ಕೊಪ್ಪದ ಸಹಕಾರ ಸಾರಿಗೆ ಕೆಎಸ್ಆರ್ಟಿಸಿ ಜೊತೆ ವಿಲೀನವಾಗುತ್ತಾ?
ಚಿಕ್ಕಮಗಳೂರು, ಫೆಬ್ರವರಿ 24: ತೀವ್ರ ಆರ್ಥಿಕ ಸಂಕಷ್ಟದಿಂದ ಸಂಚಾರ ಸ್ಥಗಿತಗೊಳಿಸಿರುವ ಮಲೆನಾಡಿನ ಸಹಕಾರ ಸಾರಿಗೆಯನ್ನು ಕೆಎಸ್ಆರ್ಟಿಸಿ ಜತೆಗೆ ವಿಲೀನಗೊಳಿಸಬಹುದು ಎಂಬ ಅಭಿಪ್ರಾಯ ಸಾರಿಗೆ ಅಧಿಕಾರಿಗಳು ಮತ್ತು ತಜ್ಞರ ವಲಯದಿಂದ ಕೇಳಿಬರುತ್ತಿದೆ. ರಾಜ್ಯ ಸರಕಾರ ಮನಸ್ಸು ಮಾಡಿದರೆ ಈ ಸಾಧ್ಯತೆ ಕಾರ್ಯರೂಪಕ್ಕೆ ಬರಬಹುದು.
ಸಹಕಾರ ಸಾರಿಗೆ ಬಸ್ಗಳ ಮಾರ್ಗಗಳಲ್ಲಿ ಸರಕಾರಿ ಬಸ್ಗಳು ಸಂಚರಿಸುತ್ತಿಲ್ಲ. ಅದನ್ನು ಕೆಎಸ್ಸಾರ್ಟಿಸಿ ಸುಪರ್ದಿಗೆ ವಹಿಸುವುದರಿಂದ ಸಾರಿಗೆ ಸೇವೆ ಉತ್ತಮಗೊಳ್ಳುವುದರ ಜತೆಗೆ ನಿಗಮಕ್ಕೂ ಲಾಭದಾಯಕವಾಗಲಿದೆ. ಈ ಹಿನ್ನೆಲೆಯಲ್ಲಿ ಸರಕಾರ ಚಿಂತನೆ ನಡೆಸುವ ಆವಶ್ಯಕತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸ್ಥಗಿತಗೊಳ್ಳುವ ಭೀತಿಯಲ್ಲಿ ಕೊಪ್ಪದ ಸಹಕಾರ ಸಾರಿಗೆ: ಸಿಎಂ ಆದೇಶಕ್ಕೂ ಬೆಲೆಯಿಲ್ಲ
ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ, ಸುತ್ತಲಿನ ಮಾರ್ಗಗಳಲ್ಲಿ ಸಹಕಾರ ಸಾರಿಗೆ ನೂರಾರು ಟ್ರಿಪ್ಗಳನ್ನು ನಡೆಸುತ್ತದೆ. ನಿತ್ಯ 6-7 ಲಕ್ಷ ರೂ. ಆದಾಯ ಬರುತ್ತದೆ. ವಿಲೀನ ಅಥವಾ ಸ್ವಾಧೀನದಿಂದ ಅದೆಲ್ಲವೂ ಕೆಎಸ್ಸಾರ್ಟಿಸಿಗೆ ವರ್ಗಾವಣೆ ಆಗುತ್ತದೆ. ಕೊಪ್ಪದಲ್ಲಿ ನಿಗಮಕ್ಕೆ 5 ಎಕರೆ ಜಾಗವಿದ್ದು, ಅದನ್ನೇ ಘಟಕವಾಗಿಸಬಹುದು ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರ್ಥಿಕ ಮುಗ್ಗಟ್ಟಿನಿಂದ ಸಹಕಾರ ಸಾರಿಗೆಯ ಬಸ್ಗಳೆಲ್ಲವೂ ಆರು ತಿಂಗಳಿನಿಂದ ಮೂಲೆ ಗುಂಪಾಗಿವೆ. ಅವುಗಳನ್ನು ದುರಸ್ತಿಪಡಿಸಿ, ಕೆಎಸ್ಸಾರ್ಟಿಸಿಯಿಂದ ಮರು ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಬಹುದು.ಇಲ್ಲವೇ ಹರಾಜು ಹಾಕಿ, ಅದೇ ಹಣದಲ್ಲಿ ಸಾಲ ಮತ್ತಿತರ ಹೊರೆಯನ್ನು ನೀಗಿಸಬಹುದು. ಅನಂತರ ಆ ಮಾರ್ಗಗಳಲ್ಲಿ ಸರಕಾರಿ ಬಸ್ಗಳನ್ನು ರಸ್ತೆಗಿಳಿಸಬಹುದಾಗಿದೆ.
ಸಹಕಾರ ಸಾರಿಗೆ ಕಾರ್ಮಿಕರ ಪ್ರತಿಭಟನೆಗೆ ವಿನಯ್ ಗುರೂಜಿ ಸಾಥ್
ಸಂಸ್ಥೆಯ ಸಿಬ್ಬಂದಿಗೆ ಮುಂದಿನ ದಿನಗಳಲ್ಲಿ ನೇಮಕಾತಿ ವೇಳೆ ಆದ್ಯತೆ ನೀಡಬೇಕು ಎಂಬ ಮಾತು ಕೇಳಿಬರುತ್ತಿದೆ. ವಿಲೀನಕ್ಕೆ ನಮ್ಮ ಅಭ್ಯಂತರವಿಲ್ಲ. ಇದು ಸಹಕಾರ ತತ್ವದಡಿ ನಡೆದ ಸಂಸ್ಥೆ ಯಾಗಿದ್ದು, ಸರಕಾರ ಸುಪರ್ದಿಗೆ ಪಡೆದರೆ ಸೇವಾ ಮನೋ ಭಾವದಿಂದ ಕಾರ್ಯ ನಿರ್ವಹಿಸುತ್ತದೆ ಎಂದು ಸಹಕಾರ ಸಾರಿಗೆ ನಿರ್ದೇಶಕ ಸಿ. ವಿಜಯಕುಮಾರ್ ಹೇಳಿದ್ದಾರೆ.