ವಿಡಿಯೋ; ತರೀಕೆರೆಯಲ್ಲಿ ರಾತ್ರಿ ಮನೆ ಬಾಗಿಲಿಗೇ ಬಂತು ಚಿರತೆ
ಚಿಕ್ಕಮಗಳೂರು, ಫೆಬ್ರವರಿ 19: ಈಗೀಗ ಕಾಡಂಚಿನ ಗ್ರಾಮಗಳಲ್ಲಿ, ಹೊಲ, ಜಮೀನಿನ ಕಡೆಗಳಲ್ಲಿ ಚಿರತೆ, ಹುಲಿ, ಆನೆಯಂಥ ಕಾಡುಪ್ರಾಣಿಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈ ಕಾಡುಪ್ರಾಣಿಗಳಿಂದ ದಾಳಿಗೆ ತುತ್ತಾಗಿ ಸಾಯುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಚಿರತೆಯೊಂದು ಮನೆ ಬಾಗಿಲಿಗೇ ಬಂದಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯ ದಿಗಿಲು ಹುಟ್ಟಿಸುವಂತಿದೆ.
ಈಚೆಗೆ ಚಿಕ್ಕಮಗಳೂರಿನ ತರೀಕೆರೆ ತಾಲ್ಲೂಕಿನ ಎ. ರಂಗಾಪುರ ಗ್ರಾಮದಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು. ಹಲವು ದಿನಗಳಿಂದ ಈ ಚಿರತೆ ಓಡಾಡುತ್ತಿದ್ದುದನ್ನು ನೋಡಿದ್ದ ಗ್ರಾಮಸ್ಥರು ಭಯಭೀತರಾಗಿದ್ದರು. ಚಿರತೆ ಕಂಡಾಗಿನಿಂದ ಗ್ರಾಮಸ್ಥರು ಹೊರಗೆ ಓಡಾಡಲೂ ಭಯಪಡುತ್ತಿದ್ದರು. ಇದನ್ನು ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿಯನ್ನೂ ಮಾಡಿದ್ದರು.
ಇದೀಗ ಚಿರತೆ ಮನೆಯ ಬಾಗಿಲಿಗೇ ಬಂದು, ಮನೆಯ ಸುತ್ತ ಓಡಾಡಿದೆ. ಆಹಾರ ಅರಸಿಕೊಂಡು ಚಿರತೆ ರಾತ್ರಿ ಸಮಯ ಮನೆ ಬಳಿ ಬಂದಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ದಿಗಿಲು ಹುಟ್ಟಿಸಿದೆ. ಚಿರತೆ ಮನೆಯ ಹತ್ತಿರ ಬಂದಿದ್ದು, ಅದರ ಶಬ್ದ ಕೇಳಿ, ಮನೆಯವರು ಕೂಗಲು ಆರಂಭಿಸಿದ್ದಾರೆ. ಕೂಗಾಟ ಕೇಳುತ್ತಿದ್ದಂತೆ ಅಲ್ಲಿಂದ ಚಿರತೆ ಕಾಲ್ಕಿತ್ತಿದೆ. ಈ ದೃಶ್ಯಗಳೆಲ್ಲವೂ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
Oneindia Kannada on Twitter
ಚಿಕ್ಕಮಗಳೂರಿನ ತರಿಕೆರೆಯಲ್ಲಿ ರಾತ್ರಿ ಸಮಯ ಚಿರತೆಯೊಂದು ಮನೆ ಬಳಿ ಸುಳಿದಾಡಿರುವ ದೃಶ್ಯ ಸಿಸಿ ಟಿ ವಿ ಯಲ್ಲಿ ಸೆರೆಯಾಗಿದೆ. #CCTVfootage | #Chikmagalur https://t.co/w7BKpNutHN