ವ್ಯಕ್ತಿಚಿತ್ರ: ಬದುಕಿನ ಸಂಚಾರ ಮುಗಿಸಿದ ವಿಜಯ್ ಬೆಳೆದು ಬಂದ ದಾರಿ
ಚಿಕ್ಕಮಗಳೂರು, ಜೂನ್ 15: ಮಲೆನಾಡಿನ ಅಪ್ಪಟ ಬಯಲು ಸೀಮೆಯ ಭಾಗವಾದ ಕಡೂರು ತಾಲೂಕಿನ ಪಂಚನಹಳ್ಳಿಯ ಹತ್ತನೇ ತರಗತಿ ಮುಗಿಸಿ ಬೆಂಗಳೂರಿಗೆ ಬಂದು ಮಲ್ನಾಡ್ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗ, ರಾಷ್ಟ್ರಮಟ್ಟದವರೆಗೆ ಸಂಚಾರ ಮಾಡಿ ತನ್ನ ಹೆಸರನ್ನು ಚಿತ್ರರಂಗದಲ್ಲಿ ಗುರುತಿಸಿಕೊಂಡು ರಾಷ್ಟ್ರಪ್ರಶಸ್ತಿ ಗಳಿಸಿದವರು ಸಂಚಾರಿ ವಿಜಯ್.
Recommended Video
ಸಂಚಾರಿ ವಿಜಯ್ ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ 1983ರಲ್ಲಿ ಬಸವರಾಜಪ್ಪ ಮತ್ತು ಗೌರಮ್ಮ ದಂಪತಿಗಳ ಎರಡನೇ ಮಗನಾಗಿ ಜನ್ಮತಾಳಿದರು. ಪ್ರಾಥಮಿಕ ಶಿಕ್ಷಣವನ್ನು ಹಟ್ಟೂರು ಪಂಚನಹಳ್ಳಿ ಸರ್ಕಾರಿ ಶಾಲೆಯಲ್ಲಿ ಪೂರೈಸಿದ ಅವರು, ಪ್ರೌಢ ಶಿಕ್ಷಣವನ್ನು ಪಂಚನಹಳ್ಳಿ ಸಮೀಪದ ಅಣೆಗೆರೆಯಲ್ಲಿ ಪೂರೈಸಿದರು.
ಬಾಲ್ಯದಿಂದಲೂ ಸಂಗೀತ ಮತ್ತು ರಂಗಭೂಮಿ ಮೇಲೆ ಆಸಕ್ತಿ
ನಂತರ, ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದ ಅವರು, ಬೆಂಗಳೂರಿನ ಆರ್ವಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಶಿಕ್ಷಣವನ್ನು ಪಡೆದುಕೊಂಡರು. ಬಾಲ್ಯದಿಂದಲೂ ಸಂಗೀತ ಮತ್ತು ರಂಗಭೂಮಿ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದ ಸಂಚಾರಿ ವಿಜಯ್, ರಂಗಭೂಮಿಯಲ್ಲಿ ಅತ್ಯುನ್ನತ ಸಾಧನೆ ಮಾಡಬೇಕೆಂಬ ಮಹಾದಾಸೆಯನ್ನು ಹೊಂದಿದ್ದರು.
