ತರೀಕೆರೆಯ ಇಬ್ಬರಿಗೆ ಕೊರೊನಾ ನೆಗೆಟಿವ್; ಮರೆಯಾಯಿತು ಆತಂಕ
ಚಿಕ್ಕಮಗಳೂರು, ಮೇ 19: ತೀರ್ಥಹಳ್ಳಿಯ ಪೆಶೆಂಟ್ ನಂ. 995ನೇ ವ್ಯಕ್ತಿಯ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಕ್ವಾರಂಟೈನ್ ನಲ್ಲಿದ್ದ ತರೀಕೆರೆ ಮೂಲದ ಇಬ್ಬರ ವರದಿ ನೆಗೆಟಿವ್ ಬಂದಿದೆ. ಈ ಮೂಲಕ ಕಾಫಿನಾಡಿನ ಜನತೆಯಲ್ಲಿ ಮೂಡಿದ್ದ ಆತಂಕ ಮರೆಯಾಗಿದೆ.
ತೀರ್ಥಹಳ್ಳಿ ಮೂಲದ ಕೊರೊನಾ ಸೋಂಕಿತ ವ್ಯಕ್ತಿಯನ್ನು ತರೀಕೆರೆ ಪಟ್ಟಣದ ಖಾಜಿ ಬಿದಿಯ ಲಾರಿ ಡ್ರೈವರ್ ಹಾಗೂ ಕಂಡಕ್ಟರ್ ಮುಂಬೈಯಿಂದ ಲಾರಿಯಲ್ಲಿ ಕರೆದುಕೊಂಡು ಬಂದಿದ್ದರು. ಆತನ ಗಂಟಲು ದ್ರವ ಹಾಗೂ ರಕ್ತವನ್ನು ಪರಿಶೀಲನೆ ನಡೆಸಿದಾಗ ಅವನಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಹೀಗಾಗಿ ಆತನ ಸಂಪರ್ಕದಲ್ಲಿದ್ದ ತರೀಕೆರೆ ಪಟ್ಟಣದ ಖಾಜಿ ಬೀದಿಯಲ್ಲಿ ವಾಸವಿದ್ದ ಲಾರಿ ಡ್ರೈವರ್ ಹಾಗೂ ಕಂಡಕ್ಟರ್ ಅವರನ್ನು ಕಳೆದ ಶನಿವಾರ ಕ್ವಾರಂಟೈನ್ ಮಾಡಿ, ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಪರೀಕ್ಷೆಗೆ ಕಳುಹಿಸಲಾಗಿತ್ತು.
ಹಾಸನದಲ್ಲಿ ಕೊರೊನಾ; ಪಕ್ಕದ ಚಿಕ್ಕಮಗಳೂರಿನ ರಸ್ತೆ ಬಂದ್
ಈ ಇಬ್ಬರೂ ರೋಗಿಯ ಸಂಪರ್ಕದಲ್ಲಿದ್ದ ಕಾರಣ ತರೀಕೆರೆ ಪಟ್ಟಣದ ಖಾಜಿ ಬೀದಿಯನ್ನು ಕಳೆದ ನಾಲ್ಕು ದಿನಗಳಿಂದ ಸೀಲ್ ಡೌನ್ ಮಾಡಲಾಗಿತ್ತು. ಇನ್ನು ಈ ಇಬ್ಬರ ಪ್ರಕರಣದಿಂದ ಗ್ರೀನ್ ಝೋನ್ ನಲ್ಲಿದ್ದ ಚಿಕ್ಕಮಗಳೂರಿನಲ್ಲಿ ಆತಂಕ ಮನೆ ಮಾಡಿತ್ತು. ಅದರಲ್ಲೂ ತರೀಕೆರೆ ಪಟ್ಟಣದಲ್ಲಿ ಜನರ ಭಯಭೀತಗೊಂಡಿದ್ದರು. ಆದರೆ ನಿನ್ನೆ ಪರೀಕ್ಷೆಯ ವರದಿ ನೆಗೆಟಿವ್ ಬಂದ ಕಾರಣ ಕಾಫಿನಾಡಿನ ಜನರ ಆತಂಕ ಮರೆಯಾಗಿದೆ.