾನಿಗಳು ಮತ್ತು ಕೃಷಿಕ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, "ಹಿರಿಯೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದಾಗ ರೌಡಿಗಳಿಗೆ ಮತ್ತು ಕಳ್ಳರಿಗೆ ಒಳ್ಳೆ ಪಾಠ ಕಲಿಸಿದ್ದೆ. ಒಳ್ಳೆಯವರಿಗೆ ಒಳ್ಳೆಯವಾನಾಗಿದ್ದೆ. ಹಿರಿಯೂರಿನಲ್ಲಿ ನಾಟಕಗಳಲ್ಲೂ ಅಭಿನಯಿಸಿದ್ದೆ" ಎಂದು ನೆನಪು ಮಾಡಿಕೊಂಡರು.
ದೊಡ್ಡ ಖಾತೆಯ ಮೇಲೆಯೇ ಕಣ್ಣಿಟ್ಟ ಸಚಿವ ಬಿ.ಸಿ.ಪಾಟೀಲ್
ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, "ಮಂತ್ರಿಯಾಗಿ ಮೂರು ದಿನ ಆಗಿದೆ. ನಾನು ಇನ್ನೂ ಇಲಾಖೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಮೂರು ದಿನಗಳಿಂದ ಸಿಎಂ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ರೈತರ ಅನುಕೂಲಕ್ಕಾಗಿ ರಾಜ್ಯದ ರೈತ ಮುಖಂಡರ ಜೊತೆ ಚರ್ಚಿಸಿದ್ದೇನೆ. ನಾನು ರೈತ ಕುಟುಂಬದಿಂದ ಬಂದವನು. ಹಾಗಾಗಿ ರೈತರ ಸಮಸ್ಯೆ ಬಗ್ಗೆ ತಿಳಿದುಕೊಂಡಿದ್ದೇನೆ. ನಾನು ಪೋಲಿಸ್ ಇಲಾಖೆ ಬಿಟ್ಟು ರಾಜಕೀಯ ರಂಗಕ್ಕೆ ಪ್ರವೇಶ ಮಾಡುವ ಸಂದರ್ಭ ರೈತರ ಹೋರಾಟದಲ್ಲಿ 9 ದಿನಗಳ ಕಾಲ ಇಂಡಗಾಲ ಜೈಲಿನಲಿದ್ದೆ" ಎಂದರು.
ಕುಮಾರಸ್ವಾಮಿಗೆ ಬಿಜೆಪಿ ಸೇರುವ ಆಸೆ ಇದ್ದರೆ ನಾನೇ ಕರೆತರುತ್ತೇನೆ: ಬಿಸಿ ಪಾಟೀಲ್
"ನನಗೆ ಅರಣ್ಯ ಇಲಾಖೆ ಖಾತೆ ಕೊಟ್ಟಿದ್ದರು. ಆಗ ನಾನು ಸಿಎಂ ಬಳಿ ಹೋಗಿ ನನಗೆ ಜನರ ಜೊತೆ ಇರುವ ಖಾತೆ ಕೊಡಿ ಎಂದಿದ್ದೆ. ಅದಕ್ಕೆ ಕೃಷಿ ಖಾತೆ ಕೊಟ್ಟಿದ್ದಾರೆ. ರೈತರ ಸಮಸ್ಯೆಯನ್ನು ಬಗೆಹರಿಸಲು ಸಿಎಂ ಬಳಿ ಕೃಷಿ ಖಾತೆ ಪಡೆದುಕೊಂಡು ಬಂದಿದ್ದೇನೆ. ರಾಜ್ಯದ್ಯಾಂತ ಪ್ರವಾಸ ಮಾಡಿ, ರೈತರ ಸಮಸ್ಯೆ ಬಗೆಹರಿಸುತ್ತೇನೆ. ರೈತ ಪರ ಕೆಲಸ ಮಾಡಿ ರೈತರ ಕಣ್ಣೀರು ಒರೆಸುವ ಕೆಲಸ ಮಾಡುತ್ತೇನೆ" ಎಂದು ಹೇಳಿದರು.