ಸ್ವಗ್ರಾಮ ಪಂಚನಹಳ್ಳಿಯಲ್ಲಿ ಸಂಚಾರಿ ವಿಜಯ್ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ
ಬಸವರಾಜಪ್ಪ ಟೈಲರಿಂಗ್ ಹಾಗೂ ತಾಯಿ ಗೌರಮ್ಮ ಪಂಚೇನಹಳ್ಳಿ ಆರೋಗ್ಯ ಕೇಂದ್ರದಲ್ಲಿ ದಾದಿಯಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಬಾಲ್ಯದಿಂದಲೂ ಹುಟ್ಟೂರಿನೊಂದಿಗೆ ಒಡನಾಟ ಹೊಂದಿದ್ದ ಸಂಚಾರಿ ವಿಜಯ್, ಗ್ರಾಮಕ್ಕೆ ಆಗಾಗ ಭೇಟಿ ನೀಡುತ್ತಿದ್ದರು. ರಂಗಭೂಮಿಯಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದ ಅವರು ತಮ್ಮ ಇಂಜಿನಿಯರಿಂಗ್ ಪದವಿ ಪೂರ್ಣಗೊಂಡ ಬಳಿಕ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ವಿಜಯ್ ಬದುಕಿನ ಸಂಚಾರದ ಹಾದಿ
ತನ್ನ ಹದಿನೈದನೇ ವಯಸ್ಸಿನಲ್ಲೇ ತಂದೆ- ತಾಯಿಯರನ್ನು ಕಳೆದುಕೊಂಡ ವಿಜಯ್, ಅನಿವಾರ್ಯವಾಗಿ ಹೊಟೇಲ್ನಲ್ಲಿ ಕೆಲಸ ಮಾಡಿ, ನಂತರ ಒಂದು ಬೇಕರಿಗೆ ಕೆಲಸಕ್ಕೆ ಸೇರಿದ್ದ ಹುಡುಗನಿಗೆ, ಬೇಕರಿಗೆ ಬರುತ್ತಿದ್ದ ಕಾಲೇಜು ಹುಡುಗರು ಗಮನಿಸಿ ಆತನ ಮನದಲ್ಲಿ ಹತ್ತನೇ ತರಗತಿ ಮುಗಿದಿದೆ, ಮುಂದೇನು ಮಾಡಬಹುದು ಎಂಬ ಯೋಚನೆ ಗರಿಗೆದರಿತ್ತು. ಒಂದು ದಿನ ತುಂಬಾ ಕುತೂಹಲದಿಂದ ಅಲ್ಲಿಗೆ ಬಂದ ಕಾಲೇಜು ವಿದ್ಯಾರ್ಥಿಗಳ ಹತ್ತಿರ ನೀವೇನು ಓದುತ್ತಿದ್ದೀರಿ, ಎಂದು ಕೇಳಿದ್ದಕ್ಕೆ ಅವನಿಗೆ ಸಿಕ್ಕ ಉತ್ತರ ಎಂಜಿನಿಯರಿಂಗ್ ಎಂದು. ಅವನ ಗರಿಗೆದರಿದ ಮುಗ್ಧ ಮನಸ್ಸಿಗೆ ಎಂಜಿನಿಯರಿಂಗ್ ಪದ ಹಿತವೆನಿಸಿತ್ತು.
ಆರಿಸಿಕೊಂಡದ್ದು ಕಂಪ್ಯೂಟರ್ ಸೈನ್ಸ್
