"ಎರಡೂ ಕ್ಷೇತ್ರಗಳಲ್ಲಿ ಬಹು ಮತಗಳ ಅಂತರದಿಂದ ಗೆಲ್ಲೋದು ಖಚಿತ"
ಚಿಕ್ಕಮಗಳೂರು, ಅಕ್ಟೋಬರ್ 29: ಆರ್.ಆರ್.ನಗರ ಹಾಗೂ ಶಿರಾ ಎರಡೂ ಕ್ಷೇತ್ರಗಳಲ್ಲೂ ಜನ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಆಕ್ರೋಶಗೊಂಡಿದ್ದಾರೆ. ನಾವು ಆರ್.ಆರ್.ನಗರದಲ್ಲಿ 50 ಸಾವಿರಕ್ಕೂ ಅಧಿಕ ಮತ ಹಾಗೂ ಶಿರಾದಲ್ಲಿ 15-20 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಎರಡೂ ಕ್ಷೇತ್ರದಲ್ಲಿ ನಮಗೆ ಕಾಂಗ್ರೆಸ್ ಪ್ರಬಲ ಸ್ಪರ್ಧಿಯಾಗಿದ್ದು, ಜೆಡಿಎಸ್ ಮೂರನೇ ಸ್ಥಾನದಲ್ಲಿದೆ ಎಂದಿದ್ದಾರೆ. ಶಿರಾದಲ್ಲಿ ಹತ್ತಾರು ವರ್ಷಗಳಿಂದ ಕಾಂಗ್ರೆಸ್-ಜೆಡಿಎಸ್ ಗೆಲ್ಲಿಸಿದ್ದೇವೆ. ಆದರೆ ಕ್ಷೇತ್ರಕ್ಕೆ ಯಾವುದೇ ಕೊಡುಗೆ ಸಿಕ್ಕಿಲ್ಲ. ಜಯಚಂದ್ರ 2 ಬಾರಿ ಗೆದ್ದರೂ ಕ್ಷೇತ್ರಕ್ಕೆ ಏನೂ ಮಾಡಿಲ್ಲ, ಆಶ್ವಾಸನೆಗಳನ್ನೂ ಈಡೇರಿಸಿಲ್ಲ. ಕುಮಾರಸ್ವಾಮಿ ಸರ್ಕಾರವಿದ್ದಾಗಲೂ ಕ್ಷೇತ್ರಕ್ಕೆ ಏನೂ ಕೊಡುಗೆ ಕೊಟ್ಟಿಲ್ಲ ಎಂದು ಜನ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿಸಿದರು.
ಸಿಎಂ ಯಡಿಯೂರಪ್ಪ ಬದಲಾವಣೆ: ಸಿದ್ದರಾಮಯ್ಯ ಆರೋಪಕ್ಕೆ ಕಟೀಲ್ ಪ್ರತಿಕ್ರಿಯೆ!
ಮುಖ್ಯಮಂತ್ರಿ ಯಡಿಯೂರಪ್ಪ ಸಮಸ್ಯೆಗಳಿಗೆ ಉತ್ತರಿಸಿದ್ದಾರೆ. ನೀರಾವರಿ ಯೋಜನೆಗಳ ಬಗ್ಗೆ ಹಾಗೂ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಮಾಡಿರುವುದರಿಂದ ಜನರಿಗೆ ಬಿಜೆಪಿ ಮೇಲೆ ವಿಶ್ವಾಸ ಬಂದಿದೆ. ಹಾಗಾಗಿ, ಚುನಾವಣೆಗೂ ಮೊದಲೇ ನಾವು ಮೊದಲ ಸ್ಥಾನದಲ್ಲಿದ್ದೇವೆ ಎಂದರು.
ಇದೇ ವೇಳೆ, ಒಳಒಪ್ಪಂದದ ಕುರಿತು ಮಾತನಾಡಿದ ಅವರು, ನಮಗೆ 117 ಸ್ಥಾನವಿದೆ, ನಮಗೆ ಒಳಒಪ್ಪಂದ ಅವಶ್ಯಕತೆ ಇಲ್ಲ. ನಾವು ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಿ ಪಕ್ಷ ಗಟ್ಟಿ ಮಾಡಬೇಕು. ಆದರೆ, ಒಳಒಪ್ಪಂದ ಮಾಡಿಕೊಂಡಿರೆ ಪಕ್ಷ ಗಟ್ಟಿ ಆಗಲ್ಲ. ವೀಕ್ ಆಗುತ್ತೆ. ರಾಷ್ಟ್ರೀಯ ಪಕ್ಷಕ್ಕೆ ಒಳಒಪ್ಪಂದ ಏಕೆ ಎಂದರು. ನಿನ್ನೆ ನಮ್ಮ ಕಾರ್ಯಕರ್ತನ ಅಂಗಡಿ ಒಳಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಹೇಳಿದ್ದೇವೆ. ಮುಂದಿನ ದಿನಗಳಲ್ಲಿ ಯಾವ ಸಂಘಟನೆಯ ಕೈವಾಡವಿದೆ ಎಲ್ಲಾ ತನಿಖೆ ಬಳಿಕ ಗೊತ್ತಾಗಲಿದೆ ಎಂದರು.
ನಾನು ಯಾವ ಸಂಸ್ಥೆಗಳ ಮೇಲೂ ಹೇಳೋದಿಲ್ಲ, ಅದು ವೈಯಕ್ತಿಕ ವಿಚಾರದ ಹಲ್ಲೆ ಅಲ್ಲ. ಇದು ಮತೀಯ ಗಲಭೆ ಸೃಷ್ಟಿಸಲು ಮಾಡಿರುವ ಕೃತ್ಯ ಎಂದಿದ್ದಾರೆ.