ಮಳೆ ಬಂದರೆ ಮನೆಗಳಲ್ಲೇ ಕೆಂಡ ಹಾಯುವ ಉಗ್ಗೇಹಳ್ಳಿ ಜನರು
ಚಿಕ್ಕಮಗಳೂರು, ಸೆಪ್ಟೆಂಬರ್ 11: ಮಳೆಗಾಲದಲ್ಲಿ ಈ ಗ್ರಾಮಕ್ಕೆ ಬೆಂಕಿಯೇ ಜೀವಾಳ. ಬೆಂಕಿ ಇಲ್ಲದೇ ಅವರಿಗೆ ಬದುಕೇ ಇಲ್ಲ. ಮಳೆಯಾಗುವ ಮುನ್ನ ಮಲೆನಾಡಿಗರು ಆಹಾರ ಧಾನ್ಯ ಸಂಗ್ರಹಿಸಿಟ್ಟರೆ, ಈ ಗ್ರಾಮದ ಜನ ಸೌದೆ ಶೇಖರಿಸಿಡುತ್ತಾರೆ. ಸುತ್ತಲೂ ಮಳೆ, ಮನೆಯೊಳಗೆ ಮಾತ್ರ ಬಿಸಿಯ ಧಗೆ-ಹೊಗೆ. ಸರ್ಕಾರಕ್ಕೆ ಈ ಗ್ರಾಮವೆಂದರೆ ಹಗೆ. ಹೇಮಾವತಿಗೆ ಆಟ, ಜನರಿಗೆ ಪ್ರಾಣ ಸಂಕಟ.ಇವರ ಆತಂಕದ ಬದುಕಿಗಿದೆ ದಶಕಗಳ ಇತಿಹಾಸ.
ಕೊಡಗಿನ ಜನರ ನೆಮ್ಮದಿ ಕಸಿಯುತ್ತಿರುವ ಈ ಮಹಾಮಳೆ!
ಬಿರುಕು ಬಿಟ್ಟ ಗೋಡೆಗಳು, ಶೀತದಿಂದ ಈಗ್ಲೋ ಆಗ್ಲೋ ಅನ್ನುವಂತಿರುವ ಮನೆಗಳು. ಮೇಲಿಂದ ಮಳೆಯಬ್ಬರ. ಮಳೆ ದೇವನ ಕಣ್ಣು ಉರಿಯುವಂತೆ ಮನೆಯೊಳಗಿಂದ ಹೊಗೆಯಬ್ಬರ. ಮನೆಯೊಳಗೆ ಹೀಗೆ ಕೆಂಡ ಹರಡದಿದ್ದರೆ ಇವರಿಗೆ ಬದುಕೇ ಇಲ್ಲ. ಇಂಥ ಪರಿಸ್ಥಿತಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಉಗ್ಗೇಹಳ್ಳಿ ದಲಿತ ಕುಟುಂಬಗಳದ್ದು.
ಮಳೆಗಾಲದಲ್ಲಿ ಮನೆಯೊಳಗೆ ಬೆಂಕಿ ಕಡ್ಡಾಯ
ಹೇಮಾವತಿ ನದಿ ತಟದಲ್ಲಿರುವ ಈ ಗ್ರಾಮದಲ್ಲಿ 150ಕ್ಕೂ ಹೆಚ್ಚು ದಲಿತ ಕುಟುಂಬಗಳಿವೆ. ಪ್ರತಿ ಮಳೆಗಾಲದಲ್ಲೂ ಹೇಮೆ ಈ ಗ್ರಾಮದೊಳಗೆ ಹರಿಯುತ್ತಾಳೆ. ಈ ಸಮಯದಲ್ಲಿ ಮನೆಯ ಗೋಡೆ ಹಾಗೂ ನೆಲದ ಶೀತವನ್ನು ಅರಗಿಸಿಕೊಳ್ಳುವುದು ಅಸಾಧ್ಯ. ಅದಕ್ಕಾಗಿ ಮಳೆಗಾಲದಲ್ಲಿ ಮನೆ ತುಂಬಾ ಹೀಗೆ ಬೆಂಕಿ ಹರಡುತ್ತಾರೆ. ಭೂಮಿಯ ಉಷ್ಣ ಹೆಚ್ಚಾದ ಮೇಲೆ ಮಲಗುತ್ತಾರೆ. ಕಳೆದ ಐವತ್ತು ವರ್ಷಗಳಿಂದ ಮಳೆ ಯಥೇಚ್ಛವಾಗಿ ಸುರಿಯುವ ವರ್ಷಗಳಲ್ಲೆಲ್ಲಾ ಹೀಗೇ ಮಾಡುತ್ತಾ ಬಂದಿದ್ದಾರೆ.