ಎಂಜಿನಿಯರಿಂಗ್ ವಿದ್ಯಾರ್ಥಿಗಳತ್ತ ಅವನ ಬೆರಗಿನ ನೋಟ, ಮನದಲ್ಲೊಂದು ಹಠ, ಓದಿ ಎಂಜಿನಿಯರ್ ಆಗುವಂತೆ ಪ್ರೇರೇಪಿಸಿ, ತನ್ನ ಊರಿಗೆ ಮರಳುವಂತೆ ಮಾಡಿತ್ತು. ತನ್ನ ಅಣ್ಣನ ಸಹಾಯ ಪಡೆದು ಪಿಯುಸಿ ಮುಗಿಸಿ ಉತ್ತಮ ಅಂಕಗಳೊಂದಿಗೆ ಕೌನ್ಸಿಲಿಂಗ್ನಲ್ಲಿ ಬಿಎಂಎಸ್ ಕಾಲೇಜಿನಲ್ಲಿ ಸೀಟ್ ತೆಗೆದುಕೊಂಡ ಆ ಹುಡುಗ ಆರಿಸಿಕೊಂಡದ್ದು ಕಂಪ್ಯೂಟರ್ ಸೈನ್ಸ್. ಹವಾಯಿ ಚಪ್ಪಲಿಯಲ್ಲೇ ಮೊದಲನೇ ದಿನ ಕಾಲೇಜಿಗೆ ಬಂದ ವಿಜಯ್, ಎಲ್ಲರೊಡಗೂಡಿ ಕಲಿಯಲು ಪ್ರಾರಂಭಿಸಿದ. ಆ ಹುಡುಗ ತನ್ನ ಇತಿಮಿತಿಯನ್ನು ಎಂದೂ ಮರೆಯದೇ ಎಂಜಿನಿಯರಿಂಗ್ ಮುಗಿಸಿ ಕೆಎಸ್ಇಟಿ ಕಾಲೇಜಿನಲ್ಲಿ ಉಪನ್ಯಾಸಕನಾಗುತ್ತಾನೆ. ಜೊತೆಗೆ ಚಿಕ್ಕಂದಿನಲ್ಲಿ ತಾಯಿಯ ಜನಪದ ಹಾಡುಗಾರಿಕೆ, ತಂದೆ ನುಡಿಸುತ್ತಿದ್ದ ವಿವಿಧ ವಾದ್ಯಗಳ ಮಧುರ ಸಂಗೀತ, ಅವರು ಬಿಡಿಸುತ್ತಿದ್ದ ಚಿತ್ರಗಳನ್ನು ನೋಡುತ್ತಿದ್ದ ಆ ಪುಟ್ಟ ಬಾಲಕನಿಗೆ ಬಳುವಳಿಯಾಗಿ ದೊರೆತಿರುತ್ತದೆ.
ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಸಾವಿಗೆ ರಾಜಕೀಯ ಗಣ್ಯರ ಸಂತಾಪ
ವಿಜಯ್ ನಟನೆಯ ಹಾದಿ
1983ರಲ್ಲಿ ಹುಟ್ಟಿದ ಅವರು ತಮ್ಮ ಕಾಲೇಜು ಸಮಯದಲ್ಲಿಯೇ ದರ್ಪಣ ಎಂಬ ರಂಗತಂಡದೊಂದಿಗೆ ಗುರುತಿಸಿಕೊಂಡಿದ್ದರು. ವಿಜಯ್ ಮುಂದೆ ಸಂಚಾರಿ ಥಿಯೇಟರ್ ರಂಗತಂಡಕ್ಕೆ ಸೇರ್ಪಡೆಗೊಮಡರು. ರಾಮನಾಥ್ ರಂಗಾಯಣ ಅವರ ನಿರ್ದೇಶನದ ಅರಹಂತ ಎಂಬ ನಾಟಕದಲ್ಲಿ ಕಾರವೇಲನ ಪಾತ್ರ ಮಾಡಿ ತನ್ನೊಳಗಿರುವ ಕಲಾವಿದನ ಪರಿಚಯ ಮಾಡಿಕೊಟ್ಟಿದ್ದರು. ಕಮಲಮಣಿ ಕಾಮಿಡಿ ಕಲ್ಯಾಣ ಎಂಬ ಹಾಸ್ಯಮಯ ನಾಟಕದಲ್ಲಿ ಒಬ್ಬ ಪಾತ್ರಧಾರಿಯ ಗೈರು ಹಾಜರಲ್ಲಿ ನಟಿಸಿ ಅಲ್ಲಿಯೂ ಸೈ ಎನಿಸಿಕೊಂಡ ವಿಜಯ್, ಮುಂದಿನ ದಿನಗಳಲ್ಲಿ ತಮಗೆ ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುವ ಬರವಸೆ ಮೂಡಿಸಿದ್ದರು.
