ಚಿತ್ರದುರ್ಗದಲ್ಲಿ ವೈಶಿಷ್ಟ್ಯವಾಗಿ ಜರುಗಿದ ಮುಳ್ಳಿನ ಜಾತ್ರೆ
Recommended Video
ಚಿತ್ರದುರ್ಗ, ಜನವರಿ 13: ಇಂದಿನ ತಂತ್ರಜ್ಞಾನ ಯುಗದಲ್ಲಿ ಕಾಲ ಬದಲಾದಂತೆ ಸಂಪ್ರದಾಯಗಳ ಆಚರಣೆಗಳು ಕೂಡ ತೆರೆಮರೆಗೆ ಸರಿಯುತ್ತಿವೆ . ಆದರೆ ಇಲ್ಲೊಂದು ಬುಡಕಟ್ಟು ಸಮುದಾಯವೆಂದೇ ಗುರುತಿಸಿಕೊಂಡಿರುವ ಕಾಡುಗೊಲ್ಲ ಸಮುದಾಯದವರು ಮಾತ್ರ ಸಾಂಪ್ರದಾಯಿಕ ಆಚರಣೆಗಳನ್ನು ಇಂದಿಗೂ ಜೀವಂತವಾಗಿ ಉಳಿಸಿಕೊಂಡು ಬರುವ ಮೂಲಕ ಜನಪದ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ.
ಸದ್ಯ ಇದೇ ರೀತಿಯ ಜಾತ್ರೆಯೊಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪೂರ್ಲಹಳ್ಳಿಯ ವಸಲುದಿಬ್ಬದಲ್ಲಿ ಕಾಡುಗೊಲ್ಲರು ತಮ್ಮ ಆರಾಧ್ಯ ದೈವ ಕ್ಯಾತೆದೇವರ ಮುಳ್ಳಿನ ಜಾತ್ರೆಯನ್ನು ಬಹಳ ವಿಜೃಂಭಣೆ ಹಾಗೂ ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ.
ಸಿದ್ದರಾಮಯ್ಯ ವಕೀಲರಾಗಿದ್ದವರು, ಮೊದಲು ಸಿಎಎ ಚೆನ್ನಾಗಿ ಓದಿಕೊಳ್ಳಲಿ: ಶ್ರೀರಾಮುಲು
ಚಿತ್ರದುರ್ಗ ಜಿಲ್ಲೆಯ ಕೋಣನ ಗೊಲ್ಲರು ಮತ್ತು ಬೊಮ್ಮನ ಗೊಲ್ಲರು ಬರೀ ಕಾಲಲ್ಲಿ ಮುಳ್ಳಿನ ಗುಡಿಯನ್ನು ಪರಸ್ಪರ ಪೈಪೋಟಿಯಲ್ಲಿ ನಿರ್ಮಿಸುತ್ತಾರೆ. ಅರ್ಧ ಗುಡಿಯನ್ನು ಕೋಣನ ಗೊಲ್ಲರು ಉಳಿದರ್ಧ ಗುಡಿಯನ್ನು ಬೊಮ್ಮನ ಗೊಲ್ಲರು ಗುಡಿಯನ್ನು ನಿರ್ಮಿಸುತ್ತಾರೆ.
ಮುಳ್ಳಿನ ಗೋಪುರದಲ್ಲಿ ಕಂಚಿನ ಕಳಶ ನಿರ್ಮಾಣ
ಈ ಜಾತ್ರೆಗೆ 10 ದಿನಗಳ ಮುಂಚೆಯೇ ಭಕ್ತರೊಬ್ಬರ ಜಮೀನಿನಲ್ಲಿ ಬೆಳೆದ ಹತ್ತಿ ಮರವನ್ನು ಪೂಜಿಸಿ, ಅದನ್ನು ಕಡಿದು ತಂದು ವಸಲುದಿಬ್ಬಕ್ಕೆ ತರುತ್ತಾರೆ. ನಂತರ ಕ್ಯಾತೆದೇವರ ಜಾತ್ರೆಗೆ ಬಂದ್ರೆ ಕಳ್ಳೆ, ಬಾರೆ ಕಳ್ಳೆಯನ್ನು ಕಡಿದು ತಂದು 15 ಅಡಿ ಅಗಲ ಮತ್ತು 20 ಅಡಿ ಎತ್ತರದ ಮುಳ್ಳಿನ ದೇವರ ಗುಡಿಯನ್ನು ನಿರ್ಮಾಣ ಮಾಡುತ್ತಾರೆ. ಹೀಗೆ ನಿರ್ಮಿಸಿದ ಗುಡಿಯಲ್ಲಿ ಚನ್ನಮ್ಮ ನಾಗತಿಹಳ್ಳಿಯ ಕ್ಯಾತೆದೇವರು, ಬಂಜಗೆರೆ ಈರಣ್ಣ, ಐಗಾರ್ಲಹಳ್ಳಿಯ ತಾಳಿ ದೇವರನ್ನ ಪ್ರತಿಷ್ಠಾಪಿಸುತ್ತಾರೆ.
ಹೀಗೆಕಾಡುಗೊಲ್ಲ ಸಮುದಾಯದವರು ಭಕ್ತಿಯಿಂದ ಮುಳ್ಳಿನ ಗುಡಿಯನ್ನು ನಿರ್ಮಿಸಿದ ನಂತರ ಗೋಪುರದ ತುದಿಯಲ್ಲಿ ಕಂಚಿನ ಕಳಶವನ್ನು ಪ್ರತಿಷ್ಠಾಪಿಸಿ ನಂತರ ಆ ಕಳಶವನ್ನು ಕೀಳುವ ಜಾತ್ರೆ ಇದಾಗಿರುತ್ತದೆ.
