2ಎ ಮೀಸಲಾತಿ; ಸರ್ಕಾರಕ್ಕೆ ಸೆಪ್ಟೆಂಬರ್ 30ರ ಗಡುವು
ಚಿತ್ರದುರ್ಗ, ಸೆಪ್ಟೆಂಬರ್ 28: " ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡದಿದ್ದರೆ ಅಕ್ಟೋಬರ್ 1ರಿಂದ ಹೋರಾಟ ಮಾಡಲಾಗುತ್ತದೆ" ಎಂದು ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಚಿತ್ರದುರ್ಗ ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಸಮಾವೇಶದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. "2ಎ ಮೀಸಲಾತಿ ಬಗ್ಗೆ ತೀರ್ಮಾನ ಕೈಗೊಳ್ಳಲು ಸೆಪ್ಟೆಂಬರ್ 30ರ ಗಡುವು ನೀಡುತ್ತಿದ್ದೇವೆ" ಎಂದರು.
ಪಂಚಮಸಾಲಿ ಮೀಸಲಾತಿ: ಅ.1ರಿಂದ ಮತ್ತೆ ಸತ್ಯಾಗ್ರಹದ ಎಚ್ಚರಿಕೆ
"ನಮ್ಮ ಸಮಾಜದ ಮಕ್ಕಳು ಶೇಕಡಾ 99ರಷ್ಟು ಅಂಕಗಳನ್ನು ಪಡೆದರೂ ಸರ್ಕಾರಿ ಉದ್ಯೋಗ, ಮೆಡಿಕಲ್, ಇಂಜಿನಿಯರಿಂಗ್ ಸೀಟುಗಳು ಸಿಗುತ್ತಿಲ್ಲ. ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ ಹಾಗಾಗಿ 2ಎ ಮೀಸಲಾತಿ ಕೇಳುತ್ತಿದ್ದೇವೆ. ಇದರ ಜೊತೆಗೆ ಕೇಂದ್ರದಿಂದ ಒಬಿಸಿ ಮೀಸಲು ಕೇಳುತ್ತಿದ್ದೇವೆ" ಎಂದು ಶ್ರೀಗಳು ತಿಳಿಸಿದರು.
ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಮುನ್ನೆಲೆಗೆ: ಎಂ.ಬಿ. ಪಾಟೀಲ್ ವರ್ತನೆಗೆ ಶಿವಶಂಕರಪ್ಪ ಕೆಂಡ!
"2ಎ ಮೀಸಲಾತಿಗಾಗಿ ಕೂಡಲ ಸಂಗಮದಿಂದ ಬೆಂಗಳೂರಿನ ವಿಧಾನಸೌಧದವರೆಗೆ 31 ದಿನಗಳ ಕಾಲ ಬೃಹತ್ ಪಾದಯಾತ್ರೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಸಮಾಜದವರು ರಾಜ್ಯಾದ್ಯಂತ ಅದ್ಧೂರಿ ಸ್ವಾಗತ ಕೋರಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಸರ್ಕಾರವನ್ನು ಎಚ್ಚರಿಸುವ ಕಾರ್ಯ ಮಾಡಿದ್ದಾರೆ. ಇದಲ್ಲದೇ ಹುಬ್ಬಳ್ಳಿಯಲ್ಲಿ ಸಮಾವೇಶ ಮಾಡಿ ಒತ್ತಾಯಿಸಿದ್ದೇವೆ" ಎಂದು ಹೇಳಿದರು.
ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬಿ.ಎಸ್ ಪರಮಶಿವಯ್ಯ ನೇಮಕ
"ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ 23 ದಿನಗಳ ಕಾಲ ನಿರಂತರ ಧರಣಿ ಸತ್ಯಾಗ್ರಹ ಮಾಡಿದ್ದೇವೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನರನ್ನು ಸೇರಿಸಿ ವಿರಾಟ್ ಪ್ರದರ್ಶನ ಮಾಡಿದ್ದೇವೆ. ಇಷ್ಟೆಲ್ಲಾ ಆದರೂ ಸರ್ಕಾರ ನಮಗೆ ಭರವಸೆ ನೀಡಿದೆಯೇ ಹೊರತು, ಅದನ್ನು ಕಾರ್ಯರೂಪಕ್ಕೆ ತರಲು ಆದೇಶ ನೀಡಿಲ್ಲ" ಎಂದು ಸರ್ಕಾರದ ವಿರುದ್ಧ ಶ್ರೀಗಳು ಬೇಸರ ವ್ಯಕ್ತಪಡಿಸಿದರು.
iframe src="https://www.facebook.com/plugins/video.php?height=309&href=https%3A%2F%2Fwww.facebook.com%2Foneindiakannada%2Fvideos%2F1055259111911156%2F&show_text=false&width=560&t=0" width="560" height="309" style="border:none;overflow:hidden" scrolling="no" frameborder="0" allowfullscreen="true" allow="autoplay; clipboard-write; encrypted-media; picture-in-picture; web-share" allowFullScreen="true">
"ಮುಖ್ಯಮಂತ್ರಿ ಬೊಮ್ಮಾಯಿ ಕಾಲಾವಕಾಶ ಕೇಳುತ್ತಿದ್ದಾರೆ, ಆಯೋಗ ವರದಿ ನೀಡಿದ ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು ನಿತ್ಯ ಸಂಪರ್ಕದಲ್ಲಿದ್ದಾರೆ. ಸಮಾಜಕ್ಕೆ ಒಳಿತು ಮಾಡುವ ಭರವಸೆ ನೀಡಿದ್ದಾರೆ. ಆದರೂ ಸಮಾಜದ ಮಕ್ಕಳ ಭವಿಷ್ಯದ ದೃಷ್ಠಿಯಿಂದಾಗಿ ಸರ್ಕಾರ ಕೂಡಲೇ ತೀರ್ಮಾನ ತೆಗೆದುಕೊಳ್ಳಬೇಕು, ಅದಕ್ಕಾಗಿ ನಾವು ಹೋರಾಟ ಮಾಡುವುದು ಅನಿವಾರ್ಯವಾಗಿದೆ" ಎಂದು ತಿಳಿಸಿದರು.
"ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿ ಸೆಪ್ಟೆಂಬರ್ 15ರೊಳಗೆ ಮೀಸಲಾತಿ ಪ್ರಕಟಿಸುವುದಾಗಿ ಭರವಸೆ ನೀಡಿತ್ತು. ಸರ್ಕಾರ ನೀಡಿದ ಭರವಸೆ ಹುಸಿಯಾಗಿದೆ. ಸರ್ಕಾರ ನುಡಿದಂತೆ ನಡೆಯಬೇಕಾಗಿದೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸುತ್ತೇವೆ. ಆಗಲೂ ನಮ್ಮ ಬೇಡಿಕೆ ಈಡೇರದಿದ್ದರೆ ಅಕ್ಟೋಬರ್ 1ರಂದು ಜೆ. ಎಚ್. ಪಟೇಲ್ ಜಯಂತಿ ಆಚರಣೆ ಮಾಡಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ಮುಂದುವರೆಸುತ್ತೇವೆ" ಎಂದು ಎಚ್ಚರಿಸಿದರು.
"2ಎ ಮೀಸಲಾತಿಗಾಗಿ ಆಗ್ರಹಿಸಿ ಈಗಾಗಲೇ 4ನೇ ಹಂತದ ಚಳವಳಿಯ ಭಾಗವಾಗಿ 'ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಬೃಹತ್ ರಾಜ್ಯ ಅಭಿಯಾನ'ವನ್ನು ಆಗಸ್ಟ್ 26 ರಿಂದ ಮಲೆಮಹದೇಶ್ವರ ಬೆಟ್ಟದಿಂದ ಆರಂಭಿಸಲಾಗಿದೆ. ಈ ಅಭಿಯಾನವು ಅಕ್ಟೋಬರ್ 1 ರವರೆಗೆ ರಾಜ್ಯಾದ್ಯಂತ ನಡೆಯಲಿದೆ" ಎಂದು ಶ್ರೀಗಳು ತಿಳಿಸಿದರು.
"ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರ ಕೊಟ್ಟ ಮಾತನ್ನು ನೆನಪಿಸುವುದು, ಮೀಸಲಾತಿ ಹಕ್ಕನ್ನು ಪಡೆಯಲು ನಮ್ಮ ನಿರಂತರ ಹೋರಾಟ ಇರುತ್ತದೆ. ಪಂಚ ಲಕ್ಷ ಸಂಖ್ಯೆಯಲ್ಲಿ ನಾವು ಭಾಗವಹಿಸುತ್ತೇವೆ. ಹೊಸ ಇತಿಹಾಸವನ್ನೇ ನಿರ್ಮಾಣ ಮಾಡುತ್ತೇವೆ. ನಮ್ಮ ಹೋರಾಟ ಯಾರ ವಿರುದ್ಧವಲ್ಲ. ಎಲ್ಲ ಲಿಂಗಾಯತ ವರ್ಗಗಳಿಗೂ ಮೀಸಲಾತಿ ನೀಡಬೇಕೆಂಬುದು ನಮ್ಮ ಉದ್ದೇಶವಾಗಿದೆ. ಆ ಮೂಲಕ ನಮ್ಮ ಮಕ್ಕಳ ಶಿಕ್ಷಣಕ್ಕೆ, ಉದ್ಯೋಗಕ್ಕೆ ಮೀಸಲಾತಿ ಪಡೆಯಬೇಕು ಎಂಬುದು ನಮ್ಮ ಹಂಬಲವಾಗಿದೆ" ಎಂದು ಸ್ಪಷ್ಟಪಡಿಸಿದರು.
"ರಾಜಕೀಯ ಪ್ರಜ್ಞೆ ಮೂಡಿಸಿದ ಪಂಚಮಸಾಲಿ ಸಮಾಜದಿಂದ ಮೂರು ಮಂದಿ ಸಿಎಂಗಳಾಗಿದ್ದಾರೆ. ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ. ಎಚ್. ಪಟೇಲ್ ಸಂಘಟನೆ ಮಾಡಿದ್ದರು. ನಮ್ಮ ಮೀಸಲಾತಿ ಹೋರಾಟ ಶೇ 99ರಷ್ಟು ಯಶಸ್ವಿಯಾಗಿದೆ, 2ಎ ಮೀಸಲಾತಿ ಪಡೆಯಲು ಕೇವಲ ಒಂದು ಮೆಟ್ಟಿಲು ಬಾಕಿ ಇದ್ದು ಆಯೋಗ ವರದಿ ನೀಡಿದ ನಂತರ ಸಂಪುಟಕ್ಕೆ ತಂದು ಒಪ್ಪಿಗೆ ಪಡೆಯುವುದು ಬಾಕಿ ಇದೆ. ಒಟ್ಟು ಲಿಂಗಾಯತರಲ್ಲಿ ಶೇ.60 ಮಂದಿ ಪಂಚಮಸಾಲಿ ಲಿಂಗಾಯತರು ಇದ್ದು ಸಾಮಾಜಿಕ ನ್ಯಾಯ ದೊರಕಿಸಿಕೊಡುವುದು ನಮ್ಮ ಕರ್ತವ್ಯ" ಎಂದರು.
"ನಮ್ಮ ಸಮಾಜದ ಕೆಲವರು ಸಿಎಂ ಬಳಿ ಹೋಗಿ ಮೀಸಲಾತಿ ನೀಡಬೇಡಿ ಎಂದು ಕಿವಿ ಚುಚ್ಚುವ ಕಾರ್ಯ ಮಾಡಿ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ದಯವಿಟ್ಟು ಹೋರಾಟ ಹತ್ತಿಕ್ಕುವ ಯತ್ನ ಮಾಡಬೇಡಿ. ಬೊಮ್ಮಾಯಿ ಸಮಾಜಕ್ಕೆ ಮೀಸಲಾತಿ ನೀಡಿದ್ದೆ ಆದರೆ ಪ್ರತಿ ವರ್ಷ ನಡೆಯುವ ಚನ್ನಮ್ಮ ಜಯಂತಿಯಲ್ಲಿ ಬೊಮ್ಮಾಯಿ ಫೋಟೋ ಕಾಯಂ ಆಗಿ ಹಾಕಲಾಗುತ್ತದೆ" ಎಂದು ತಿಳಿಸಿದರು.