ಚಿತ್ರದುರ್ಗ; ಸಿಡಿಲಿಗೆ 154 ಜಾನುವಾರುಗಳು ಸಾವು
ಚಿತ್ರದುರ್ಗ, ಮೇ 16: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಜಮೀನು ಒಂದರಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು 154 ಜಾನುವಾರುಗಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ತಾಲ್ಲೂಕಿನ ಅಡವಿಮಲ್ಲಾಪುರ ಗ್ರಾಮದ ಬೈಯಣ್ಣ, ಪಾಪಯ್ಯ ಸೇರಿದಂತೆ ನಾಲ್ವರಿಗೆ ಸೇರಿದ ಜಾನುವಾರುಗಳು ಮೃತಪಟ್ಟಿವೆ. 114 ಮೇಕೆಗಳು, 39 ಕುರಿಗಳು ಹಾಗೂ 1 ಎತ್ತು ಮೃತಪಟ್ಟಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಇದೇ ತಾಲ್ಲೂಕಿನ ತಳವಾರಹಳ್ಳಿ ಗ್ರಾಮದಲ್ಲಿ ಬೀಸಿದ ಬಿರುಗಾಳಿಗೆ ಕುರಿ ಶೆಡ್ ಶೀಟ್ಗಳು ಅಲ್ಲೋಲ ಕಲ್ಲೋಲವಾಗಿದ್ದು, ಶೆಡ್ನಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ಜಖಂ ಆಗಿವೆ.
ಸಂಜೆ ಬೀಸಿದ ಬಿರುಗಾಳಿಗೆ ಕುರಿ, ಮೇಕೆ ಸಾವುಗಳಿಂದ ಕುರಿಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಜೀವನಕ್ಕೆ ಆಧಾರವಾಗಿ ನಂಬಿಕೊಂಡಿದ್ದ ಕುರಿ, ಮೇಕೆಗಳು ಸಿಡಿಲಿಗೆ ಬಲಿಯಾಗಿದ್ದು, ಇದರಿಂದ ಬಡ ಕುರಿಗಾಹಿಗಳ ಜೀವನ ದುಸ್ಥಿತಿಗೆ ತಲುಪುವ ಸಾಧ್ಯತೆ.
ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದು ಕುರಿಗಾಹಿಗಳಿಗೆ ಸಾಂತ್ವನ ಹೇಳಿದ್ದಾರೆ. ಇದರ ಜೊತೆಗೆ ಪಶು ವೈದ್ಯಾಧಿಕಾರಿಗಳು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಣ್ಣೀರು ಸುರಿಸಿದ ವೃದ್ಧೆ : ಬೆಲೆ ಬಾಳುವ ಎತ್ತು ಸಿಡಿಲಿಗೆ ಪ್ರಾಣಬಿಟ್ಟಿದ್ದನ್ನು ನೋಡಿ ಕುಟುಂಬದ ವೃದ್ಧೆಯೊಬ್ಬರು ಕಣ್ಣೀರಿಟ್ಟಿದ್ದಾರೆ. ಈ ದೃಶ್ಯ ನೆರೆದಿದ್ದವರನ್ನು ಕಣ್ಣೀರು ಹಾಕುವಂತೆ ಮಾಡಿದೆ.
ಚಿತ್ರದುರ್ಗ ಹಾಗೂ ಹಿರಿಯೂರು ನಗರದ ಸುತ್ತಮುತ್ತ ಮಿಂಚು ಸಹಿತ ಸಾಧಾರಣ ಮಳೆಯಾಗಿದೆ. ಮಳೆ ಸುರಿಯುತ್ತಿರುವುದರಿಂದ ರೈತರ ಕೃಷಿ ಚಟುವಟಿಕೆಗಳು ಆರಂಭವಾಗಲಿವೆ.