ಪಶುಪಾಲಕನಿಗೆ ಒಲಿದ ದೇವರು
ಕ್ಯಾತೆದೇವರಿಗೆ ಸೇರಿದ 13 ಗುಡಿಕಟ್ಟಿನ ಅಣ್ಣ-ತಮ್ಮಂದಿರು ಈ ಜಾತ್ರೆಯನ್ನು ನಡೆಸಿಕೊಂಡು ಬರುತ್ತಾರೆ. ಈ ಕಾಡುಗೊಲ್ಲ ಸಮುದಾಯವು ಒಂದು ತಿಂಗಳ ಕಾಲ "ನವಣೆ" ವ್ರತ ಆಚರಿಸುತ್ತಾರೆ. ಏಕೆಂದರೆ ಕ್ಯಾತೆ ದೇವರು ಕಾಡು ಗೊಲ್ಲರಿಗೆ ಒಲಿಯುವ ಮುನ್ನ ಹೇಮರೆಡ್ಡಿ ಮತ್ತು ಭೀಮರೆಡ್ಡಿ ಗೌಡನಿಗೆ ಒಲಿದಿರುತ್ತದೆ. ಆದರೆ..
ರೆಡ್ಡಿ ಅವರು ನಿರ್ಲಕ್ಷ ತೋರಿ ಮನೆಯ ದೇವರನ್ನು "ಹುರುಳಿ - ನವಣೆ" ಕಣಜದಲ್ಲಿ ಮುಚ್ಚಿ ಹಾಕಿದ್ದನಂತೆ, ಹೀಗಾಗಿ ರೆಡ್ಡಿ ದುರಹಂಕಾರದಿಂದ ಕ್ಯಾತೆದೇವರು ರೆಡ್ಡಿಗರ ಮನೆಯಲ್ಲಿ ಪಶುಪಾಲಕನಾಗಿದ್ದ ಕಾಡುಗೊಲ್ಲರ ಬೊಮ್ಮಲಿಂಗ ಎಂಬುವನಿಗೆ ಒಲಿದಿದೆ ಎಂಬ ಪ್ರತೀತಿ ಇದೆ.
ಮರದ ನೆರಳೇ ಈ ಮಕ್ಕಳಿಗೆ ಕ್ಲಾಸ್ ರೂಂ; ಯರ್ರೇನಹಳ್ಳಿ ಸರ್ಕಾರಿ ಶಾಲೆ ಕಥೆಯಿದು
ನಾಡಿಗೆ ಒಳಿತಾಗುವ ದೃಷ್ಟಿಯಿಂದ ಮುಳ್ಳಿನ ಜಾತ್ರೆ
ಹೀಗಾಗಿ ಕಾಡುಗೊಲ್ಲ ಸಮುದಾಯದವರು ದೇವರಿಗಾಗಿ ನವಣೆ ಮತ್ತು ಹುರುಳಿಯನ್ನು ಒಂದು ತಿಂಗಳ ಕಾಲ ಸೇವಿಸುವುದಿಲ್ಲ, ಅಂತೆಯೇ ಹುರಳಿ ಮತ್ತು ನವಣೆ ಧಾನ್ಯವನ್ನು ಬೆಳೆಯುವ ಹೊಲಗಳಲ್ಲಿ ಕೂಡ ಹೋಗದೆ ಕಟ್ಟು ನಿಟ್ಟಿನ ವ್ರತ ಪಾಲಿಸುತ್ತಾರೆ. ಬರೀ ಕಾಲಲ್ಲಿ ಬಾರೆ ಮುಳ್ಳಿನ ಗುಡಿ ನಿರ್ಮಿಸಿ ಕಳಶ ಕೀಳುವ ಮೂಲಕ ಬುಡಕಟ್ಟು ಸಮುದಾಯದ ವಂಶಸ್ಥರು " ಶೌರ್ಯ " ಮೆರೆಯುತ್ತಾರೆ.
ಈ ಆಚರಣೆಯಿಂದಾಗಿ ಈ ನಾಡಿಗೆ ಒಳಿತಾಗುತ್ತದೆ ಎಂಬ ನಂಬಿಕೆ ಭಕ್ತ ಸಮೂಹದಲ್ಲಿದೆ. ಬರೀ ಮೈಯಲ್ಲಿ ಮುಳ್ಳಿನ ಗೋಪುರ ಕಟ್ಟುವುದು ಮತ್ತು ಕಳಶ ಕೀಳುವ ದೃಶ್ಯ ಸುತ್ತಮುತ್ತ ನೆರೆದಿರುವ ಭಕ್ತ ಸಮೂಹವನ್ನು ಒಂದು ಕ್ಷಣ ರೋಮಾಂಚನಗೊಳಿಸುತ್ತದೆ.
ಹಿರಿಯೂರು, ಚಳ್ಳಕೆರೆ ಶಾಸಕರು ಭಾಗವಹಿಸಿದ್ದರು
ಇನ್ನು ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕರ್ನಾಟಕದ ನೆರೆಹೊರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಸೀಮಾಂದ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಸುತ್ತಮುತ್ತಲಿನ ಭಕ್ತರು ಜಾತ್ರೆಗೆ ಆಗಮಿಸಿ ದೇವರ ದರ್ಶನ ಪಡೆದು ಪುಳಕೀತರಾಗುತ್ತಾರೆ.
ಇನ್ನು ಜಾತ್ರೆಯು ರಾಜ್ಯದ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಟ್ಟರೆ ಬೇರೆಲ್ಲಿ ನಡೆಯುವುದಿಲ್ಲ ಎನ್ನಬಹುದಾಗಿದೆ. ಈ ಮುಳ್ಳಿನ ಜಾತ್ರೆಯಲ್ಲಿ ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.