ಹರಿದ ಭದ್ರೆ, ಎರಡನೇ ಬಾರಿಗೆ ವಿವಿ ಸಾಗರಕ್ಕೆ 100 ಅಡಿ ನೀರು
ಚಿತ್ರದುರ್ಗ, ನವೆಂಬರ್ 9: ಚಿತ್ರದುರ್ಗ ಜಿಲ್ಲೆಯ ರೈತರ ಜೀವನಾಡಿಯಾಗಿರುವ, ರಾಜ್ಯದ ಹಳೆಯ ಅಣೆಕಟ್ಟುಗಳಲ್ಲಿ ಒಂದಾದ ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ನೀರು ಹರಿದು ಬರುತ್ತಿದೆ. ಸತತ ಎರಡನೇ ಬಾರಿಗೆ 100 ಅಡಿ ಗಡಿ ದಾಟಿದ್ದು, ಜಿಲ್ಲೆಯ ರೈತರಲ್ಲಿ ಸಂತಸ ತಂದಿದೆ.
ಇದಕ್ಕೂ ಮೊದಲು ಜಲಾಶಯದಲ್ಲಿ 91 ಅಡಿ ನೀರು ಇತ್ತು. ಸೆಪ್ಟೆಂಬರ್ 6 ರಿಂದ ಬೆಟ್ಟದ ತಾವರೆಕೆರೆ ಪಂಪ್ ಹೌಸ್ ನಿಂದ ನೀರನ್ನು ಪಂಪ್ ಮಾಡುವ ಮೂಲಕ ವಿವಿ ಸಾಗರಕ್ಕೆ ನೀರು ಹರಿಸಲಾಯಿತು. ಪ್ರತಿದಿನ 400 ರಿಂದ 450 ಕ್ಯೂಸೆಕ್ ಪ್ರಮಾಣದಲ್ಲಿ ನೀರು ನಿರಂತರವಾಗಿ ನೀರು ಹರಿಯುತ್ತಿದೆ. ಜೊತೆಗೆ ಸ್ವಲ್ಪ ಮಳೆ ನೀರು ಸಹ ಸೇರಿಕೊಂಡಿದೆ.
ಹಿರಿಯೂರು ನಗರಸಭೆಯ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ: ಬಿಜೆಪಿಗೆ ಅಭ್ಯರ್ಥಿಯೇ ಇಲ್ಲ
112 ವರ್ಷಗಳ ಇತಿಹಾಸ ಇರುವ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯಕ್ಕೆ 57 ಬಾರಿ 100 ಅಡಿ ದಾಟಿದ್ದು, ಇದು 58ನೇ ಬಾರಿಯಾಗಿದೆ. ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ವಾಣಿ ವಿಲಾಸ ಜಲಾಶಯವನ್ನು ಕಣ್ತುಂಬಿಕೊಳ್ಳಲು ತಾಲೂಕಿನ ರೈತರು, ಸಾರ್ವಜನಿಕರು ಹಾಗೂ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
1919 ರಲ್ಲಿ 128.30.ಅಡಿ ನೀರು ಸಂಗ್ರಹವಾಗಿತ್ತು
ವಿವಿ ಸಾಗರ ಜಲಾಶಯಕ್ಕೆ 1907 ರಿಂದ ನೀರಿನ ಸಂಗ್ರಹ ಆರಂಭವಾಗಿದ್ದು, 2011ರಲ್ಲಿ 109.66 ಅಡಿ, ಮೊದಲ ಬಾರಿಗೆ ನೀರು ಹರಿದು ಬಂದಿತ್ತು. ನಂತರ ಮೂರು ವರ್ಷ ಸತತ 100 ಅಡಿ ದಾಟಿತ್ತು. 1916 ರಿಂದ 1924 ವರೆಗೆ ಇದರಲ್ಲಿ 1919 ರಲ್ಲಿ 128.30.ಅಡಿ ನೀರು ಸಂಗ್ರಹವಾಗಿತ್ತು. 1933 ರಲ್ಲಿ 135.25 ಅಡಿ ನೀರು ಹರಿದು ಬಂದು ದಾಖಲೆ ನಿರ್ಮಿಸಿತ್ತು. 2011 ರಲ್ಲಿ 106.05 ಅಡಿ ನೀರು ಬಿಟ್ಟರೆ ಕಳೆದ ವರ್ಷ 2019 ರಲ್ಲಿ 102.60 ನೀರು ಸಂಗ್ರಹವಾಗಿತ್ತು. ಈ ವರ್ಷವೂ ಸಹ 100 ಅಡಿ ನೀರು ಹರಿದು ಬಂದಿದೆ. ವಿವಿ ಸಾಗರದ ಇಂದಿನ ಜಲಾಶಯದ ನೀರಿನ ಮಟ್ಟ 100.05 ಅಡಿ ಇದೆ.
