ವೈರಲ್ ಆಯಿತು ವಿಡಿಯೋ; ದತ್ತಪೀಠ ಆವರಣದಲ್ಲೇ ನಮಾಜ್?
ಚಿಕ್ಕಮಗಳೂರು, ಮೇ22: ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ಕಾಫಿನಾಡು ದತ್ತಪೀಠದಲ್ಲಿ ಒಂದಾದ ಮೇಲೊಂದು ವಿಡಿಯೋ ಹೊರಬರತ್ತಿದ್ದು ವಿವಾದವೂ ದೊಡ್ಡದ್ದಾಗುತ್ತಿವೆ. ಹೋಮ ಮಂಟಪದಲ್ಲಿ ಮಾಂಸದೂಟ, ಗುಹೆಯಲ್ಲಿ ಗೋರಿ ಪೂಜೆ ಬಳಿಕ ಪೀಠದ ಆವರಣದಲ್ಲಿ ನಮಾಜ್ ಮಾಡುವ ವಿಡಿಯೋ ವೈರಲ್ ಆಗಿದ್ದು ಹಿಂದೂ ಸಂಘಟನೆಗಳ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಮೀಪದಲ್ಲಿರುವ ಕಟ್ಟಡ ಮುಂಭಾಗದಲ್ಲಿ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಇದು ಚರ್ಚೆಗೆ ಗ್ರಾಸವಾಗಿದೆ. ಕೆಲವು ದಿನಗಳ ಹಿಂದೆ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಮೀಪ ಮಾಂಸಹಾರ ಬೇಯಿಸಲಾಗುತ್ತಿದೆ, ಪವಿತ್ರ ಕ್ಷೇತ್ರವನ್ನು ಅಪವಿತ್ರಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ಈಗ ನಮಾಜ್ ವಿಡಿಯೋ ಬಿಡುಗಡೆಯಾಗಿದೆ.
ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋ ತುಂಬಾ ಹಿಂದಿನದ್ದು ಎಂದು ಕೆಲವರು ವಾದಿಸಿದರೇ, ಕೆಲವರು ಇತ್ತೀಚಿನ ವಿಡಿಯೋ ಎಂದು ಹೇಳುತ್ತಿದ್ದಾರೆ. ವಿವಾದಿತ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿರುವುದು ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ. ಎನ್. ರಮೇಶ್ ಕಂದಾಯ ಮತ್ತು ಮುಜರಾಯಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಮುಜರಾಯಿ ಇಲಾಖೆ ಅಧಿಕಾರಿಗಳು ಅಗತ್ಯ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ಒದಗಿಸಿದರು. ಪ್ರಕರಣದ ಸಂಬಂಧ ವರದಿ ಸಲ್ಲಿಸುವಂತೆ ತಹಶೀಲ್ದಾರ್ಗೆ ಸಹ ಸೂಚನೆ ನೀಡಲಾಗಿದೆ.
ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಮೀಪದಲ್ಲಿರುವ ಕಟ್ಟಡ ಮುಂಭಾಗ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋ ಹೊಸದೋ ಅಥವಾ ಹಳೇಯದೋ? ಎಂಬ ಚರ್ಚೆ ನಡೆಯುತ್ತಿದೆ. ಕೆಲವರು ಈ ವಿಡಿಯೋ ಹಳೆಯದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದು ವಾದಿಸುತ್ತಿದ್ದಾರೆ. ಕೆಲವರು ಇದು ಹೊಸ ವಿಡಿಯೋ ಎಂದು ವಾದಿಸುತ್ತಿದ್ದಾರೆ.
ನಮಾಜ್ ಮಾಡುತ್ತಿರುವ ವಿಡಿಯೋ
"ವಿವಾದಿತ ಸ್ಥಳದಲ್ಲಿ ಈಗ ಪ್ರಾರ್ಥನೆ ಸಲ್ಲಿಸಿಲ್ಲ. ಹಳೇ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಬಗ್ಗೆ ಅನುಮಾನವಿದೆ. ಈ ಸಂಬಂಧ ವರದಿ ಸಲ್ಲಿಸುವಂತೆ ತಹಶೀಲ್ದಾರ್ಗೆ ಸೂಚಿಸಲಾಗಿದೆ. ವಿವಾದಿತ ಸ್ಥಳದಲ್ಲಿ ಯಾರೇ ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಎಂದು ಜಿಲ್ಲಾಧಿಕಾರಿ ಕೆ. ಎನ್. ರಮೇಶ್ ಎಚ್ಚರಿಸಿದರು.
