ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಉರುಳಿದ ಮರ; ವಾಹನ ಸಂಚಾರ ಬಂದ್
ಚಿಕ್ಕಮಗಳೂರು, ಆಗಸ್ಟ್ 6: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮಂಗಳವಾರ ಚಾರ್ಮಾಡಿ ಘಾಟ್ ನಲ್ಲಿ ಸಂಚಾರ ಬಂದ್ ಆಗಿದೆ. ಚಾರ್ಮಾಡಿ ಘಾಟ್ ನಲ್ಲಿ ರಸ್ತೆಗೆ ಬೃಹತ್ ಗಾತ್ರದ ಮರವೊಂದು ಉರುಳಿದ ಪರಿಣಾಮವಾಗಿ ಇಂಥ ಪರಿಸ್ಥಿತಿ ಸೃಷ್ಟಿ ಆಗಿದೆ.
ಕರ್ನಾಟಕದ ಮಹಾಮಳೆ, ಚಿತ್ರಗಳಲ್ಲಿ ನೋಡಿ
ಚಾರ್ಮಾಡಿಘಾಟ್ ನ 10ನೇ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ಸಂಚಾರ ಬಂದ್ ಆದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ಕಿಲೋಮೀಟರ್ ಗಳ ಉದ್ದಕ್ಕೂ ಸಾಲುಗಟ್ಟಿ ವಾಹನಗಳು ನಿಂತಿವೆ. ಇನ್ನು ಸತತವಾಗಿ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ವಾಹನ ಸವಾರರು ಹೈರಾಣಾಗಿದ್ದಾರೆ.
ಸ್ಥಳಕ್ಕೆ ಬಂದ ಸಮಾಜಸೇವಕ ಅಸನಬ್ಬ ಅವರ ಕಾರಿನ ಮೇಲೆ ಮತ್ತೊಂದು ಮರ ಬಿದ್ದಿದೆ. ಚಾರ್ಮಾಡಿ ಘಾಟಿಯಲ್ಲಿ ಯಾವುದೇ ಸಮಸ್ಯೆ ಬಂದರೂ ಸ್ಥಳಕ್ಕೆ ಮೊದಲು ಬರುವ ವ್ಯಕ್ತಿ ಅಸನಬ್ಬ. ಮರ ತೆರವುಗೊಳಿಸಲು ಸ್ಥಳಕ್ಕೆ ಬಂದ ಅಸನಬ್ಬ ಕಾರು ಮೇಲೆ ಬಿದ್ದ ಮತ್ತೊಂದು ಮರ ಬಿದ್ದಿದೆ. ಅಸನಬ್ಬ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯಲ್ಲೂ ಚಾರ್ಮಾಡಿ ಘಾಟ್ ಇದೆ.