ಅಪಘಾತದಲ್ಲಿ ಆಶ್ಚರ್ಯಕರ ರೀತಿ ಪಾರಾದ ಎಡಿಜಿಪಿ
ಚಿತ್ರದುರ್ಗ, ನವೆಂಬರ್ 20: ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ರಾಮಚಂದ್ರರಾವ್ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆದ ಘಟನೆ ಮಂಗಳವಾರ ರಾತ್ರಿ ಚಿತ್ರದುರ್ಗ ತಾಲೂಕಿನ ಕೊಳಾಳ್ ಬಳಿ ನಡೆದಿದೆ.
ರಾಜಸ್ಥಾನದಲ್ಲಿ ಬಸ್-ಟ್ರಕ್ ಮುಖಾಮುಖಿ ಡಿಕ್ಕಿ: 14 ಮಂದಿ ಸಾವು
ಡಿಕ್ಕಿಯ ರಭಸಕ್ಕೆ ಸೌದೆಗಳನ್ನು ತುಂಬಿಕೊಂಡಿದ್ದ ಲಾರಿ ಪಲ್ಟಿಯಾಗಿದ್ದು ಚಾಲಕ ಪಾರಾಗಿದ್ದಾನೆ. ಕಾರಿನಲ್ಲಿದ್ದ ಎಡಿಜಿಪಿ ರಾಮಚಂದ್ರರಾವ್ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ರಾಮಚಂದ್ರರಾವ್ ಅವರು ಇನೋವಾ ಕಾರಿನಲ್ಲಿ ಬೆಂಗಳೂರಿನಿಂದ ದಾವಣಗೆರೆಗೆ ತೆರಳುತ್ತಿದ್ದರು. ಚಿತ್ರದುರ್ಗ ತಾಲೂಕಿನ ಕೊಳಾಳ್ ಬಳಿ ವೇಗವಾಗಿ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ. ಲಾರಿ ಪಲ್ಟಿ ಹೊಡೆದು ರಸ್ತೆ ಪಕ್ಕದಲ್ಲಿ ಬಿದ್ದಿದೆ. ತಕ್ಷಣವೇ ಚಾಲಕ ಲಾರಿಯಿಂದ ಜಿಗಿದು ಪಾರಾಗಿದ್ದಾನೆ.
ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.