"ರಂಗಪ್ಪ ಹೋಗ್ಬಿಟ್ನ' ಚಿತ್ರದಲ್ಲಿ ಪ್ಲೇಬಾಯ್ ಪಾತ್ರ
ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ವಿಜಯ್ಗೆ ಸಿನಿಮಾ ರಂಗ ಹೊಸದಾಗಿಯೇ ಕಾಣುತ್ತಿತ್ತು. ಪ್ರಸನ್ನ ಎಂಬುವವರ ಮೂಲಕ ಮೊದಲ ಬಾರಿಗೆ "ರಂಗಪ್ಪ ಹೋಗ್ಬಿಟ್ನ' ಚಿತ್ರದಲ್ಲಿ ಪ್ಲೇಬಾಯ್ ಪಾತ್ರ ದಕ್ಕಿತು. ಚಿತ್ರ ಯಶಸ್ಸು ಕಾಣಲಿಲ್ಲ ಹಾಗಾಗಿ ಜನ ಗುರುತಿಸಲಿಲ್ಲ. ನಂತರ ರಂಗಾಯಣ ರಘು ಅವರ ಮೂಲಕ "ರಾಮ ರಾಮ ರಘುರಾಮ' ಚಿತ್ರದಲ್ಲಿ ನಿತ್ಯಾನಂದನ ಪಾತ್ರ ಮಾಡಿ ಮಿಂಚಿದರು. ಆದರೂ ಚಿತ್ರ ಸದ್ದು ಮಾಡಲಿಲ್ಲ. ರಾಮ ರಾಮ ರಘುರಾಮ ಚಿತ್ರದಲ್ಲಿ ವಿಜಯ್ ಪಾತ್ರ ನೋಡಿ ಮೆಚ್ಚಿಕೊಂಡಿದ್ದ ಎಂ.ಎಸ್. ರಮೇಶ್ ತಮ್ಮ ವಿಲನ್ ಚಿತ್ರದಲ್ಲಿ ನಾಯಕಿಯ ತಮ್ಮನ ಪಾತ್ರ ನೀಡಿದ್ದರು. ನಂತರ "ದಾಸ್ವಾಳ' ಚಿತ್ರದಲ್ಲಿ ಮಾನಸಿಕ ಅಸ್ವಸ್ಥ ಮತ್ತು ಅಂಗವಿಕಲನ ಪಾತ್ರಕ್ಕೆ ಅಪೂರ್ವ ಎನಿಸುವಂತಹ ಪಾತ್ರವನ್ನು ಪೋಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವುದರ ಜೊತೆಗೆ ಪಾತ್ರಕ್ಕೂ ಜೀವ ತುಂಬಿದರು. ಪ್ರಕಾಶ್ ರೈ ನಿರ್ದೇಶನದ ಒಗ್ಗರಣೆ ಚಿತ್ರದಲ್ಲಿ ಬ್ಯೂಟಿ ಸಲೂನ್ ಅಟೆಂಡರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ನಂತರ ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ.
"ನಾನು ಅವನಲ್ಲ ಅವಳು' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ
ಧಾರಾವಾಹಿಗಳಲ್ಲಿ, ನಾಟಕಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದ ವಿಜಯ್ ಸಂಚಾರಿ ಥಿಯೇಟರ್ ಕಲಾವಿದಾರಾಗುವುದರ ಜೊತೆಗೆ ತಮ್ಮ ಕಾಲೇಜು ಉಪನ್ಯಾಸಕ ವೃತ್ತಿಯಿಂದ ಹೊರಬಂದು ಪಿನೋಕಿಯೋ, ಮಿಸ್ಅಂಡರ್ಸ್ಟಾಂಡಿಂಗ್ ನಾಟಕಗಳನ್ನೂ ನಿರ್ದೇಶಿಸುವುದರ ಜೊತೆಗೆ ಸಂಚಾರಿ ವಿಜಯ್ ಆಗಿಬಿಟ್ಟರು.