ಮಳೆ ಬಂದರೆ ಅನಾರೋಗ್ಯ ಖಚಿತ
ಗ್ರಾಮವನ್ನು ಸ್ಥಳಾಂತರಿಸಿ ಎಂದು ಮಾಡಿದ ಮನವಿ ಪತ್ರಗಳ ಕಥೆಯೂ ಹೊಗೆಯೇ ಆಗಿದೆ ಅಂತಾರೆ ಗ್ರಾಮದ ಮಹಿಳೆ ಗೀತಾ. ಇನ್ನು ಮಳೆ ಹೆಚ್ಚಾಗಿ ಸುರಿದರೆ ಈ ಗ್ರಾಮವೇ ಜಲಾವೃತಗೊಳ್ಳುತ್ತೆ. ನೀರು ಮನೆಯೊಳಗೂ ಬರುತ್ತದೆ, ಮನೆಯೊಳಗಿಂದಲೂ ಉಕ್ಕುತ್ತದೆ. ಪ್ರತಿ ಮಳೆಗಾಲದಲ್ಲೂ ಇವರು ಭಯದಿಂದ ರಾತ್ರಿ ಕಳೆಯುತ್ತಾರೆ. ನೆಮ್ಮದಿಯ ನಿದ್ದೆಯೂ ಇಲ್ಲದಂತೆ. ಮಳೆಗಾಲದಲ್ಲಿ ಗ್ರಾಮಕ್ಕೆ ಹತ್ತಾರು ತೊಂದರೆ ಜೊತೆ ಅನಾರೋಗ್ಯ ಉಚಿತ. ಮಳೆಗಾಲ ಬಂತೆಂದರೆ ಇಲ್ಲಿನವರಿಗೆ ಶೀತ, ಜ್ವರ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತವೆ. ಆಸ್ಪತ್ರೆ ಎಡತಾಕೋದು ಮಾಮೂಲಿಯಾಗುತ್ತೆ.
ಮಳೆ ನಿಲ್ಲಲೆಂದು ಋಷ್ಯಶೃಂಗನ ಮೊರೆ ಹೋದ ಮಲೆನಾಡಿಗರು
ಸರ್ಕಾರಕ್ಕೆ ಕೇಳುತ್ತಿಲ್ಲ ಇವರ ಕೂಗು
ಹೀಗೆ ಕಳೆದ ನಾಲ್ಕೈದು ದಶಕಗಳಿಂದ ಹೀಗೆ ಜೀವವನ್ನು ಕೈಯಲ್ಲಿಟ್ಕೊಂಡು ಬದುಕಿತ್ತಿರುವ ಇವರು ನಮ್ಮನ್ನು ಸ್ಥಳಾಂತರ ಮಾಡಿ ಎಂದು ಮನವಿ ಮಾಡಿಕೊಂಡಿದ್ದರೂ ಇವರ ನೋವಿನ ಕೂಗು ಸರ್ಕಾರಕ್ಕೆ ಕೇಳಿಲ್ಲ. ಮಳೆಗಾಲ ಬಂತೆಂದರೆ ಇವರು ಮಳೆ ಹಾಗೂ ಹೇಮಾವತಿ ನದಿಯನ್ನು ಎದುರಿಸಲು ಸರ್ವ ರೀತಿಯಲ್ಲೂ ಸನ್ನದ್ಧರಾಗಿರುತ್ತಾರೆ. ಮಳೆ ಹೆಚ್ಚಾದ ವರ್ಷದಲ್ಲೆಲ್ಲಾ ಈ ರೀತಿಯ ಬದುಕು ಇವರಿಗೆ ನಿಶ್ಚಿತ.
ಬೆಂಕಿಯೇ ಬದುಕಿಗೆ ಆಸರೆ
ಮಳೆಯಲ್ಲಿ ಬೆಂಕಿಯನ್ನೇ ಅವಲಂಬಿಸಿರುವ ಇವರನ್ನು ಅಗ್ನಿ ಪುತ್ರರು ಅಂದರೆ ತಪ್ಪಿಲ್ಲ. ಮಳೆಗಾಲದಲ್ಲಿ ಮಲೆನಾಡಲ್ಲಿ ಇಂತಹಾ ಜೀವನ ಮಾಮೂಲಿ. ಆದರೆ, ಸರ್ಕಾರವೂ ಇವರನ್ನು ಸ್ಥಳಾಂತರ ಮಾಡಲು ಕ್ರಮ ತೆಗೆದುಕೊಳ್ಳದೇ ಇರುವುದು ದುರ್ದೈವ. ಇವರ ನೋವಿಗೆ ದನಿಯಾಗಬೇಕಿದ್ದ ರಾಜಕೀಯ ದಣಿಗಳು ಓಟ್ ಕೇಳೋಕಷ್ಟೆ ಭೇಟಿ ನೀಡುವುದು. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತವೂ ನೋವಿಗೆ ಸ್ಪಂದಿಸಿಲ್ಲ ಅನ್ನೋದು ಸ್ಥಳೀಯರ ದೂರು.