ಕಂಬಕ್ಕೆ ಕಟ್ಟಿಕೊಂಡು ಹೆಣ ಸಾಗಿಸಿದ ಗ್ರಾಮಸ್ಥರು; ಕಾಫಿನಾಡಲ್ಲೊಂದು ಹೃದಯವಿದ್ರಾವಕ ಘಟನೆ
ಚಿಕ್ಕಮಗಳೂರು, ಜೂನ್ 03: ಇಂಥ ಹೈ ಟೆಕ್ ಕಾಲದಲ್ಲೂ ನಾಗರಿಕ ಸೌಲಭ್ಯಗಳಿಂದ ಸಂಪೂರ್ಣ ವಂಚಿತರಾಗಿ ಕಷ್ಟದಲ್ಲೇ ದಿನದೂಡುತ್ತಿರುವ ಎಷ್ಟೋ ಕುಗ್ರಾಮಗಳಿವೆ. ಜೀವನಕ್ಕೆ ಅತ್ಯಗತ್ಯವಾದ ಸೌಲಭ್ಯಗಳು ಸಿಗದೇ ಹೊಂದಾಣಿಕೆಯನ್ನೇ ಜೀವನ ಮಾಡಿಕೊಂಡ ಎಷ್ಟೋ ಜನರು ನಮ್ಮ ರಾಜ್ಯದ ಗ್ರಾಮಗಳಲ್ಲಿ ಇದ್ದಾರೆ.
ಇದಕ್ಕೆ ಕಾಫಿನಾಡು ಕೂಡ ಹೊರತಲ್ಲ. ಇದಕ್ಕೆ ಈ ಒಂದು ಘಟನೆಯೇ ಉದಾಹರಣೆ. ಶವವನ್ನು ಸಾಗಿಸಲು ಸೂಕ್ತ ರಸ್ತೆ ವ್ಯವಸ್ಥೆಯಿಲ್ಲದೇ ಗ್ರಾಮಸ್ಥರು ಮೃತದೇಹವನ್ನು ಕಾಡು ಮನುಷ್ಯರಂತೆ ಕಂಬವೊಂದಕ್ಕೆ ಕಟ್ಟಿಕೊಂಡು, ಅದನ್ನು ಹೊತ್ತುಕೊಂಡು ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಂಗಳವಾರ ಸಂಜೆ ಇಲ್ಲಿ ವರದಿಯಾಗಿದೆ. ಈ ಸಂಗತಿ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಿದೆ.
ಮನುಕುಂಬ್ರಿ ಎಂಬ ಗ್ರಾಮದಲ್ಲಿ ಘಟನೆ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ವ್ಯಾಪ್ತಿಯಲ್ಲಿರುವ ಕಳಕೋಡು ಮೇಗಲಮಕ್ಕಿ ಸಮೀಪದ ಮನುಕುಂಬ್ರಿ ಎಂಬ ಗ್ರಾಮದಲ್ಲಿ ಗಿರಿಜನರೇ ಹೆಚ್ಚಾಗಿ ವಾಸಿಸುತ್ತಾರೆ. ಕಳಸ ಪಟ್ಟಣದಿಂದ ಸುಮಾರು 15 ಕಿ.ಮೀ. ದೂರವಿರುವ ಈ ಗಿರಿಜನರ ಹಾಡಿಯಲ್ಲಿ ಸುಮಾರು 50 ವರ್ಷದ ಶಾರದಮ್ಮ ಎಂಬ ಮಹಿಳೆ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು.
