ಮೂಡಿಗೆರೆ; ಆನೆ ಬಂದಿವೆ ಎಚ್ಚರಿಕೆಯಿಂದಿರಿ, ಅರಣ್ಯ ಇಲಾಖೆ ಸೂಚನೆ
ಚಿಕ್ಕಮಗಳೂರು, ಅಕ್ಟೋಬರ್, 04: ಜಿಲ್ಲೆಯಲ್ಲಿ ಕಾಡಾನೆಗಳ ಕಾಟದಿಂದ ಈಗಾಗಲೇ ಜನರು ಬೇಸತ್ತು ಹೋಗಿದ್ದಾರೆ. ಮತ್ತೆ ಇದೀಗ ಆನೆಗಳು ಮೂಡಿಗೆರೆ ಪಟ್ಟಣದಲ್ಲಿ ದಾಂಗುಡಿ ಇಟ್ಟಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ತಾಲೂಕು ಕೇಂದ್ರದ ಮುಖ್ಯ ರಸ್ತೆಯಲ್ಲಿ ಅರಣ್ಯ ಅಧಿಕಾರಿಗಳ ಅನೌನ್ಸ್ ಮಾಡಿದ್ದಾರೆ.
ಮೂಡಿಗೆರೆ ಪಟ್ಟಣದ ರಾಜಬೀದಿಯಲ್ಲಿ ಆನೆಗಳ ಆರ್ಭಟ ಶುರು ಆಗಿದೆ. ಸರ್ಕಾರಿ ಆಸ್ಪತ್ರೆ, ತಾಲೂಕು ಪಂಚಾಯಿತಿ ಸಮೀಪವೇ ಬಂದಿರುವ ಆನೆಗಳು ಆರ್ಭಟ ಶುರು ಮಾಡಿದ್ದು, ಅಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಆನೆಗಳು ಎಲ್ಲಿ ದಾಳಿ ಮಾಡುತ್ತವೆಯೋ ಎನ್ನುವ ಭಯದಿಂದ ಮೂಡಿಗೆರೆ ಪಟ್ಣದ ಮೇಗಲಪೇಟೆಯಲ್ಲಿ ಇರುವ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗಿದೆ. ಕಾಡಿನಿಂದ ನಾಡಿಗೆ ಹಿಂಡು ಆನೆಗಳು ಬರುತ್ತಲೇ ಇದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಒಂದೂವರೆ ತಿಂಗಳಿನಲ್ಲಿ ಆನೆ ದಾಳಿಯಿಂದ ಇಬ್ಬರು ಬಲಿ ಆಗಿದ್ದಾರೆ.
ಕಡೂರು; ಸೋಮನಹಳ್ಳಿ ತಾಂಡದ ರಕ್ಷಿತಾ ಕುಟುಂಬಕ್ಕೆ ಇದುವರೆಗೂ 10 ಲಕ್ಷ ಪರಿಹಾರ
ಈ ಹಿಂದೆ ಆನೆ ದಾಳಿ, ಯುವಕ ಸಾವು
ಈ ಹಿಂದೆ ಆನೆ ದಾಳಿಗೆ ಇಬ್ಬರು ಬಲಿಯಾಗಿರುವ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಊರಬಗೆ ಗ್ರಾಮದಲ್ಲಿ ತೋಟದ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕ ಅರ್ಜುನ್ ಎಂಬುವರ ಮೇಲೆ ಆನೆ ದಾಳಿ ಮಾಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮೂಡಿಗೆರೆ ತಾಲೂಕಿನ ಊರಬಗೆ, ಗೌಡಹಳ್ಳಿ ಭಾಗದಲ್ಲಿ ಐದು ಕಾಡಾನೆಗಳು ಬೀಡುಬಿಟ್ಟಿದ್ದವು. ಈ ಬಗ್ಗೆ ಸ್ಥಳೀಯರು ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಇದು ಅರಣ್ಯ ಇಲಾಖೆ ಮಾಡಿದ ಕೊಲೆ ಎಂದು ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಆನೆ ದಾಳಿಯಿಂದ ಕಾರ್ಮಿಕ ಸಾವನ್ನಪ್ಪಿದ್ದನ್ನು ವಿರೋಧಿಸಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರವನ್ನು ನಡೆಸಿದ್ದರು. ತೋಟದ ಕೆಲಸ ಮುಗಿಸಿ ಬರುವಾಗ ಮೂಡಿಗೆರೆ ತಾಲೂಕಿನ ಊರಬಗೆ ಗ್ರಾಮದಲ್ಲಿ 45 ವರ್ಷದ ಅರ್ಜುನ್ ಮೇಲೆ ಆನೆ ದಾಳಿ ಮಾಡಿದ್ದು, ಆನೆ ದಾಳಿಯಿಂದ ಅರ್ಜುನ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅರಣ್ಯ ಇಲಾಖೆಯ ಗೇಟ್ ಮೇಲೆ ಹತ್ತಿ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರವನ್ನು ಮಾಡಿದ್ದರು. ಅರಣ್ಯ ಇಲಾಖೆಯವರಲ್ಲಿ ಆನೆ ಇದೆ ಎಂದಾಗ ಬಂದು ಪಟಾಕಿ ಹೊಡೆಯುವುದನ್ನ ಬಿಟ್ಟು ಬೇರೇನೂ ಮಾಡುವುದಿಲ್ಲ. ಅರಣ್ಯ ಇಲಾಖೆಗೆ ಆನೆಯನ್ನು ಸೆರೆ ಹಿಡಿಯುವಂತೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಲೇ ಇಬ್ಬರು ಆನೆ ದಾಳಿಗೆ ಬಲಿಯಾಗಿದ್ದಾರೆ. ಅರಣ್ಯ ಇಲಾಖೆಗೆ ಇನ್ನೆಷ್ಟು ಬಲಿ ಬೇಕು ಎಂದು ಸ್ಥಳಿಯರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು.