ಹಿರಿಯೂರು ಕಾಲೇಜು ಸ್ಥಳಾಂತರ ಆದೇಶ ಖಂಡಿಸಿ ಸತ್ಯಾಗ್ರಹ; ಐವರು ಅಸ್ವಸ್ಥ
ಹಿರಿಯೂರು, ಜೂನ್ 27: ಜೆಜಿ ಹಳ್ಳಿ ಕಾಲೇಜನ್ನು ಸ್ಥಳಾಂತರಿಸಲು ಆದೇಶ ಹೊರಡಿಸಿರುವ ಸರ್ಕಾರದ ನಿಲುವನ್ನು ಖಂಡಿಸಿ ಜೆಜಿ ಹಳ್ಳಿ ಗ್ರಾಮ ಪಂಚಾಯ್ತಿ ಮುಂದೆ ಕಾಲೇಜಿನ ಹಳೇ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಡೆಸುತ್ತಿರುವ ಉಪವಾಸ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ವಿದ್ಯಾರ್ಥಿಗಳು ಸೇರಿದಂತೆ ಐವರು ಅಸ್ವಸ್ಥಗೊಂಡು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆ ಇದೆ ಎಂದು ಹಿರಿಯೂರು ತಾಲ್ಲೂಕಿನ ಜೆಜಿ ಹಳ್ಳಿ ಪದವಿ ಕಾಲೇಜನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆಸ್ತೂರಿಗೆ ಸ್ಥಳಾಂತರಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಆದೇಶಕ್ಕೆ ಸಾಕಷ್ಟು ವಿರೋಧಗಳು ಕೇಳಿಬಂದಿದ್ದವು.
ಜೆಜಿ ಹಳ್ಳಿ ಕಾಲೇಜು ಸ್ಥಳಾಂತರ ಆದೇಶಕ್ಕೆ ಶಾಸಕಿ ಕೆ. ಪೂರ್ಣಿಮಾ ಗರಂ
ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ಜಿ.ಟಿ. ದೇವೇಗೌಡರನ್ನು ಭೇಟಿ ಮಾಡಿ ಆದೇಶ ರದ್ದುಪಡಿಸುವಂತೆ ಮನವಿ ಮಾಡಿದ್ದರು. ಜೊತೆಗೆ ಮಾಜಿ ಸಚಿವ ಡಿ. ಸುಧಾಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ಯಶೋಧರ ಕೂಡ ಆದೇಶ ರದ್ದುಪಡಿಸಿ ಸದರಿ ಕಾಲೇಜನ್ನು ಜೆಜಿ ಹಳ್ಳಿಯಲ್ಲೇ ಮುಂದುವರಿಸುವಂತೆ ಪತ್ರ ಬರೆದಿದ್ದರು. ಅಲ್ಲದೇ ಕಾಲೇಜು ಆವರಣದಲ್ಲಿ ಹಳೇ ವಿದ್ಯಾರ್ಥಿಗಳು, ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಇದಕ್ಕೆ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಸಾಥ್ ನೀಡಿದ್ದರು. ಸರ್ಕಾರ ಈ ಕೂಡಲೇ ಆದೇಶ ರದ್ದುಪಡಿಸದಿದ್ದರೆ ಹೋರಾಟ ಮಾಡುತ್ತೇವೆಂದು ಎಚ್ಚರಿಕೆಯನ್ನೂ ನೀಡಿದ್ದರು.
ಇದಕ್ಕೆ ಸೊಪ್ಪು ಹಾಕದ ಸರ್ಕಾರ, ಮತ್ತೊಮ್ಮೆ ಅಧೀಕೃತ ಆದೇಶ ಹೊರಡಿಸಿದೆ. ಇತ್ತ ಪ್ರತಿಭಟನೆಯ ಕಾವು ರಂಗೇರುತ್ತಿದೆ. ಅನಿರ್ದಿಷ್ಟಾವಧಿ ಉಪವಾಸ ಧರಣಿ ಸತ್ಯಾಗ್ರಹ ನಡೆಯುತ್ತಿದೆ. ಸ್ಥಳಕ್ಕೆ ಹಿರಿಯೂರು ತಹಶೀಲ್ದಾರ್ ಜೆ.ಸಿ. ವೆಂಕಟೇಶಯ್ಯ ಭೇಟಿ ನೀಡಿದ್ದಾರೆ. ನಾಳೆ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಚಿತ್ರದುರ್ಗ ಜಿಲ್ಲಾಧಿಕಾರಿಗಳು ಭೇಟಿ ನೀಡುವ ಸಾಧ್ಯತೆಯಿದೆ.
ಜೆಜಿಹಳ್ಳಿ ಕಾಲೇಜು ಸ್ಥಳಾಂತರ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಧರಣಿಯಲ್ಲಿ ತಾ.ಪ. ಸದಸ್ಯ ಜಯರಾಮಣ್ಣ, ವಿದ್ಯಾರ್ಥಿ ಮುಖಂಡ ಯೋಗೇಶ್, ರಾಮು, ನಾಗರಾಜ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದಾರೆ.