ಮರಬಿದ್ದು ಕಾಲಿನ ಸ್ವಾಧೀನ ಕಳೆದುಕೊಂಡ ಮಹಿಳೆ: ಚಿಕಿತ್ಸೆಗೆ ನೆರವಾಗದ ಶಾಸಕರ ವಿರುದ್ಧ ದೂರು
ಚಿಕ್ಕಮಗಳೂರು, ಡಿಸೆಂಬರ್1 : ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕ ಮಹಿಳೆಯೊಬ್ಬರು ಶಾಸಕ ರಾಜೇಗೌಡ ವಿರುದ್ಧ ದೂರು ದಾಖಲಿಸಿದ್ದಾರೆ.
ಶಾಸಕರ ಸಂಬಂಧಿ ಹಾಗೂ ಎಸ್ಟೇಟ್ ಮ್ಯಾನೇಜರ್ ವಿರುದ್ಧ ವಂಚನೆ ಮಾಡಿರುವ ಆರೋಪದ ಮೇಲೆ ದೂರು ದಾಖಲಿಸಿರುವ ಮಹಿಳೆ, ನಮಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪ: ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ಮತ್ತೆ ದೂರು
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಾಡುಬೈಲು ಗ್ರಾಮದ ಕೂಲಿ ಕಾರ್ಮಿಕ ಮಹಿಳೆ ಶೋಭಾ ಎನ್ನುವವರು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಶಾಸಕ ರಾಜೇಗೌಡ ವಿರುದ್ಧ ದೂರು ದಾಖಲಿಸಿದ್ದಾರೆ.
'ಬಾಸಾಪುರ ಗ್ರಾಮದಲ್ಲಿರುವ ಶಾಸಕ ರಾಜೇಗೌಡ ಮಾಲೀಕತ್ವದ ಕಲ್ಲೇಶ್ವರ ಎಸ್ಟೇಟ್ನಲ್ಲಿ ಕಳೆದ ಜುಲೈ 16ರಂದು ನಾನು, ನನ್ನ ಪತಿ ಇತರ ಕಾರ್ಮಿಕರೊಂದಿಗೆ ಕೂಲಿ ಕೆಲಸ ಮಾಡುತ್ತಿದ್ದ ವೇಳೆ, ಆಕಸ್ಮಿಕವಾಗಿ ತೋಟದಲ್ಲಿದ್ದ ಮರವೊಂದು ತನ್ನ ಮೈಮೇಲೆ ಬಿದ್ದಿದೆ. ಮರ ಬಿದ್ದ ಪರಿಣಾಮ ತಾನು ಗಾಯಗೊಂಡು ಪ್ರಜ್ಞೆ ತಪ್ಪಿದ್ದು, ಈ ವೇಳೆ ಗೋಪಾಲ ಎನ್ನುವವರು ಆಟೋದಲ್ಲಿ ಕರೆತಂದು ಬಾಳೆಹೊನ್ನೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಅಲ್ಲಿನ ವೈದ್ಯರ ಸೂಚನೆ ಮೇರೆಗೆ ಶಾಸಕ ರಾಜೇಗೌಡ ಹಾಗೂ ಅವರ ಸಂಬಂಧಿ ಯುವರಾಜಗೌಡ ನನ್ನನ್ನು ಶಿವಮೊಗ್ಗದ ಗುತ್ತಿ ಮಲೆನಾಡು ಆಸ್ಪತ್ರೆಗೆ ದಾಖಲಿಸಿದ್ದರು' ಎಂದು ದೂರುದಾರೆ ನಡೆದ ಘಟನೆಯನ್ನು ವಿವರಿಸಿದ್ದಾರೆ.
ಮಾತು ಮುಂದುವರಿಸಿದ ಶೋಭಾ, 'ಎನ್.ಆರ್.ಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆದಿದ್ದೇನೆ. ಈವರೆಗೂ ಶಾಸಕ ರಾಜೇಗೌಡ ಅವರು ನನ್ನ ಅಳಲು ಕೇಳಲು ಮುಂದಾಗಿಲ್ಲ. ಸರ್ಕಾರದಿಂದ ನಯಾ ಪೈಸೆಯ ಪರಿಹಾರ ಕೊಡಿಸಿಲ್ಲ. ಆಸ್ಪತ್ರೆಯಲ್ಲಿ ನನಗೆ ಸರಿಯಾದ ಚಿಕಿತ್ಸೆ ಸಿಗದ ಕಾರಣ ನನ್ನ ಸ್ವಂತ ಖರ್ಚಿನಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಚಿಕಿತ್ಸೆಗೆ ಸಾಲ ಮಾಡುವ ಪರಿಸ್ಥಿತಿ ಇದೆ. ಈ ಬಗ್ಗೆ ಸರ್ಕಾರದ ಸೌಲಭ್ಯದ ಬಗ್ಗೆ ಶಾಸಕರ ಮಗನ ಬಳಿ ವಿಚಾರಿಸಿರೆ, ಅವರು 'ನನ್ನ ಬಳಿ ಹಣವಿಲ್ಲ, ನೀವು ಏನಾದರೂ ಮಾಡಿಕೊಳ್ಳಿ' ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಶೋಭಾ ಆರೋಪಿಸಿದ್ದಾರೆ.