ಚಿಕ್ಕಮಗಳೂರು: ತುಂಗೆಯ ರಭಸಕ್ಕೆ ಶೃಂಗೇರಿ ಪಟ್ಟಣ ಜಲಾವೃತ
ಚಿಕ್ಕಮಗಳೂರು, ಆಗಸ್ಟ್ 07: ಮಲೆನಾಡು ಪ್ರದೇಶದಲ್ಲಿ ಮುಂಗಾರುಮಳೆ ತನ್ನ ರುದ್ರ ನರ್ತನ ಮುಂದುವರೆಸಿದ್ದು, ತುಂಗಾನದಿ ಮೈದುಂಬಿ ಹರಿಯುತ್ತಿದೆ. ಶೃಂಗೇರಿ ಪಟ್ಟಣದಲ್ಲಿ ತುಂಗೆಯ ರಭಸಕ್ಕೆ ಹಲವು ಪ್ರದೇಶಗಳು ಮುಳುಗಡೆಯಾಗಿವೆ.
Recommended Video
ಶೃಂಗೇರಿ ಶಾರದಾ ಬೀದಿಯ ಅಕ್ಕಪಕ್ಕದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಕುರುಬರ ಕೇರಿ ಬಳಿಯೂ ನೀರು ನುಗ್ಗಿದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಚಿಕ್ಕಮಗಳೂರು: ಮಲೆನಾಡಿನಲ್ಲಿ ಮುಂದುವರಿದ ಮಳೆ ಅಬ್ಬರ
ಶೃಂಗೇರಿ, ಕೆರೆಕಟ್ಟೆ, ಕಿಗ್ಗಾ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದರಿಂದ ತುಂಗಾ ನದಿ ಉಕ್ಕಿ ಹರಿಯುತ್ತಿದೆ. ರಸ್ತೆಯಲ್ಲಿದ್ದ ಕಾರು ಮುಳುಗಡೆಯಾಗಿದೆ. ಶೃಂಗೇರಿ ದೇವಾಲಯದ ಪಾರ್ಕಿಂಗ್ ಸ್ಥಳದಲ್ಲಿ ಈ ಘಟನೆ ನಡೆದಿದ್ದು, ತುಂಗಾನದಿ ಪಕ್ಕದಲ್ಲಿರುವ ಮನೆಗಳಿಗೂ ಮಳೆ ನೀರು ನುಗ್ಗಿದೆ.
ಮೂಡಿಗೆರೆ ತಾಲೂಕಿನ ಕಳಸ ಸಮೀಪದಲ್ಲಿನ ಚಿಕ್ಕನ ಕುಡಿಗೆ ಹಾಗೂ ಬಲಿಗೆ ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಮೂರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸ್ಥಳಕ್ಕೆ ಹೊರನಾಡು ಪಿಡಿಒ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಕಳಸ-ಚಿಕ್ಕನಕುಡಿಗೆ ಹಾಗೂ ಬಲಿಗೆ-ಮೆಣಸಿನ ಹಾಡ್ಯ ಗ್ರಾಮದ ಸಂಪರ್ಕ ತಾತ್ಕಾಲಿಕ ಕಡಿತಗೊಳಿಸಲಾಗಿದೆ. ಬಲಿಗೆ-ಮೇಣಸಿನ ಹಾಡ್ಯ ಮೂಲಕ ಶೃಂಗೇರಿ ಸಂಪರ್ಕ ಹೊಂದಿದ ರಸ್ತೆ ಇದಾಗಿದ್ದು, ಹೆಬ್ಬಾಳೆ ಸೇತುವೆ ಪದೆ ಪದೇ ಮುಳುಗಡೆಯಾಗುತ್ತಿರುವುದರಿಂದ ಜೆಸಿಬಿ ಹೋಗಲು ವಿಳಂಬವಾಗುತ್ತಿದೆ.
ತುಂಗಾನದಿ ನದಿ ನೀರಿನ ಹರಿವು ಹೆಚ್ಚಳವಾದ ಹಿನ್ನೆಲೆ ಶೃಂಗೇರಿ ಗುರು ನಿವಾಸಕ್ಕೆ ತೆರಳುವ ರಸ್ತೆ ಜಲಾವೃತವಾಗಿದೆ. ಭೋಜನ ಶಾಲೆಗೂ ನೀರು ನುಗ್ಗಿದ್ದು, ಅಪಾಯದ ಮಟ್ಟದಲ್ಲಿ ತುಂಗಾನದಿ ಹರಿಯುತ್ತಿದೆ.