ಶತಮಾನ ದಾಟಿದ ಅಣೆಕಟ್ಟು
ಭದ್ರಾ ಮೇಲ್ದಂಡೆ ಯೋಜನೆಯ 2 ಟಿಎಂಸಿ ನೀರಿನೊಂದಿಗೆ 100 ಅಡಿಯಾಗಿದ್ದು, ಸುಮಾರು 11 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ವಿವಿ ಸಾಗರ ಜಲಾಶಯ ಮಟ್ಟ ಇಂದಿನ ನೀರಿನ ಮಟ್ಟ 100.05 ಅಡಿ ಇದೆ. ಭದ್ರಾದಿಂದ ಪ್ರತಿದಿನ 650 ರಿಂದ 700 ಕ್ಯೂಸೆಕ್ಸ್ ನೀರು ಹರಿಸುತ್ತಿದ್ದು, 400 ರಿಂದ 450 ಕ್ಯೂಸೆಕ್ ಪ್ರಮಾಣದಲ್ಲಿ ನೀರು ಡ್ಯಾಂಗೆ ಸಂಗ್ರಹವಾಗುತ್ತದೆ. ಮಾರ್ಚ್ ಅಂತ್ಯದವರೆಗೂ ಭದ್ರಾ ನೀರು ವಿವಿ ಸಾಗರಕ್ಕೆ ಹರಿದು ಬರುತ್ತಿದೆ ಎಂದು ಹೇಳಲಾಗುತ್ತಿದೆ.
1907ರಲ್ಲಿ ವಾಣಿವಿಲಾಸ ಜಲಾಶಯವನ್ನು ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ, ಅಂದರೆ 1898 ರಿಂದ 1907ರ ಅವಧಿಯಲ್ಲಿ ನಿರ್ಮಾಣ ಮಾಡಿದ್ದು, ಅಣೆಕಟ್ಟು ಈಗ ಶತಮಾನ ದಾಟಿದೆ.
ಜಲಾಶಯದ ಒಟ್ಟು ಎತ್ತರ 43.28 ಮೀಟರ್
ಮೈಸೂರು ಅರಸರ ಕಾಲದಲ್ಲಿ ಈ ಜಲಾಶಯವು ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಹತ್ತಿರ ಮಾರಿಕಣಿವೆ ಎಂಬ ಪ್ರದೇಶದಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ಅರಸರ ತಾಯಿ ಕೆಂಪನಂಜಮ್ಮಣ್ಣಿ ನೆನಪಿಗಾಗಿ ನಿರ್ಮಿಸಿದ್ದಾರೆ. 1897ರಲ್ಲಿ ಪ್ರಾರಂಭವಾದ ಕಾಮಗಾರಿಯನ್ನು 10 ವರ್ಷದಲ್ಲಿ ಸುಮಾರು 45 ಲಕ್ಷ ವೆಚ್ಚದಲ್ಲಿ ಮುಗಿಸಿ ಜಲಾಶಯವನ್ನು ನಿರ್ಮಿಸಲಾಯಿತು. ಚಿತ್ರದುರ್ಗ ಭಾಗದ ಜನರಿಗೆ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗೆ ಈ ಜಲಾಶಯ ಹೆಚ್ಚು ಸಹಕಾರಿಯಾಗಿದೆ. ಜಲಾಶಯದ ಒಟ್ಟು ಎತ್ತರ 43.28 ಮೀಟರ್ (142 ಅಡಿ), ಉದ್ದ 405.50. ಮೀಟರ್, ಜಲಾವೃತ ಪ್ರದೇಶ 5374 ಚದರ ಕಿಲೋಮೀಟರ್. ಜಲಾಶಯ ನೀರಿನ ಸಾಮರ್ಥ್ಯ 850.30 (30 ಟಿಎಂಸಿ) ನೀರು.
