ರಾಜಕೀಯ ಪ್ರವೇಶ ಉದ್ದೇಶಕ್ಕಾಗಿ ರೈತನಿಗೆ ನೆರವಾಗುತ್ತಿಲ್ಲ: ಯಶ್
ನಾನು ರೈತ ಕುಟುಂಬದಿಂದ ಬಂದವನು. ಅದಕ್ಕಿಂತ ಹೆಚ್ಚಾಗಿ ಕನ್ನಡಿಗ, ರೈತರ ಕಷ್ಟಗಳಿಗೆ ನಾವು ಸ್ಪಂದಿಸಬೇಕು, ರೈತರನ್ನು ಮುಂದಿಟ್ಟುಕೊಂಡು ರಾಜಕೀಯ ಪ್ರವೇಶಿಸುವ ದುರುದ್ದೇಶ ನನ್ನನ್ನಿಲ್ಲ ಎಂದ ಯಶ್
ಚಿತ್ರದುರ್ಗ, ಮೇ 29: 'ನಾನು ರೈತ ಕುಟುಂಬದಿಂದ ಬಂದವನು. ಅದಕ್ಕಿಂತ ಹೆಚ್ಚಾಗಿ ಕನ್ನಡಿಗ, ರೈತರ ಕಷ್ಟಗಳಿಗೆ ನಾವು ಸ್ಪಂದಿಸಬೇಕು, ರೈತರನ್ನು ಮುಂದಿಟ್ಟುಕೊಂಡು ರಾಜಕೀಯ ಪ್ರವೇಶಿಸುವ ದುರುದ್ದೇಶ ನನ್ನನ್ನಿಲ್ಲ' ಎಂದು 'ರಾಕಿಂಗ್ ಸ್ಟಾರ್' ಯಶ್ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸದಲ್ಲಿರುವ ಅವರು ಯಶೋಮಾರ್ಗ ಫೌಂಡೇಶನ್ ವತಿಯಿಂದ ಈ ಭಾಗದ ರೈತರಿಗೆ ಮಳೆಕೊಯ್ಲು ಪಾಠ ಮಾಡಿದರು. ಕೊಪ್ಪಳ, ಗದಗ ಮುಂತಾದೆಡೆ ಯಶೋಮಾರ್ಗ ಸಾಧಿಸಿದ ಯಶೋಗಾಥೆಯನ್ನು ವಿವರಿಸಿದರು.[ನಾನು ಸಮಸ್ಯೆಗೆ ಸ್ಪಂದಿಸಿ, ಪರಿಹರಿಸುವ ಕ್ಯಾಟಗರಿಯವನು: ಯಶ್]
ಕಳೆದ 70 ವರ್ಷಗಳಿಂದ ಈ ಭಾಗದಲ್ಲಿ ಸರಿಯಾಗಿ ಮಳೆಯಾಗುತ್ತಿಲ್ಲ ಎಂದು ಕೇಳಿದ್ದೇನೆ ಜೊತೆಗೆ ಸತತ 5 ವರ್ಷಗಳಿಂದಲೂ ಮಳೆ ಸಂಪೂರ್ಣ ಕೈಕೊಟ್ಟಿದೆ. ರಾಜ್ಯ ಸರ್ಕಾರ ಇದನ್ನು ಪರಿಗಣಿಸಿ ರೈತರ ಸಾಲ ಮನ್ನಾ ಮಾಡಲು ಮುಂದಾಗಬೇಕು ಎಂದರು.
ಅಖಂಡ ಕರ್ನಾಟಕ ರೈತ ಸಂಘ ಆಯೋಜಿಸಿದ್ದ ರೈತರ ರಾಜ್ಯ ಬೃಹತ್ ಸಮಾವೇಶ ಅಂಗವಾಗಿ ನಡೆದ ರೋಡ್ ಶೋಗಳಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, 'ರೈತರಿಗೆ ನೆರವಾಗುವುದೊಂದೆ ನನ್ನ ಉದ್ದೇಶ, ರಾಜಕೀಯ ಪ್ರವೇಶ ನನ್ನ ಉದ್ದೇಶವಲ್ಲ' ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ನೀರಾವರಿ ಯೋಜನೆ ವಿಳಂಬ: ಭದ್ರಾ ಮೇಲ್ದಂಡೆ ಯೋಜನೆಯನ್ನು ಆದಷ್ಟು ಬೇಗ ಮುಗಿಸಿ ರೈತರ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಜೊತೆಗೆ ರೈತರು ಬೆಳೆದ ತರಕಾರಿ ಮತ್ತು ಧಾನ್ಯಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಬೇಕು ಎಂದರು.
ರಾಜ್ಯದಲ್ಲಿ ಅನೇಕ ರೈತ ಸಂಘಗಳಿವೆ. ಎಲ್ಲಾ ಸಂಘಗಳ ಮೂಲ ಉದ್ದೇಶ ಒಂದೇ ಆಗಿದೆ. ರೈತರ ಸಮಸ್ಯೆಗಳು ಎದುರಾದಾಗ ರಾಜ್ಯದ ಎಲ್ಲ ರೈತ ಸಂಘಗಳು ಒಗ್ಗೂಡಿ ಒಂದೇ ವೇದಿಕೆಯಲ್ಲಿ ಭಾಗವಹಿಸಿ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಯಶ್ ರೈತ ಸಂಘಗಳಿಗೆ ಸಲಹೆ ನೀಡಿದರು.