ಕುರ್ಚಿ ಕಾಲು ಗಟ್ಟಿಯಾಗಿದ್ರೆ ಸಾಕು; ಕುಮಾರಣ್ಣನ ಹಾದಿಯಲ್ಲಿ ಯಡಿಯೂರಪ್ಪ?
ಚಿಕ್ಕಮಗಳೂರು, ಸೆಪ್ಟೆಂಬರ್ 12: ಸಿಎಂ ಯಡಿಯೂರಪ್ಪ ಕೂಡ ಮಾಜಿ ಸಿಎಂ ಕುಮಾರಣ್ಣನ ಹಾದಿಯಲ್ಲೇ ಸಾಗುತ್ತಿದ್ದಾರೆ. ಹಳ್ಳಿ ದಿಲ್ಲಿಯಾದ್ರೇನು, ದಿಲ್ಲಿ ಹಳ್ಳಿಯಾದ್ರೇನು, ಕುರ್ಚಿಯ ಕಾಲು ಗಟ್ಟಿಯಾಗಿದ್ರೆ ಸಾಕು ಎಂಬಂತಾಗಿದೆ. ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ ಕೂಡ ಚಿಕ್ಕಮಗಳೂರಿನ ಶೃಂಗೇರಿ ಹಾಗೂ ಕೊಪ್ಪದಲ್ಲಿ ಸಾಕಷ್ಟು ಪೂಜೆ-ಹೋಮ-ಹವನ, ಯಾಗ ಯಜ್ಞ ನಡೆಸಿದ್ದರು. ಇದೀಗ ಸಿಎಂ ಬಿಎಸ್ ವೈ ಕೂಡ ಕೊಪ್ಪದ ಗೌರಿಗದ್ದೆ ಆಶ್ರಮದಲ್ಲಿ ಶತರುದ್ರಯಾಗ ನಡೆಸಿದ್ದಾರೆ. ಆರು ದಿನಗಳಿಂದ ನಡೆಯುತ್ತಿದ್ದ ಹೋಮದ ಪೂರ್ಣಾಹುತಿಯಲ್ಲಿ ಭಾಗಿಯಾಗಿ, ಮುಂದಿನ ಮೂರೂವರೆ ವರ್ಷ ಮುಖ್ಯಮಂತ್ರಿಯಾಗಿ ಇರಲೆಂದು ಬೇಡಿಕೊಂಡಿದ್ದಾರೆ.
ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ; ಸಿಎಂ
ಸಿಎಂ ಯಡಿಯೂರಪ್ಪನವರ ಮಾತಿಗೂ ನಡೆಗೂ ಒಂದಕ್ಕೊಂದು ಸಂಬಂಧವೇ ಇಲ್ಲದಂತಾಗಿದೆ. ಯಾಕಂದ್ರೆ, ಇಂದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಗೆ ಆಗಮಿಸಿದ ಬಿಎಸ್ ವೈ, ಹಿಂದೆ ಮಳೆ ಬರಲಿ ಎಂದು ಪೂಜೆ ಮಾಡ್ತಿದ್ವಿ, ಇವತ್ತು ಮಳೆ ಕಡಿಮೆಯಾಗ್ಲಿ ಎಂದು ಶಾರದಾಂಬೆಗೆ ಪೂಜೆ ಮಾಡ್ತಿದ್ದೇವೆಂದು ಹೇಳಿದ್ರು. ಆದ್ರೆ, ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮದಲ್ಲಿ ಅಧಿಕಾರ ಶಾಶ್ವತವಾಗಿರಲೆಂದು ಹಿಂದೆ ರಾಜ ಮಹಾರಾಜರು ಮಾಡ್ತಿದ್ದ ಶತರುದ್ರಯಾಗದಲ್ಲಿ ಪಾಲ್ಗೊಂಡಿದ್ದರು.
ಕಳೆದ ಆರು ದಿನಗಳಿಂದ ನಡೆಯುತ್ತಿದ್ದ ಯಾಗದ ಪೂರ್ಣಾಹುತಿಯಲ್ಲಿ ಭಾಗಿಯಾದ ಸಿಎಂ, ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಹೋಮದಲ್ಲಿ ಪಾಲ್ಗೊಂಡಿದ್ದರು. ದೇವೇಗೌಡ, ರಮೇಶ್ ಕುಮಾರ್, ವಿನಯ್ ಗುರೂಜಿ ಪಾದ ಪೂಜೆ ಮಾಡಿದ್ದೆ ಈ ಕ್ಷೇತ್ರ ವಿಶೇಷವಾಗಿತ್ತು. ಆದರೆ, ಇಲ್ಲಿವರೆಗೆ ಗೌರಿ ಗದ್ದೆ ಆಶ್ರಮದಲ್ಲಿ ಯಾರೂ, ಯಾವ ರಾಜಕಾರಣಿಯೂ ಹೋಮ-ಹವನ ಪೂಜೆ ಮಾಡಿರಲಿಲ್ಲ. ಬಿಎಸ್ ವೈ ಇಲ್ಲಿ ಹೋಮ-ಮಾಡುವ ಮೂಲಕ ಇಲ್ಲೂ ಯಾಗ-ಯಜ್ಞಗಳಿಗೆ ಮುನ್ನುಡಿ ಬರೆದಿದ್ದಾರೆ.
ವಿನಯ್ ಗುರೂಜಿ ಮೊರೆ ಹೋದ ಸಿಎಂ; ಯಡಿಯೂರಪ್ಪ ಕಟ್ಟಿಕೊಂಡಿದ್ದ ಹರಕೆ ಏನು?
ಕಳೆದ ಬಾರಿ ಚಿಕ್ಕಮಗಳೂರಿಗೆ ಆಗಮಿಸಿದ ಬಿಎಸ್ವೈ, ಪ್ರವಾಹ ಪೀಡಿತ ಪ್ರದೇಶ ಮೂಡಿಗೆರೆ ತಾಲೂಕಿನ ಮಲೆಮನೆಗೆ ಕೇವಲ ಹತ್ತು ನಿಮಿಷ ಭೇಟಿ ಕೊಟ್ಟು ಹಿಂದಿರುಗಿದ್ದರು. ಆದರೆ ಈ ದಿನ ತುಂಬಾ ಪುರುಸೊತ್ತಾಗಿದ್ದ ಸಿಎಂ, ವಿನಯ್ ಗುರೂಜಿ ಆಶ್ರಮದಲ್ಲಿ ಬರೋಬ್ಬರಿ ಎರಡು ಗಂಟೆಗಳ ಕಾಲ ಹೋಮ ಹವನದಲ್ಲಿ ಭಾಗಿಯಾಗಿದ್ದರು. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಈ ಆಶ್ರಮಕ್ಕೆ ಭೇಟಿ ನೀಡಿದ ಬಿಎಸ್ವೈ, ತಾನು ಸಿಎಂ ಆದ್ರೆ ಶತರುದ್ರಯಾಗ ಹೋಮ ನಡೆಸುವುದಾಗಿ ಹರಕೆ ಮಾಡಿಕೊಂಡಿದ್ದರು. ಅದರಂತೆಯೇ ಇಂದು ಹರಕೆ ತೀರಿಸಿದರು.