ಮಳೆ ಬಂದರೆ ಶೃಂಗೇರಿಯ ಹೆಮ್ಮಿಗೆ ಗ್ರಾಮದ ಹೊರ ಜಗತ್ತಿನ ಸಂಪರ್ಕವೇ ಬಂದ್
ಹೆಗಲ ಮೇಲೆ ಹೊತ್ತು ಆಸ್ಪತ್ರೆ ಸೇರಿಸಿದ ಕುಟುಂಬಸ್ಥರು
ಗ್ರಾಮಕ್ಕೆ ಹಿಂದಿನಿಂದಲೂ ಯಾವುದೇ ರಸ್ತೆ ಸಂಪರ್ಕ ಇಲ್ಲದ ಕಾರಣ ಯಾವುದೇ ವಾಹನಗಳು ಬರಲು ಸಾಧ್ಯವಿಲ್ಲ. ಹೀಗಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದ ಶಾರದಮ್ಮ ಅವರ ಕುಟುಂಬಸ್ಥರು ಅವರನ್ನು ಕಂಬಳಿಯಲ್ಲಿ ಸುತ್ತಿಕೊಂಡು ಕಂಬವೊಂದಕ್ಕೆ ಹಗ್ಗದಲ್ಲಿ ಕಟ್ಟಿ ಹೊತ್ತುಕೊಂಡು ಬಂದು ಕಳಸ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು.
ಮೃತದೇಹವನ್ನು ಕಂಬಕ್ಕೆ ಕಟ್ಟಿಕೊಂಡು ಬಂದರು
ಆದರೆ ಕಳೆದ ಮೂರು ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಮಹಿಳೆ ವೈದ್ಯರ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಸಂಜೆ ವೇಳೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದರು. ಮಹಿಳೆಯ ಮೃತದೇಹವನ್ನು ಕಳಸ ಪಟ್ಟಣದಿಂದ ಕಳಸಕೋಡು ಗ್ರಾಮದವರೆಗೆ ಆಂಬುಲೆನ್ಸ್ ನಲ್ಲಿ ಕೊಂಡೊಯ್ಯಲಾಗಿದೆ. ಆದರೆ ಅಲ್ಲಿಂದ ರಸ್ತೆ ಸಂಪರ್ಕವಿಲ್ಲದ ಕಾರಣ ಕುಟುಂಬಸ್ಥರು ಕಳಕೋಡು ಗ್ರಾಮದಿಂದ ಮಹಿಳೆಯ ಶವವನ್ನು ಕಂಬಳಿಯಲ್ಲಿ ಸುತ್ತಿ ಕಂಬಕ್ಕೆ ಕಟ್ಟಿಕೊಂಡು ಮನುಕುಂಬ್ರಿ ಗ್ರಾಮಕ್ಕೆ ಹೊತ್ತು ಸಾಗಿಸಿದ್ದಾರೆಂದು ತಿಳಿದು ಬಂದಿದೆ.
ವಿಮ್ಸ್ ಅವ್ಯವಸ್ಥೆ; ಕೋಲ್ಡ್ ಸ್ಟೋರೇಜ್ ಇಲ್ಲದೇ ಶವಗಳು ಅಸ್ತವ್ಯಸ್ತ
ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ
ಮನುಕುಂಬ್ರಿ ಗ್ರಾಮದಲ್ಲಿನ ಗಿರಿಜನ ಹಾಡಿ ಕಳೆದ ಅನೇಕ ವರ್ಷಗಳಿಂದ ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿದೆ. ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವಂತೆ ನಿವಾಸಿಗಳು ಅನೇಕ ಬಾರಿ ಸಂಬಂಧಿಸಿದ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರೂ ಇದುವರೆಗೂ ರಸ್ತೆ ಸಂಪರ್ಕದ ಭಾಗ್ಯ ಈ ಗ್ರಾಮದ ಜನರಿಗೆ ದಕ್ಕಿಲ್ಲ.
ಮೃತದೇಹವನ್ನು ಮರದ ಕಂಬಕ್ಕೆ ಕಟ್ಟಿಕೊಂಡು ಹೊತ್ತು ಸಾಗಿದ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದ್ದು, ಈ ಭಾಗದ ಶಾಸಕರು, ಸಚಿವರು, ಜನಪ್ರತನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆದಿವಾಸಿಗಳು ವಾಸಿಸುವ ಕುಗ್ರಾಮಗಳಿಗೆ ರಸ್ತೆಯಂತಹ ಮೂಲ ಸೌಕರ್ಯವನ್ನು ಕಲ್ಪಿಸದ ಸರ್ಕಾರಕ್ಕೆ ಈ ಘಟನೆ ನಿಜಕ್ಕೂ ತಲೆತಗ್ಗಿಸುವಂತಹ ವಿಚಾರ ಎಂದು ಜಿಲ್ಲೆಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.