ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಕನ್ನಡ ಕೈಬರಹ ಸ್ಪರ್ಧೆ ಫಲಿತಾಂಶ ಪ್ರಕಟ
ಮೂಡಿಗೆರೆ, ಡಿಸೆಂಬರ್ 17: ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕನ್ನಡ ಕೈ ಬರಹ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.
66ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಾಜ್ಯಮಟ್ಟದ ಕನ್ನಡ ಕೈಬರಹ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ತೇಜಸ್ಟಿ ಟ್ರಸ್ಟ್ ಮೂರು ವಿಭಾಗದಲ್ಲಿ ಈ ಸ್ಪರ್ಧೆ ನಡೆಸಿತ್ತು.
12 ವರ್ಷದೊಳಗಿನ ವಿಭಾಗ:ಶರಧಿ ಡಿ, ಶಿವಮೊಗ್ಗ (ಪ್ರಥಮ), ಹಿಮಾನಿ ಎಸ್, ಬೆಂಗಳೂರು (ದ್ವಿತೀಯ), ಲಕ್ಷ್ಮಿ ಎಸ್ ಮಳಲಿ, ಹಾವೇರಿ (ತೃತೀಯ), ವರ್ಷ ಕೆ ಮೂಡಿಗೆರೆ ಮತ್ತು ಸೃಷ್ಟಿ ಎಂ.ಆರ್ ಕೊಪ್ಪ (ಸಮಾಧಾನಕರ) ಬಹುಮಾನ ಪಡೆದುಕೊಂಡಿದ್ದಾರೆ.
13 ರಿಂದ 18 ವರ್ಷದೊಳಗಿನ ವಿಭಾಗ: ಕುಮಾರೇಶ್ ಎನ್, ಬಾಗಲಕೋಟೆ (ಪ್ರಥಮ), ವಂದನ ಕೆ, ಬೆಂಗಳೂರು (ದ್ವಿತೀಯ), ಚೇತನ ಪಿ.ಎಂ, ಚಿಂತಾಮಣಿ ನಗರ (ತೃತೀಯ), ಶ್ರೇಯಾ ಎಂ.ವಿ ಶಿರಸಿ ಮತ್ತು ಪ್ರಮೀಳಾ, ಉಡುಪಿ (ಸಮಾಧಾನಕರ) ಬಹುಮಾನ ಪಡೆದುಕೊಂಡಿದ್ದಾರೆ.
19 ವರ್ಷ ಮೇಲ್ಪಟ್ಟವರ ವಿಭಾಗ: ಶಿವಪ್ರಸಾದ್, ಬೆಳಗಾವಿ (ಪ್ರಥಮ), ವಿಸ್ಮಿತ ವಿ, ಶಿಕಾರಿಪುರ (ದ್ವಿತೀಯ), ಸಂಗೀತಾ ಬಿ.ಕೆ, ಮಂಡ್ಯ (ತೃತೀಯ), ಮಂಜುನಾಥ್ ವೈ.ಎಸ್. ಬೆಳ್ತಂಗಡಿ ಮತ್ತು ಡಾ.ಶ್ರೀಕಂಠ ಕೂಡಿಗೆ, ಶಿವಮೊಗ್ಗ (ಸಮಾಧಾನಕರ) ಬಹುಮಾನ ಪಡೆದುಕೊಂಡಿದ್ದಾರೆ.
ಕನ್ನಡ ಕೈಬರಹ ಸ್ಪರ್ದೆಗೆ ಒಟ್ಟು 814 ಪತ್ರಗಳು ಬಂದಿದ್ದು ಲೇಖಕರಾದ ನರೇಂದ್ರ ರೈ ದೇರ್ಲ, ಲೇಖಕರು ಹಾಗೂ ಉಪನ್ಯಾಸಕರಾದ ಡಾ. ಮಂಜುಳಾ ಹುಲ್ಲಹಳ್ಳಿ, ಚಿತ್ರ ಕಲಾವಿದರಾದ ಮೋನಪ್ಪ ಅವರು ತೀರ್ಪುಗಾರರಾಗಿದ್ದರು.
