"ಇದು ಮನುಷ್ಯತ್ವ ಇರುವ ಸರ್ಕಾರವಾ?"; ವೈಎಸ್ ವಿ ದತ್ತ
ಚಿಕ್ಕಮಗಳೂರು, ಅಕ್ಟೋಬರ್ 2: ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಘಟನೆ ನಾಗರೀಕ ಸಮಾಜ ತಲೆತಗ್ಗಿಸುವಂಥದ್ದು. ಆರೋಪಿಗಳಿಗೆ ಶಿಕ್ಷೆ ತಪ್ಪಿಸಲು ರಾತ್ರೋರಾತ್ರಿ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ಮಾಜಿ ಶಾಸಕ ವೈಎಸ್ ವಿ ದತ್ತ ಪ್ರತಿಕ್ರಿಯೆ ನೀಡಿದ್ದಾರೆ.
ಕಡೂರಿನಲ್ಲಿ ಗಾಂಧಿ ಜಯಂತಿ ಅಂಗವಾಗಿ ದಲಿತ ಕೇರಿಯಲ್ಲಿ ಸಹಪಂಕ್ತಿ ಭೋಜನ ಮಾಡಿದ ಬಳಿಕ ಮಾತನಾಡಿದ ಅವರು, ಆರೋಪಿಗಳಿಗೆ ಶಿಕ್ಷೆ ತಪ್ಪಿಸಲು ಸರ್ಕಾರವೇ ಬೆಂಗಾವಲಾಗಿ ನಿಂತು ಅಂತ್ಯಸಂಸ್ಕಾರವನ್ನು ತರಾತುರಿಯಲ್ಲಿ ಮಾಡಿದ್ದು ಮೃಗೀಯ ವರ್ತನೆ. ಇದು ಮನುಷ್ಯತ್ವ ಇರುವ ಸರ್ಕಾರವಾ ಎಂದು ಪ್ರಶ್ನಿಸಿದರು.
ಗೌಡ್ರು ಇರೋ ತನಕ ನಿಯತ್ತು ಜೆಡಿಎಸ್ ಮೇಲೆ: ಆಫರ್ ತಿರಸ್ಕರಿಸಿದ ವೈಎಸ್ ವಿ ದತ್ತ
ರಾಮ ರಾಜ್ಯ ರಾಮ ರಾಜ್ಯ ಅಂತಾ ಹೇಳ್ತಾರೆ. ರಾಮನಿಗೆ ದೇವಸ್ಥಾನ ಕಟ್ಟಿಸಿ ಸಂಭ್ರಮಿಸ್ತಾರೆ. ರಾಮ ಮಂದಿರ ವಿಚಾರವಾಗಿ ನ್ಯಾಯಾಲಯ ನಿನ್ನೆ ತೀರ್ಪು ಕೊಟ್ಟಾಗ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಆದರೆ ಒಬ್ಬಳು ದಲಿತ ಹೆಣ್ಣು ಮಗಳನ್ನು ರಾತ್ರೋರಾತ್ರಿ ಅತ್ಯಾಚಾರ ಮಾಡಿ ಕೊಂದಿದ್ದರು. ಕುಟುಂಬಸ್ಥರಿಗೆ ತಿಳಿಸದೇ ಸರ್ಕಾರವೇ ಅಂತ್ಯ ಸಂಸ್ಕಾರ ಮಾಡಿದೆ. ಇದು ಮನುಷ್ಯತ್ವ ಇರುವ ಸರ್ಕಾರವೇ ಅಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಯುವಕರು ತಪ್ಪು ಕಲ್ಪನೆಯಲ್ಲಿ ರಾಮ, ಹಿಂದೂತ್ವ, ಅಯೋಧ್ಯೆ ಎಂದರೆ ದೇಶ ಪ್ರಪಂಚ ನೆಟ್ಟಗಾಗುತ್ತೆ ಅಂದುಕೊಂಡಿದ್ದಾರೆ. ಇದರಿಂದ ದೇಶಕ್ಕೆ ಪ್ರಯೋಜನವಿಲ್ಲ. ಬರೀ ರಾಜಕಾರಣಿಗಳು ಲಾಭ ಪಡೆದುಕೊಳ್ಳುತ್ತಾರೆ. ಇದು ಹೀಗೇ ಮುಂದುವರೆದರೆ ನಮ್ಮ ಅಕ್ಕತಂಗಿಯರನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
Recommended Video