ತರಕಾರಿ ಮಾರಾಟಗಾರನ ಮಗಳು ಖಜಾನೆ ಅಧಿಕಾರಿಯಾದ ಸಾಹಸಗಾಥೆ
ಚಿತ್ರದುರ್ಗ, ಡಿಸೆಂಬರ್.25: ಅವರು ಬಡರಾಗಿದ್ದರೂ ಆರು ಜನರ ತುಂಬು ಕುಟುಂಬ. ತುತ್ತು ಅನ್ನಕ್ಕೂ ನಿತ್ಯ ಪರಿತಪ್ಪಿಸಬೇಕು. ತಂದೆ-ತಾಯಿ ಹಳ್ಳಿಹಳ್ಳಿಗಳಲ್ಲಿ ಸುತ್ತಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಸಾಧಿಸುವ ಹಂಬಲ ಬಡತನದಲ್ಲಿ ವಿದ್ಯೆ ಆಕೆಯ ಕೈಹಿಡಿಯಿತು. ಇದರಿಂದ ವಿನೋದಮ್ಮ ಖಜಾನೆ ಅಧಿಕಾರಿಯಾಗಿ ಹೊರ ಹೊಮ್ಮಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮದ ಶ್ರೀಮತಿ ಜಯಮ್ಮ ಮತ್ತು ಮಂಜುನಾಥಪ್ಪ ಅವರ ದ್ವಿತೀಯ ಪುತ್ರಿ ವಿನೋದಮ್ಮ ಇಂದು ಹೆತ್ತವರ ಕನಸನ್ನು ನನಸು ಮಾಡಿದ್ದಾರೆ. ಓಬವ್ವನ ನಾಡಿನ ಕುವರಿ ಇಂದು ನೆಲದ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಬೆಳಗಿಸಿದ್ದಾರೆ.
ದಾಂತೇವಾಡದ ನಮ್ರತಾ ಜೈನ್ ಸಿವಿಲ್ ಪರೀಕ್ಷೆ ಸಾಧನೆ ಸಾಮಾನ್ಯದ್ದಲ್ಲ
ಮೂಲತಃ ಹಿರಿಯೂರು ತಾಲೂಕು ಗಡಿಭಾಗ ಹಾಗೂ ಧರ್ಮಪುರ ಹೋಬಳಿಯ ಪಕ್ಕದ ಶಿರಾ ತಾಲೂಕಿನ ಬೆಜ್ಜಿಹಳ್ಳಿ ಗ್ರಾಮದವರು. ಆದರೆ ಈ ಗ್ರಾಮದಿಂದ ಬೇರೆ ಕಡೆಗೆ ಹೋಗಬೇಕೆಂದ್ರೆ ಬಸ್ ವ್ಯವಸ್ಥೆಯಿಲ್ಲ. ನಿತ್ಯ ಕಿಲೋಮೀಟರ್ ಗಟ್ಟಲೇ ಓಡಾಡಲು ಆಗುವುದಿಲ್ಲ. ಹೀಗಾಗಿ ಇಡೀ ಕುಟುಂಬ ಧರ್ಮಪುರ ಗ್ರಾಮಕ್ಕೆ ಬಂದು ನೆಲೆಸಿದರು.
ಬಡತನಕ್ಕೆ ಮಕ್ಕಳು ಹೆಚ್ಚು:
ಬಡತನಕ್ಕೆ ಮಕ್ಕಳು ಹೆಚ್ಚು ಎಂಬ ಮಾತಿದೆ. ಹಾಗೆ ತರಕಾರಿ ಮಾರುತ್ತಾ ಬದುಕಿನ ಬಂಡಿ ಸಾಗಿಸುತ್ತಿದ್ದ ಮಂಜುನಾಥಪ್ಪನವರಿಗೆ ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ. ಎಲ್ಲ ಮಕ್ಕಳಿಗೂ ಶಿಕ್ಷಣ ಕೊಡಿಸುವುದು ಸವಾಲನ ಕೆಲಸವಾಗಿತ್ತು. ಈ ಸವಾಲನ್ನು ಮೆಟ್ಟಿ ನಿಂತು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದ ಮಂಜುನಾಥ ಅವರ ಕನಸನ್ನು ವಿನೋದಮ್ಮ ಇಂದು ನನಸು ಮಾಡಿದ್ದಾರೆ.
ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಬೆಜ್ಜಿಹಳ್ಳಿಯಲ್ಲಿ 4ನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣ ಪಡೆದ ವಿನೋದಮ್ಮ, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಬೆಡತ್ತೂರು ಮೂರಾರ್ಜಿ ವಸತಿ ಶಾಲೆಯಲ್ಲಿ ಮುಂದಿನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆದರು.
ಎಂಎನ್ ಸಿ ಕೆಲಸ ಬಿಟ್ಟು ಫುಡ್ ಡೆಲಿವರಿ ಗರ್ಲ್ ಆದ ಮೇಘನಾ!
ಇನ್ನು, ತುಮಕೂರಿನಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಿಎಸ್ಸಿ ನರ್ಸಿಂಗ್ ಪದವಿ ಪಡೆದರು. ನಂತರ ಬೆಂಗಳೂರು ರಾಜಾಜಿನಗರದ ಇಎಸ್ ಐ ಆಸ್ಪತ್ರೆಯಲ್ಲಿ ನರ್ಸಿಂಗ್ ಕೆಲಸಕ್ಕೆ ಸೇರಿಕೊಂಡರು. ಕೆಲಸದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದರು.
ನಿರಂತರ ಪರಿಶ್ರಮದಿಂದ ಕಂಡ ಕನಸು ನನಸು:
2011 ಮತ್ತು 2014ರ ಕೆಪಿಎಸ್ ಸಿ ಪರೀಕ್ಷೆ ಬರೆದಿದ್ದ ವಿನೋದಮ್ಮ ಮುಖ್ಯ ಪರೀಕ್ಷೆ ಪಡೆದಿದ್ದರೂ, ಸಂದರ್ಶನದ ಅವಕಾಶ ಜಾರಿ ಹೋಗಿತ್ತು. ನಂತರ ಸ್ನೇಹಿತರ ಸಲಹೆ-ಸೂಚನೆ ಮೇರೆಗೆ ಒಂದಿಷ್ಟು ತರಬೇತಿ ಪಡೆದರು. ಹೀಗೆ ತರಬೇತಿ ಪಡೆಯುತ್ತಾ ಪಡೆಯುತ್ತಾ ಪಂಚಾಯಿತಿ ಇಲಾಖೆ ಅಧಿಕಾರಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಎಸಿ ಆಗುವ ಆಸೆ ಚಿಗುರಿತು.
ಲತೀಶಾಳ ಮನಮಿಡಿವ ಕತೆ: Oxygen ಸಿಲಿಂಡರ್ ನೊಂದಿಗೆ UPSC ಪರೀಕ್ಷೆ
ಅಂದು ಚಿಗುರಿನ ಪುಟ್ಟ ಆಸೆ ಇಂದು ಬೃಹತ್ ಮರವಾಗಿ ಬೆಳೆದಿದೆ. ನಿರಂತರ ಪ್ರಯತ್ನದಿಂದ ವಿನೋದಮ್ಮರ ಶ್ರಮಕ್ಕೆ ಫಲ ಸಿಕ್ಕಿದೆ. ಅಂದುಕೊಂಡಂತೆ ಖಜಾನೆ ಇಲಾಖೆಯ ಅಧಿಕಾರಿಯಾಗುವ ಮೂಲಕ ತಮ್ಮ ಆಸೆಯ ಜೊತೆಗೆ ಹೆತ್ತವರ ಕನಸನ್ನು ವಿನೋದಮ್ಮ ನನಸು ಮಾಡಿದ್ದಾರೆ. ಇನ್ನು, ವಿನೋದಮ್ಮನ ಸಾಧನೆಗೆ ಪೋಷಕರು, ಸೋದರ ಮತ್ತು ಸೋದರಿಯರು ಸೇರಿದಂತೆ ಅನೇಕ ಬಂಧು-ಬಳಗ ಸಂತಸ ವ್ಯಕ್ತಪಡಿಸಿದ್ದಾರೆ.