"ಇನಾಂ ದತ್ತಾತ್ರೇಯ ಬಾಬಾಬುಡನ್ ದರ್ಗಾಕ್ಕೆ ಸಂಬಂಧಿಸಿದಂತೆ 2008ರಲ್ಲಿ ಯಥಾಸ್ಥಿತಿಗೆ ಆದೇಶಿಸಲಾಗಿದೆ. 1989ರ ಫೆಬ್ರವರಿ 25ರಂದು ಮುಜರಾಯಿ ಆಯುಕ್ತರು ದರ್ಗಾ ವಿಷಯ ಕುರಿತಂತೆ ಆದೇಶವನ್ನು ಹೊರಡಿಸಿದ್ದಾರೆ. ಗುಹೆಯೊಳಗೆ ಯಾರು ಪೂಜೆ ಸಲ್ಲಿಸಬೇಕು. ಹೇಗೆ, ಯಾವ ಪದ್ಧತಿಯಲ್ಲಿ, ಆಡಳಿತ ಮಂಡಳಿ ಹೇಗೆ ಕಾರ್ಯನಿರ್ವಹಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಗುಹೆ ಹೊರ ಭಾಗದಲ್ಲಿ 38 ಕೊಠಡಿಗಳಿವೆ. ಶಾಖಾದ್ರಿಯ ಸಂಬಂಧಿಕರಿಗೆ 3 ವಸತಿಗೃಹ ಇದೆ. ಉಳಿದ 32ಕೊಠಡಿಗಳಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಅವಕಾಶ ನೀಡಲಾಗುವುದು. ಅದರಲ್ಲಿ ಒಂದು ಕೊಠಡಿಯನ್ನು ಪ್ರಾರ್ಥನೆ ಸಲ್ಲಿಸಲು ಬಳಸಿಕೊಳ್ಳಲಾಗುತ್ತಿದೆ" ಎಂದು ಹೇಳಿದರು.
ವರದಿ ಸಲ್ಲಿಸುವಂತೆ ತಹಶೀಲ್ದಾರ್ಗೆ ಸೂಚನೆ
"ಪ್ರಾರ್ಥನೆ ಸಲ್ಲಿಸಿರುವ ಜಾಗ, ವಿವಾದಿತ ಪ್ರದೇಶದ ಹೊರಗಿದೆ ಎಂದು ಸ್ಪಷ್ಟಪಡಿಸಿದ ಜಿಲ್ಲಾಧಿಕಾರಿಗಳು ಯಾವುದೇ ಕಾರಣಕ್ಕೂ ನ್ಯಾಯಾಲಯದ ಆದೇಶ ಉಲ್ಲಂಘನೆಗೆ ಅವಕಾಶ ಮಾಡಿಕೊಡುವುದಿಲ್ಲ. ಆದೇಶ ಉಲ್ಲಂಘಟನೆಯಾದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ವಿಡಿಯೋ ಹಳೆಯದು ಎಂಬ ಅನುಮಾನವಿದೆ. ಕೊಠಡಿಗೆ ಈ ಹಿಂದೆ ಬಳಿದಿರುವ ಬಣ್ಣವೇ ಬೇರೆ, ಇತ್ತೀಚೆಗೆ ಬಳಿದಿರುವ ಬಣ್ಣವೇ ಬೇರೆಯದಾಗಿದೆ. ಯಾವ ವ್ಯಕ್ತಿ ವಿಡಿಯೋವನ್ನು ಹಾಕುತ್ತಿದ್ದಾರೆಂಬುದನ್ನು ಕಂಡುಹಿಡಿಯಲು ತನಿಖೆ ನಡೆಸುವ ಕುರಿತು ಚಿಂತನೆ ನಡೆಸಲಾಗುವುದು. ಪ್ರಾರ್ಥನೆ ಸಲ್ಲಿಸಿರುವ ಜಾಗ ವಿವಾದಿತ ಸ್ಥಳದಲ್ಲಿಲ್ಲ. ನ್ಯಾಯಾಲಯ ಆದೇಶ ಉಲ್ಲಂಘನೆಯಾಗಿಲ್ಲ, ಉಲ್ಲಂಘನೆಯಾಗಲು ಬಿಡುವುದಿಲ್ಲ. ವಿಡಿಯೋ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಒಂದು ವಾರದೊಳಗೆ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ನಡೆದಿರುವ ಬೆಳವಣಿಗೆ ಕುರಿತು ವರದಿ ಸಲ್ಲಿಸುವಂತೆ ತಹಶೀಲ್ದಾರ್ಗೆ ಸೂಚಿಸಲಾಗಿದೆ" ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾಡಳಿತ ವಿರುದ್ಧ ಆಕ್ರೋಶ
ನಮಾಜ್ ಮಾಡುವ ವಿಡಿಯೋ ವೈರಲ್ ಆಗಿರುವುದನ್ನು ಮುಸ್ಲಿಂಮರು ಸಮರ್ಥಿಕೊಳ್ಳುತ್ತಿದ್ದಾರೆ. 1975ರ ಹಿಂದಿನ ಆಚರಣೆಯ ಜಾರಿಯಲ್ಲಿರಬೇಕು. ಹೊಸ ಆಚರಣೆಗೆ ಅವಕಾಶ ಇಲ್ಲ ಎಂದು ಸುಪ್ರೀಂಕೋರ್ಟ್ ಆದೇಶವಿದೆ. ಹಾಗಾದರೆ ನೀವು ಹೇಗೆ ದತ್ತಜಯಂತಿ, ದತ್ತಮಾಲೆ, ಅನುಸೂಯ ಜಯಂತಿ, ಹುಣ್ಣಿಮೆ ಪೂಜೆ ಮಾಡುತ್ತೀರಾ? ಎಂದು ಮುಸ್ಲಿಮರು ಪ್ರಶ್ನಿಸಿದ್ದಾರೆ. ಸುಪ್ರಿಂಕೋರ್ಟ್ ಆಹಾರದ ಪದ್ಧತಿ ಮೇಲಾಗಲಿ, ನಮಾಜ್ ಮೇಲಾಗಲಿ ನಿರ್ಬಂಧ ಹೇರಿಲ್ಲ. ಈ ವಿವಾದಕ್ಕೆ ಜಿಲ್ಲಾಡಳಿತವೇ ನೇರ ಕಾರಣ. ಹೊರಗಿನ ಭಕ್ತರು ಬರುತ್ತಾರೆ. ನ್ಯಾಯಾಲಯದ ಆದೇಶವನ್ನು ದತ್ತಪೀಠದಲ್ಲಿ ಬೋರ್ಡ್ ಹಾಕಿಸಬೇಕೆಂದು ಸರ್ಕಾರ, ಜಿಲ್ಲಾಡಳಿತ ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದೂ ಕಾರ್ಯಕರ್ತರ ಆಕ್ರೋಶ
ಕಳೆದ ಎರಡು ಮೂರು ವರ್ಷಗಳ ಹಿಂದೆ ಬೇಲಿ ಹಾರಿ ನಿಷೇಧಿತ ಪ್ರದೇಶಕ್ಕೆ ಹೋಗಿದ್ದಾರೆಂದು ಹಿಂದೂ ಕಾರ್ಯಕರ್ತರ ಮೇಲೆ ಏಕೆ ಪ್ರಕರಣ ದಾಖಲು ಮಾಡಿದಿರಿ ಎಂದು ಹಿಂದೂ ಸಂಘಟನೆಗಳು ಜಿಲ್ಲಾಡಳಿತಕ್ಕೆ ಪ್ರಶ್ನಿಸಿವೆ. ಮುಜರಾಯಿ ಇಲಾಖೆ ಬೀಗ ಯಾರ ಬಳಿ ಇರುತ್ತದೆ?. ಮುಜರಾಯಿ ಇಲಾಖೆ ಅಧಿಕಾರಿಗಳ ಸಹಾಯವಿಲ್ಲದೆ ಅಲ್ಲಿ ನಮಾಜ್ ಮಾಡಲು ಹೇಗೆ ಸಾಧ್ಯ?. ಇದನ್ನೆಲ್ಲಾ ಸಹಿಸಿಕೊಂಡು ಸಾಕಾಗಿದೆ. ಮುಂದಿನ ದತ್ತಜಯಂತಿಯಲ್ಲಿ 2004ರ ಹಿಂದಿನ ತುಳಸಿಕಟ್ಟೆ ಇದ್ದ ಜಾಗದಲ್ಲೇ ಹೋಮ ಮಾಡುತ್ತೇವೆ ಎಂದು ಜಿಲ್ಲಾಡಳಿತಕ್ಕೆ ಸವಾಲು ಹಾಕಿವೆ.