ಕಡೂರಿನಲ್ಲಿ ಬರ್ಬರವಾಗಿ ಮಹಿಳೆ ಕೊಲೆ
ಚಿಕ್ಕಮಗಳೂರು, ಫೆಬ್ರವರಿ 18: ಮಹಿಳೆಯೊಬ್ಬರ ಕತ್ತು ಕೊಯ್ದು ದರೋಡೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಲಕ್ಷ್ಮೀಶ ನಗರದಲ್ಲಿ ನಡೆದಿದೆ.
31 ವರ್ಷದ ಕವಿತಾ ಕೊಲೆಯಾಗಿರುವ ಮಹಿಳೆ. ಕವಿತಾ ಅವರ ಗಂಡ ಕಡೂರು ತಾಲೂಕಿನ ಬೀರೂರು ನಗರದಲ್ಲಿ ದಂತ ವೈದ್ಯರಾಗಿದ್ದಾರೆ. ಅವರು ಕ್ಲಿನಿಕ್ ಗೆ ಹೋದ ನಂತರ ಈ ದುರ್ಘಟನೆ ನಡೆದಿದೆ. ಕವಿತಾ ಅವರನ್ನು ಸಂಜೆ 6.45 ರಿಂದ 8.15ರೊಳಗೆ ಕೊಲೆ ಮಾಡಲಾಗಿದೆ.
ಶಾಕಿಂಗ್; ಸಹೋದರಿಯ ಗುಪ್ತಾಂಗಕ್ಕೆ ಗುಂಡಿಕ್ಕಿ ಹತ್ಯೆ ಮಾಡಿದ ಸಹೋದರ!
ಸಂಜೆ 6.45ಕ್ಕೆ ಅವರು ಕೊನೆಯದಾಗಿ ತಮ್ಮ ಪತಿಯೊಂದಿಗೆ ಮಾತನಾಡಿದ್ದಾರೆ. 8.15ಕ್ಕೆ ಅವರ ಸಾವಿನ ಸಂಗತಿ ಹೊರಬಂದಿದೆ. ಕೊಲೆ ಮಾಡಿದ ದುಷ್ಕರ್ಮಿಗಳು ಮನೆಯ ಬೀರುವಿನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ.
ಸ್ಥಳಕ್ಕೆ ಭೇಟಿ ನೀಡಿದ ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ರವಾನಿಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮನೆಯ ಸುತ್ತಮುತ್ತ ಇದ್ದ ಸಿಸಿಟಿವಿ ದೃಶ್ಯಾವಳಿಗಳನ್ನ ಪೊಲೀಸರು ವಶಪಡಿಕೊಂಡಿದ್ದಾರೆ. ಒಂಟಿ ಮಹಿಳೆಯ ಬರ್ಬರ ಕೊಲೆ ಕಂಡು ಗ್ರಾಮದವರು ಬೆಚ್ಚಿ ಬಿದ್ದಿದ್ದಾರೆ.