ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೊನಾ ವೈರಸ್ ಗೆ ಮೂರನೇ ಬಲಿ
ಚಿತ್ರದುರ್ಗ, ಜುಲೈ 16: ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ ಕೋಟೆನಾಡು ಚಿತ್ರದುರ್ಗದಲ್ಲಿ ಇಂದು ಮತ್ತೊಂದು ಬಲಿಯಾಗಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
Recommended Video
ಚಿತ್ರದುರ್ಗ ಜಿಲ್ಲೆಯ 61 ವರ್ಷದ ಸೋಂಕಿತ ವ್ಯಕ್ತಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಜು.14 ರಂದು ರಾತ್ರಿ ಜಿಲ್ಲಾಸ್ಪತ್ರೆ SARI ವಾರ್ಡ್ ಗೆ ದಾಖಲಾಗಿದ್ದರು. ನಂತರ ಕೊರೊನಾ ವೈರಸ್ ಪಾಸಿಟಿವ್ ಬಂದ ಬಳಿಕ ಅವರನ್ನು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೆ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಕೊರೊನಾ ನಿಯಂತ್ರಣ: ದೇವರೆ ನಮ್ಮನ್ನು ಕಾಪಾಡಬೇಕು ಎಂದ ಆರೋಗ್ಯ ಸಚಿವ
ಚಿತ್ರದುರ್ಗ ನಗರದಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಹೊಸದಾಗಿ 8 ಕಡೆ ಕಂಟೈನ್ಮೆಂಟ್ ಝೋನ್ ಗಳಾಗಿ ನಿರ್ಮಾಣ ಮಾಡಲಾಗಿದೆ. ಜೆಸಿಆರ್ ಬಡಾಣೆ 7ನೇ ಕ್ರಾಸ್, ಕೆಹೆಚ್ ಬಿ ಬಡಾವಣೆ 9ನೇ ಕ್ರಾಸ್, ಜೋಗಿಮಟ್ಟಿ ರಸ್ತೆ 1ನೇ ಕ್ರಾಸ್, ಹೊಳಲ್ಕೆರೆ ರಸ್ತೆ ಜ್ಞಾನವಿಕಾಸ ಶಾಲೆ ಸಮೀಪ, ವಿಪಿ ಎಕ್ಸ್ ಟೆನ್ಸನ್, ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗ, ಹಿಮ್ಮತ್ ನಗರ ಮಸೀದಿ ಸಮೀಪ ಹಾಗು ಡಿಸಿಸಿ ಬ್ಯಾಂಕ್ ಬಡಾವಣೆ ಸರೋಜಾಬಾಯಿ ಕಲ್ಯಾಣ ಮಂಟಪದ ಹಿಂಭಾಗದ ಪ್ರದೇಶಗಳು ಕಂಟೈನ್ಮೆಂಟ್ ಝೋನ್ ಗಳಾಗಿ ಘೋಷಿಸಲಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಇನ್ನು ಚಿತ್ರದುರ್ಗ ತಾಲೂಕಿನ ಜೆಎಸ್ ಕೋಟೆ ಗ್ರಾಮ ಕಂಟೈನ್ಮೆಂಟ್ ಝೋನ್ ಮಾಡಿದ್ದಾರೆ. ಜಿಲ್ಲೆಯ ಹೊಳಲ್ಕೆರೆ, ಚಳ್ಳಕೆರೆ, ಹೊಸದುರ್ಗ, ಹಿರಿಯೂರು, ಮೊಳಕಾಲ್ಮೂರು ತಾಲೂಕಿನ ಹಲವೆಡೆ ಕಂಟೈನ್ಮೆಂಟ್ ಝೋನ್ ನಿರ್ಮಾಣ ಮಾಡಿದ್ದು, ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ಕಂಟೈನ್ಮೆಂಟ್ ಝೋನ್ ಗಳಿವೆ.