ಡಿಕೆಶಿ ಹೇಳಿಕೆಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ತಿರುಗೇಟು
ಚಿತ್ರದುರ್ಗ, ಏಪ್ರಿಲ್ 16: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡುತ್ತಾರೆಂದರೆ ಅದು ಈ ದೇಶದ ದುರಂತ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿರುಗೇಟು ನೀಡಿದರು.
ಚಿತ್ರದುರ್ಗದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್, ""ಇದು ರಾಜಕೀಯ ಮಾಡುವ ಸಮಯ ಅಲ್ಲ, ಯುದ್ಧ ಮಾಡುವ ಸಮಯ. ಯುದ್ದ ಎಂದರೆ ಕೊರೊನಾ ವೈರಸ್ ವಿರುದ್ಧದ ಯುದ್ಧ'' ಎಂದರು.
ಡಿ.ಕೆ.ಶಿವಕುಮಾರ್ ಮಾಡಿದ್ದ ಆ ಒಂದು ಮನವಿಯನ್ನು ಯಡಿಯೂರಪ್ಪ ಈಡೇರಿಸಿದ್ದರೆ?
ಕೊರೊನಾ ವೈರಸ್ ದೇಶಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಸಮಯದಲ್ಲಿ ರಾಜಕೀಯ ಹೇಳಿಕೆ ಕೊಡುತ್ತಾರೆಂದರೆ ದುರ್ದೈವ ಸಂಗತಿ. ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ಪರ ಏನು ಕೆಲಸ ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಗಂಗಾವತಿಯಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು 45 ಕೋಟಿ ರುಪಾಯಿ ಪರಿಹಾರ ನೀಡಿದ್ದಾರೆ. ರೈತರಿಗೆ ಮತ್ತು ಸಾಮಾನ್ಯರಿಗೆ ಅನುಕೂಲವಾಗಲೆಂದು ಉಚಿತ ಹಾಲು ಕೊಟ್ಟಿದ್ದಾರೆ ಎಂದು ಹೇಳಿದರು.
ಲಾಕ್ ಡೌನ್ ಇದ್ದರೂ ಕೃಷಿ ಚಟುವಟಿಕೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷರು ಕರ್ನಾಟಕದಲ್ಲಿ ಏನು ಬಿಟ್ಟಿಲ್ಲ. ಒಂದು ವರ್ಷ ಎರಡು ತಿಂಗಳು ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಎಲ್ಲ ದೋಚಿಕೊಂಡು ಹೋಗಿದ್ದಾರೆ ಎಂದು ಹರಿಹಾಯ್ದರು.
ರೈತರ ಬಗ್ಗೆ ಕೃಷಿ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದರು. ಅದಕ್ಕೆ ಇಂದು ಕೃಷಿ ಸಚಿವರು ಸಮಜಾಯಿಷಿ ನೀಡಿದರು. ಮುಖ್ಯಮಂತ್ರಿಗಳು ರೈತರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ರೈತರಿಗೆ ಸಬ್ಸಿಡಿ ಬಿತ್ತನೆ ಬೀಜ, ಗೊಬ್ಬರ ಕೊಡುತ್ತೇವೆ ಎಂದು ಭರವಸೆ ನೀಡಿದರು.
ಬಿಜೆಪಿ ಶಾಸಕರ ಕೋಮು ಸಂಘರ್ಷ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ ಪಾಟೀಲ್, ಯಾವ ಕೋಮು ಸಂಘರ್ಷ ಇಲ್ಲ, ಎಲ್ಲಿದೆ ಕೋಮು ಸಂಘರ್ಷ, ಇರೋದು ಒಂದೇ ಕೊರೊನಾ ಸಂಘರ್ಷ ಎಂದರು.
ಬೇರೆ ರಾಜ್ಯಗಳಿಗೆ ಕೊರೊನಾ ಹೋಲಿಸಿದರೆ ಕರ್ನಾಟಕ ಸೇಪ್ ಆಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಕೊರೊನಾವನ್ನು ಕಂಟ್ರೋಲ್ ಮಾಡುತ್ತಿದೆ ಎಂದು ಚಿತ್ರದುರ್ಗದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿಕೆ ನೀಡಿದರು.