ನಂತರದ ದಿನಗಳಲ್ಲಿ ವಿಜಯ್ "ಹರಿವು' ಚಿತ್ರದಲ್ಲಿ ಮುಖ್ಯಪಾತ್ರ ನಿರ್ವಹಿಸಿದರು. ಈ ಚಿತ್ರ 62ನೇ ಸಾಲಿನ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಅತ್ಯುತ್ತಮ ಚಿತ್ರ ಎಂದು ಗುರುತಿಸಿಕೊಂಡರೆ, ರವಿ ಆರ್ ಗರಣಿಯವರ ನಿರ್ಮಾಣದಲ್ಲಿ ಬಿ.ಎಸ್.ಲಿಂಗದೇವರು ಅವರ ನಿರ್ದೇಶನದ "ನಾನು ಅವನಲ್ಲ ಅವಳು' ಚಿತ್ರದಲ್ಲಿ ಮಂಗಳಮುಖಿಯ ಪಾತ್ರ ನಿರ್ವಹಿಸಿ ತಮ್ಮ ಅಮೋಘ ಅಭಿನಯ ಪ್ರದರ್ಶಿಸಿ 62ನೇ ರಾಷ್ಟ್ರೀಯ ಪ್ರಶಸ್ತಿಯನ್ನು (ಅತ್ಯುತ್ತಮ ನಟ) ಪಡೆದು ಕರ್ನಾಟಕಕ್ಕೆ ಕೀರ್ತಿ ತಂದಿದ್ದರು. ಲಕ್ಷಾಂತರ ರೂಪಾಯಿಗಳ ಕೆಲಸ ಸಿಗುವ ಅವಕಾಶವಿದ್ದರೂ ಅದರೆಡೆಗೆ ಕಿರು ನೋಟವನ್ನು ಹರಿಸದೇ, ಕಲೆಯ ಮೇಲಷ್ಟೇ ಕೇಂದ್ರೀಕರಿಸುವ ಅವರ ಆಸಕ್ತಿಯ ಉತ್ಸಾಹಕ್ಕೆ ಈಗ ಬ್ರೇಕ್ ಬಿದ್ದಿದೆ. ಹಲವು ಕನಸುಗಳನ್ನೊತ್ತು ನಟನೆಯ ಜೊತೆಗೆ ಸಮಾಜಿಕ ಸೇವೆ ಮಾಡುತ್ತಿದ್ದ ಹುಡುಗ ಈಗ ಮರೆಯಾಗಿದ್ದು, ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಹುಟ್ಟೂರಲ್ಲಿ ನೀರವ ಮೌನ
ವಿಜಯ್ಗೆ ಅಪಘಾತವಾಗಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಗ್ರಾಮದಲ್ಲಿ ಜನರು ವಿಜಯ್ ಬಾಲ್ಯದ ನೆನಪುಗಳನ್ನು ನೆನೆದು ಕಂಬನಿ ಮಿಡಿಯುತ್ತಿದ್ದಾರೆ. ಎಲ್ಲರ ಜೊತೆ ಪ್ರೀತಿ ವಿಶ್ವಾಸದಿಂದ ಬೆರೆಯುತ್ತಿದ್ದ ಸ್ನೇಹಿತ ಇನ್ನಿಲ್ಲ ಎಂದು ತಿಳಿದ ಸ್ನೇಹಿತರಿಗೆ ಬರಸಿಡಿಲು ಬಡಿದಂತಾಗಿದೆ. ತಾನು ಚಿತ್ರರಂಗದಲ್ಲಿದ್ದು, ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿಕೊಂಡರೂ ಹಮ್ಮಿಲ್ಲದೇ ಎಲ್ಲರೊಡನೆ ಬೆರೆಯುತ್ತಿದ್ದ ಹುಡುಗನನ್ನು ನೆನೆದು ಗ್ರಾಮಸ್ಥರು ಕಣ್ಣೀರಾಗಿದ್ದಾರೆ.