ಡಿಕೆ ಶಿವಕುಮಾರ್ ಭಯ ಪಡುವ ಅವಶ್ಯಕತೆಯಿಲ್ಲ: ಸಿಟಿ ರವಿ
ಚಿಕ್ಕಮಗಳೂರು, ಮೇ 11: "ಏನೂ ತಪ್ಪು ಮಾಡದಿದ್ದರೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭಯ ಪಡುವ ಅವಶ್ಯಕತೆಯಿಲ್ಲ. ಹಾಗಾಗಿ, ನಾವು ಅವರನ್ನು ಟಾರ್ಗೆಟ್ ಮಾಡುವ ಪ್ರಮೇಯವೇ ಉದ್ಭವವಾಗುವುದಿಲ್ಲ"ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಅಭಿಪ್ರಾಯ ಪಟ್ಟಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಖರಾಯಪಟ್ಟಣ ಮಹಾಶಕ್ತಿಕೇಂದ್ರದ ಪ್ರಮುಖರ ಜೊತೆ ಸಂವಾದದ ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, "ನಮಗೆ ಡಿ. ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡುವ ಅವಶ್ಯಕತೆಯಿಲ್ಲ. ಜನರೇ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವುದಕ್ಕೆ ಪಂಚ ರಾಜ್ಯಗಳ ಚುನಾವಣೆ ಸಾಕ್ಷಿಯಾಗಬಲ್ಲದು"ಎಂದು ಸಿ. ಟಿ. ರವಿ ಹೇಳಿದರು.
ಡಿಕೆಶಿ ಹೊಸ ತಂತ್ರಗಾರಿಕೆ: ರಾಜ್ಯದಿಂದ ಪ್ರಿಯಾಂಕಾ ಗಾಂಧಿ ಕಣಕ್ಕೆ?
"ಮೇ ಲಡಖೀ ಹೂಂ ಲಡ್ ಸಕ್ತಾಹೂಂ ಎಂದು ಪ್ರಿಯಾಂಕ ಗಾಂಧಿಯವರು ಉತ್ತರ ಪ್ರದೇಶದ ಚುನಾವಣಾ ಉಸ್ತುವಾರಿಯನ್ನು ನೋಡಿಕೊಂಡಿದ್ದರು. ಕೇವಲ ಎರಡು ಸ್ಥಾನವನ್ನು ಗೆದ್ದು, 380ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿಯನ್ನು ಕಳೆದುಕೊಂಡರು"ಎಂದು ಸಿ. ಟಿ. ರವಿ ಹೇಳಿದರು.
"ಪಂಜಾಬ್ನಲ್ಲೊಂದು ಕಾಂಗ್ರೆಸ್ ಸರಕಾರವಿತ್ತು, ಅಲ್ಲೂ ಆಮ್ ಆದ್ಮಿ ಪಕ್ಷಕ್ಕೆ ರೆಡ್ ಕಾರ್ಪೆಟ್ ಹಾಕಿಕೊಟ್ಟು ಸೋತು ಸುಣ್ಣವಾದರು. ಕಾಂಗ್ರೆಸ್ ನಿಧಾನವಾಗಿ ದೇಶದಲ್ಲಿ ಮೂಲೆಗುಂಪಾಗುತ್ತಿದೆ. ಹೀಗಾಗಿ, ಡಿ. ಕೆ. ಶಿವಕುಮಾರ್ ಅವರನ್ನು ನಾವ್ಯಾಕೆ ಟಾರ್ಗೆಟ್ ಮಾಡಲಿ"ಎಂದು ಸಿ. ಟಿ. ರವಿ ಸ್ಪಷ್ಟನೆಯನ್ನು ನೀಡಿದರು.
"ಯಾವುದೇ ತಪ್ಪು ಮಾಡದಿದ್ದರೆ ಡಿ. ಕೆ. ಶಿವಕುಮಾರ್ ಯಾಕೆ ಭಯ ಪಡಬೇಕು?. ತಪ್ಪು ಮಾಡಿದ್ದರೆ ತಾನೇ ಭೀತಿಯಿಂದ ಇರಬೇಕು. ನಾನೊಬ್ಬ ರಾಜಕಾರಣಿಯೆಂದು ತಪ್ಪು ಮಾಡಿದ್ದರೂ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ"ಎಂದು ಸಿ.ಟಿ.ರವಿ ಪ್ರಶ್ನಿಸಿದರು.
Recommended Video
"ನಾನು ಡಿ. ಕೆ. ಶಿವಕುಮಾರ್ ಅವರ ವೈಯಕ್ತಿಕ ಸಾಮರ್ಥ್ಯದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ರಾಜಕೀಯವಾಗಿ ಅವರು ಕನಕಪುರ ಬಿಟ್ಟರೆ ಮಿಕ್ಕ ಎಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿಸಿಲ್ಲ. ತಪ್ಪು ಮಾಡದೇ ಜೈಲಿಗೆ ಹೋಗುವವರಿಗೆ ಅದೊಂದು ಶಕ್ತಿಯಾಗುತ್ತದೆ. ತಪ್ಪು ಮಾಡಿದವರ ರಾಜಕೀಯ ಅಲ್ಲಿಗೆ ಅಂತ್ಯವಾಗುತ್ತದೆ" ಎಂದರು.