ಚಿತ್ರದುರ್ಗ; ವಾಪಸ್ ಬಂದುಬಿದ್ದವು 2321 ಅಕ್ರಮ ಬಿಪಿಎಲ್ ಕಾರ್ಡುಗಳು
ಚಿತ್ರದುರ್ಗ, ಡಿಸೆಂಬರ್ 19: ಸರ್ಕಾರದಿಂದ ಕಡುಬಡವರಿಗೆ ನೀಡುತ್ತಿರುವ ಬಿಪಿಎಲ್ ಕಾರ್ಡ್ ಪಡೆದು ಅಕ್ಕಿ, ಬೇಳೆ ಪಡೆಯುತ್ತಿದ್ದ ಸಾವಿರಾರು ಅಕ್ರಮ ಫಲಾನುಭವಿಗಳು ತಮ್ಮ ಕಾರ್ಡ್ ಗಳನ್ನು ಸರ್ಕಾರಕ್ಕೆ ವಾಪಸ್ ಮಾಡಿದ್ದಾರೆ. ಸರ್ಕಾರ ನೀಡಿದ ಖಡಕ್ ಎಚ್ಚರಿಕೆಗೆ ಹೆದರಿ ಅನಿವಾರ್ಯವಾಗಿ ಪಡಿತರ ಚೀಟಿಗಳನ್ನು ವಾಪಸ್ ನೀಡಿದ್ದಾರೆ.
ಕಳೆದ ಸೆಪ್ಟಂಬರ್ ತಿಂಗಳಲ್ಲಿ, ಸರ್ಕಾರಕ್ಕೆ ತಪ್ಪು ಮಾಹಿತಿ ಒದಗಿಸಿ ಪಡೆದ ಬಿಪಿಎಲ್ ಪಡಿತರ ಚೀಟಿಗಳನ್ನು ಸ್ವಯಂಪ್ರೇರಣೆಯಿಂದ ಮರಳಿಸಬೇಕು. ಇಲ್ಲದೇ ಹೋದಲ್ಲಿ ಪಡಿತರ ಚೀಟಿ ಪಡೆದ ದಿನದಿಂದ ಇಲ್ಲಿಯವರೆಗೂ ಪಡೆದ ಪಡಿತರವನ್ನು ಹಣದ ರೂಪದಲ್ಲಿ ಮರಳಿಸುವುದಲ್ಲದೇ, ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ರಾಜ್ಯ ಸರ್ಕಾರ ಹಾಗೂ ಆಹಾರ ಇಲಾಖೆಯ ಮೂಲಕ ಎಚ್ಚರಿಸಲಾಗಿತ್ತು.
ಪಡಿತರ ಚೀಟಿಯಲ್ಲಿ ಏಸುವಿನ ಚಿತ್ರ ಆಂಧ್ರ ಸರ್ಕಾರ ಹೇಳಿದ್ದೇನು?
ಈ ಆದೇಶದಿಂದ ಎಚ್ಚೆತ್ತುಕೊಂಡ ಅಕ್ರಮ ಪಡಿತರ ಕಾರ್ಡ್ ಹೊಂದಿದ್ದ ಹಲವರು ಕಾರ್ಡ್ ಗಳನ್ನು ಹಿಂದಿರುಗಿಸಿದ್ದಾರೆ. ಚಿತ್ರದುರ್ಗದಲ್ಲಿ ಒಟ್ಟು 2321 ಕಾರ್ಡ್ ಗಳು ಸರ್ಕಾರಕ್ಕೆ ವಾಪಸ್ ಬಂದಿವೆ. ಅದರಲ್ಲಿ 265 ಮಂದಿ ಸ್ವಯಂಪ್ರೇರಿತರಾಗಿ ಕಚೇರಿಗೆ ಹಿಂತಿರುಗಿಸಿದ್ದಾರೆ. ಇದರಲ್ಲಿ 148 ಸರ್ಕಾರಿ ನೌಕರರು ಹಾಗೂ ಇತರ ಕಾರಣಗಳಿಂದ 105 ಮಂದಿ ಸೇರಿದ್ದಾರೆ.
ಜನರ ಬಳಿ ಅಕ್ರಮವಾಗಿ ಪಡೆದಿರುವ ಬಿಪಿಎಲ್ ಕಾರ್ಡ್ಗಳು ಇನ್ನೂ ಇದ್ದು, ಅವು ವಾಪಸ್ಸಾಗಬೇಕಿವೆ. ಜೊತೆಗೆ ಇ-ಕೆವೈಸಿ ಮೂಲಕ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಕುಟುಂಬ ಸದಸ್ಯರ ಬಯೋ ಅಥೆಂಟಿಕೇಶನ್ ಮಾಡಲಾಗುತ್ತಿದೆ. ಸದ್ಯಕ್ಕೆ 354143 ಜನಸಂಖ್ಯೆಯಿದ್ದು, ಒಟ್ಟು 411439 ಕಾರ್ಡ್ ಗಳಿವೆ. ಅದರಲ್ಲಿ 124004 ಇ-ಕೆವೈಸಿ ಬಿಪಿಎಲ್ ಕಾರ್ಡ್ ಗಳು ಮತ್ತು 6942 ಎಪಿಎಲ್ ಕಾರ್ಡ್ ಗಳಿವೆ. 130946 ಒಟ್ಟು ಇ-ಕೆವೈಸಿಯಾದ ಕಾರ್ಡ್ ಗಳು ಎಂದು ಆಹಾರ ಇಲೌಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಹೊಂದಿರುವವರು ಆದಷ್ಟು ಬೇಗ ಸಂಬಂಧ ಪಟ್ಟ ಇಲಾಖೆಗೆ ಹಿಂತಿರುಗಿಸಬೇಕು. ಇಲ್ಲವಾದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಹಾರ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದರು.