ಚಿಕಿತ್ಸೆಗಾಗಿ ಮಹಿಳೆಯನ್ನು 10ಕಿ.ಮೀ ಹೊತ್ತು ತಂದ ಗ್ರಾಮಸ್ಥರು
ಚಿಕ್ಕಮಗಳೂರು, ಆಗಸ್ಟ್ 9: ವರುಣನ ಆರ್ಭಟಕ್ಕೆ ನಲುಗಿರುವ ಕಾಫಿ ನಾಡಿನಲ್ಲಿ ಇದೀಗ ಜನರ ಕಷ್ಟ ನಷ್ಟಗಳಿಗೆ ಬರವಿಲ್ಲ. ಮನೆ, ಆಸ್ತಿಪಾಸ್ತಿ ಕಳೆದುಕೊಂಡು ಜನರು ನಿರ್ಗತಿಕರಾಗಿ ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ನೆರವೂ ಸಿಗದೇ ಪರದಾಡುತ್ತಿದ್ದಾರೆ.
ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿನ ಕಲ್ಕೋಡು ಗ್ರಾಮದಲ್ಲೂ ಮನೆಯೊಂದು ನೆಲಕ್ಕೆ ಉರುಳಿದ್ದು, ಅದರಲ್ಲಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರು.
ಮಳೆಯಲ್ಲಿ ಕಾರು ನಿಯಂತ್ರಣ ತಪ್ಪಿ ಚಿಕ್ಕಮಗಳೂರಿನಲ್ಲಿ ಎರಡು ಕಡೆ ಅಪಘಾತ; ಒಂದು ಸಾವು
ಕಳಸದಿಂದ 10 ಕಿ.ಮೀ ದೂರದಲ್ಲಿರುವ ಕಲ್ಕೋಡು ಗ್ರಾಮದಲ್ಲಿ ಮನೆ ಕುಸಿದು ಸರೋಜ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರು. ಸಮೀಪ ಯಾವುದೇ ಆಸ್ಪತ್ರೆಗಳೂ ಇರಲಿಲ್ಲ. ಜೊತೆಗೆ ರಸ್ತೆ ಸಂಪರ್ಕವೂ ಸಂಪೂರ್ಣ ಕಡಿತವಾಗಿದೆ. ಹೀಗಾಗಿ ಏನು ಮಾಡುವುದೆಂದು ತೋಚದೆ ಗ್ರಾಮಸ್ಥರು ಗಾಬರಿಯಾಗಿದ್ದರು.
ಕ್ಷಣ ಕ್ಷಣಕ್ಕೂ ಏರುತ್ತಿದ್ದಾಳೆ ನೇತ್ರಾವತಿ, ತೀರದ ಮನೆಗಳ ಪಾಡೇನು?
ಆದರೆ ಹೀಗೇ ಕೂತು ಪ್ರಯೋಜನವಿಲ್ಲ ಎಂದು ಅರಿತ ಗ್ರಾಮಸ್ಥರು ತಾವೇ ಆಕೆಯನ್ನು ಹೊತ್ತುಕೊಂಡು ಹೋಗಲು ಮುಂದಾಗಿದ್ದಾರೆ. ಸುಮಾರು ಹತ್ತು ಮಂದಿ ಗಳಕ್ಕೆ ಬಟ್ಟೆ ಕಟ್ಟಿ, ಅದರಲ್ಲಿ ಆಕೆಯನ್ನು ಮಲಗಿಸಿಕೊಂಡು ಚಿಕಿತ್ಸೆಗಾಗಿ 10 ಕಿಲೋ ಮೀಟರ್ ದೂರವಿರುವ ಕಳಸ ಆಸ್ಪತ್ರೆಗೆ ಹೊತ್ತುಕೊಂಡು ಬಂದಿದ್ದಾರೆ. ಕೊನೆಗೂ ಆಕೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯುವಂತೆ ಮಾಡಿದ್ದಾರೆ.