ವಿಜೇತರಿಗೆ ಮೂರು ವಿಭಾಗಗಳಲ್ಲಿ ಪ್ರಥಮ 3 ಸಾವಿರ, ದ್ವಿತೀಯ 2 ಸಾವಿರ ಮತ್ತು ತೃತೀಯ 1 ಸಾವಿರ ನಗದು ಬಹುಮಾನವಿದ್ದು ಜನವರಿಯಲ್ಲಿ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ.ರಮೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಬಗ್ಗೆ: ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಈ ನಾಡು ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿದ್ದು, ಸರ್ಕಾರವು ಇವರ ಹೆಸರಿನಲ್ಲಿ ಪ್ರತಿಷ್ಠಾನವನ್ನು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ಸ್ಥಾಪಿಸಲಾಗಿದೆ. ಈ ಮುಖಾಂತರ ತೇಜಸ್ವಿಯವರ ಸಾಹಿತ್ಯ, ಪರಿಸರ, ಫೋಟೋಗ್ರಫಿ, ಚಿತ್ರಕಲೆ, ಕೃಷಿ ಮುಂತಾದ ಹಲವಾರು ವಿಚಾರಧಾರೆಗಳನ್ನು ಯುವಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಪ್ರತಿಷ್ಠಾನವು ಕಾರ್ಯೋನ್ಮುಖವಾಗಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕನ್ನಡ ಸಾಹಿತ್ಯ-ಸಂಸ್ಕೃತಿ ಚಿಂತನೆಯ ಹೊಸ ದಿಗಂತಗಳ ಬಾಗಿಲುಗಳನ್ನು ತೆರೆಸಿದ ಲೇಖಕ. ಕ್ರಿಯಾಶೀಲತೆ ಮತ್ತು ಚಲನಶೀಲತೆ ಅವರ ಸಾಹಿತ್ಯದ ಕೇಂದ್ರ ಆಶಯ. ವ್ಯಕ್ತಿ ವಿಶಿಷ್ಟ ಸಿದ್ಧಾಂತದಿಂದ ಜೀವಕೇಂದ್ರಿತ ಜಗತ್ತಿನ ಶೋಧದ ಕಡೆಗೆ ಅವರ ಸಾಹಿತ್ಯ ವಿಕಾಸವಾಗುತ್ತ ಬೆಳೆಯುತ್ತದೆ. ತಮ್ಮ ಅನುಭವಗಳನ್ನೇ ಕಥನಗಳನ್ನಾಗಿಸಿ, ಅದಕ್ಕೆ ಹೊಸ ವೈಚಾರಿಕತೆ, ದಾರ್ಶನಿಕತೆ ಹಾಗೂ ಉಜ್ವಲ ಕಾಂತಿಯನ್ನು ದೊರಕಿಸಿಕೊಟ್ಟ ಕನ್ನಡದ ಅಪರೂಪದ ಲೇಖಕ ತೇಜಸ್ವಿ.
ಅವರ ಸಾಹಿತ್ಯದ ಅಭಿವ್ಯಕ್ತಿ ವಿಧಾನ, ಸ್ವರೂಪ, ಕಥನಕ್ರಮ, ಭಾಷೆಯ ಬಳಕೆ, ಹೊಸ ನುಡಿಗಟ್ಟುಗಳ ಶೋಧ ತಮ್ಮ ಎಲ್ಲ ಬರಹಗಳಲ್ಲಿ ನಿರಂತರವಾಗಿ ಅನ್ವೇಷಣೆಗೆ ಒಳಪಟ್ಟಿದ್ದವು ಎಂಬುದಕ್ಕೆ ಅವರ ಅಗಾಧ ಕೃತಿಗಳೇ ಸಾಕ್ಷಿಯಾಗಿವೆ. ಅನುವಾದ, ಚಿತ್ರಕಲೆ, ಫೋಟೋಗ್ರಫಿ, ಸಿತಾರ್ ವಾದನ , ಸಂಗೀತ ಆಸ್ವಾದನೆ, ಮೀನು ಶಿಕಾರಿ, ಬೇಟೆ, ಪಕ್ಷಿ ವೀಕ್ಷಣೆ, ಕೃಷಿ, ಯಂತ್ರ ರಿಪೇರಿ, ಚಾರಣ, ಕಂಪ್ಯೂಟರ್ ಬಗೆಗಿನ ಕುತೂಹಲ ಹಾಗೂ ಅದರ ಬಳಕೆಯ ಸಾಧ್ಯತೆಗಳು, ಅಡುಗೆ ಹೀಗೆ ಹತ್ತು ಹಲವು ಇವರ ಆಸಕ್ತಿ, ಅಭಿರುಚಿ, ಕುತೂಹಲಗಳಾಗಿದ್ದವು. ಹಾಗಾಗಿ ತೇಜಸ್ವಿ ಎಂದರೇನೆ ಒಂದು ವಿಸ್ಮಯ, ನಿಗೂಢ.
Recommended Video