2019 ಅಕ್ಟೋಬರ್ ತಿಂಗಳಲ್ಲಿ ಭದ್ರಾದಿಂದ ನೀರು
2019 ಮಾರ್ಚ್ ತಿಂಗಳಲ್ಲಿ 61.05 ಅಡಿ ನೀರಿಗೆ ಬಂದು ಜಲಾಶಯ ಡೆಡ್ ಸ್ಟೋರೆಜ್ ತಲುಪಿತ್ತು. ಜಲಾಶಯದಲ್ಲಿ ನೀರು ಕಡಿಮೆಯಾಗಿದ್ದರಿಂದ ಬಹುತೇಕ ಹಿರಿಯೂರು ತಾಲ್ಲೂಕಿನ ಜನತೆಯಲ್ಲಿ ಆತಂಕ ಮೂಡಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಹಿರಿಯೂರಿನ ಶಾಸಕಿ ಕೆ.ಪೂರ್ಣಿಮಾ, ಜಿಲ್ಲೆಯ ಶಾಸಕರು, ಸಂಸದರು, ರೈತರು, ಮಾಧ್ಯಮದವರು ತೊಡಕಾಗಿರುವ ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆಯನ್ನು ಬೇಗ ಮುಗಿಸುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ತಂದರು. ಒತ್ತಡಕ್ಕೆ ಮಣಿದ ಸಿಎಂ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಂತಿಮವಾಗಿ 2019 ಅಕ್ಟೋಬರ್ ತಿಂಗಳಲ್ಲಿ ಭದ್ರಾದಿಂದ ವಿವಿ ಸಾಗರಕ್ಕೆ ಮೊದಲ ಬಾರಿಗೆ ಪ್ರಾಯೋಗಿಕವಾಗಿ ನೀರು ಹರಿಸಿದರು. ಭದ್ರಾ ನೀರಿನ ಜೊತೆಗೆ ಮಳೆ ಕೂಡ ಕೈಜೋಡಿಸಿದ್ದರಿಂದ ಜನವರಿ 2020 ರಲ್ಲಿ 102.60 ಅಡಿಗೆ ಏರಿಕೆಯಾಗಿತ್ತು.
Recommended Video
ಹಿರಿಯೂರು ಇಂದಿಗೂ ಬರದ ನಾಡಾಗಿಯೇ ಉಳಿದಿದೆ
ರಾಜ್ಯದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾದ ಹಿರಿಯೂರಿನ ವಿವಿ ಸಾಗರ, ಬರಪೀಡಿತ ಪ್ರದೇಶಗಳಿಗೆ ನೀರುಣಿಸುವ ಜಲಾಶಯವಾಗಿದೆ. ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ ಡಿಆರ್'ಡಿಒಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಈ ಹಿಂದೆ ಕೃಷಿ ಚಟುವಟಿಕೆಗಳಿಗೆ ವಿವಿ ಸಾಗರದ ನೀರಿನಿಂದ ಕಬ್ಬು, ಭತ್ತ, ರಾಗಿ, ಹತ್ತಿ, ತೆಂಗು, ಅಡಿಕೆ, ಬಾಳೆ ಮತ್ತಿತರರ ಬೆಳೆಗಳನ್ನು ಬೆಳೆಯುತ್ತಿದ್ದರಿಂದ ಹಿರಿಯೂರು ಮಲೆನಾಡಿನಂತೆ ಕಂಗೊಳಿಸುತ್ತಿತ್ತು. ಆದರೂ ಹಿರಿಯೂರು ಇಂದಿಗೂ ಬರದ ನಾಡಾಗಿಯೇ ಉಳಿದಿದೆ.